ದ್ರೌಪದಿಗೆ ಗೌರವ, ಸಿನ್ಹಾಗೆ ಬೆಂಬಲ- ಎಎಪಿ ಬ್ಯಾಲೆನ್ಸ್ ರಾಜಕಾರಣ
ನವದೆಹಲಿ, ಜುಲೈ 17: ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿದೆ. ನಾಳೆ ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಪರ ಆಮ್ ಆದ್ಮಿಯ ಶಾಸಕರು ಮತ್ತು ಸಂಸದರು ಮತ ಚಲಾಯಿಸಲಿದ್ದಾರೆ.
ಕಳೆದ ಒಂದು ತಿಂಗಳಿಂದಲೂ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ಯಾರಿಗೆ ಬೆಂಬಲ ನೀಡುತ್ತದೆ ಎಂಬ ನಿರ್ಧಾರವನ್ನು ನಿಗೂಢವಾಗಿಯೇ ಇಟ್ಟಿದ್ದರು. ಯಶವಂತ್ ಸಿನ್ಹಾರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದ ಸಂದರ್ಭದಲ್ಲಿ ಎಎಪಿ ಬೆಂಬಲವೂ ಇದೆ ಎಂದು ಶರದ್ ಪವಾರ್ ಹೇಳಿದ್ದರು. ಆಗಲೂ ಅರವಿಂದ್ ಕೇಜ್ರಿವಾಲ್ ಮೌನವಾಗಿದ್ದರು.
ಯಶವಂತ್ ಸಿನ್ಹಾ ಪಂಜಾಬ್ಗೆ ಭೇಟಿ ನೀಡಿ ಮತ ಯಾಚಿಸುವ ವೇಳೆ ಯಾವ ಎಎಪಿ ಶಾಸಕರೂ ಅವರನ್ನು ಭೇಟಿಯಾಗಲಿಲ್ಲ. ಇದರಿಂದ ಕೇಜ್ರಿವಾಲ್ ಚಿತ್ತ ಎತ್ತ ಕಡೆ ಇದೆ ಎಂಬ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಒಂದು ತಿಂಗಳು ಆ ರೀತಿಯ ಸಸ್ಪೆನ್ಸ್ ಉಳಿಸಿಕೊಂಡು ಬಂದಿದ್ದ ಅರವಿಂದ್ ಕೇಜ್ರಿವಾಲ್, ನಿನ್ನೆ ಶನಿವಾರ ಅವರು ಯಶವಂತ್ ಸಿನ್ಹಾಗೆ ತಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು.

ಎಎಪಿಗೆ ಉಭಯಸಂಕಟ
ಈ ಬಾರಿಯ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಒಂದು ರೀತಿಯಲ್ಲಿ ಉಭಯ ಸಂಕಟದ ಸ್ಥಿತಿ. ದೆಹಲಿ ಬಳಿಕ ಪಂಜಾಬ್ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿರುವ ಎಎಪಿ ಈಗ ಬೇರೆ ರಾಜ್ಯಗಳಲ್ಲೂ ತನ್ನ ಬಲ ವೃದ್ಧಿಸಿಕೊಳ್ಳಲು ಬಹಳ ವಾಸ್ತವ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇಂಥ ಹೊತ್ತಿನಲ್ಲಿ ದ್ರೌಪದಿ ಮುರ್ಮು ಅವರನ್ನು ವಿರೋಧಿಸಿದರೆ ಬುಡಕಟ್ಟು ಸಮುದಾಯದವರು ಮುನಿಸಿಕೊಳ್ಳಬಹುದು ಎಂಬ ಭಯ ಆ ಪಕ್ಷಕ್ಕಿದೆ.
ಹಾಗೆಯೇ, ದ್ರೌಪದಿ ಮುರ್ಮುಗೆ ಬೆಂಬಲ ಕೊಟ್ಟರೆ ಎಎಪಿ ಬಿಜೆಪಿಯ ಬಿ ಟೀಮ್ ಎಂಬ ಟೀಕೆ ನಿಜವೇನೋ ಎಂದು ಭಾವಿಸಿಬಿಡಬಹುದು. ಈ ಅನುಮಾನ ದೂರ ಮಾಡಲಾದರೂ ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾಗೆ ಬೆಂಬಲ ಕೊಡಲು ಎಎಪಿ ನಿರ್ಧರಿಸಿರುವ ಸಾಧ್ಯತೆ ಇದೆ.
ಹೀಗಾಗಿ, "ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ" ಎಂದು ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದಂತಿದೆ.
ಮಮತಾ ನಾಯಕತ್ವದಿಂದ ಎಎಪಿ ದೂರ
ಆಮ್ ಆದ್ಮಿ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಭಾರತದಲ್ಲಿ ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟರೆ ಬೇರೆ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಎಎಪಿಯೇ. ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಆಮ್ ಆದ್ಮಿ ಮೇಯರ್ ಪಟ್ಟ ಗಿಟ್ಟಿಸಿ ಸಾಮ್ರಾಜ್ಯ ವಿಸ್ತರಣೆಯ ರಣಕಹಳೆ ಊದಿದೆ.

ಈ ವರ್ಷ ಹಿಮಾಚಲಪ್ರದೇಶ ಮತ್ತ ಗುಜರಾತ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಎಪಿ ನಿಲ್ಲಲು ನಿರ್ಧರಿಸಿದೆ. ಇನ್ನೂ ಅನೇಕ ರಾಜ್ಯಗಳಲ್ಲಿ ಆ ಪಕ್ಷ ಬಹಳ ಗಂಭೀರವಾಗಿ ಮತ್ತು ಸದ್ದುಗದ್ದಲ ಇಲ್ಲದೇ ಗ್ರೌಂಡ್ ವರ್ಕ್ ನಡೆಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನವನ್ನು ತುಂಬಲು ಎಎಪಿ ಸ್ಕೆಚ್ ಹಾಕಿದಂತಿದೆ.
ಇದೀಗ ವಿಪಕ್ಷಗಳ ನಾಯಕತ್ವ ವಹಿಸಲು ಕೇಜ್ರಿವಾಲ್ ಜೊತೆ ಪೈಪೋಟಿಯಲ್ಲಿರುವವರಲ್ಲಿ ಮಮತಾ ಬ್ಯಾನರ್ಜಿ ಪ್ರಮುಖರು. ಇವರೂ ಕೂಡ ಟಿಎಂಸಿಯನ್ನು ಬೇರೆ ರಾಜ್ಯಗಳಲ್ಲಿ ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಎಎಪಿಗೆ ಸಿಕ್ಕಷ್ಟು ಬೆಂಬಲ ಟಿಎಂಸಿಗೆ ಸಿಗುವುದು ಕಷ್ಟ.
ಹಾಗೆಯೇ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳಿಂದ ಒಮ್ಮತದ ಅಭ್ಯರ್ಥಿ ಆಯ್ಕೆ ಸಂಬಂಧ ಮಮತಾ ಬ್ಯಾನರ್ಜಿ ಅವರೇ ವಿವಿಧ ಪಕ್ಷಗಳನ್ನು ಸಂಪರ್ಕಿಸಿ ಸಭೆಗಳನ್ನು ನಡೆಸಿದ್ದರು. ಎಎಪಿ, ಬಿಎಸ್ಪಿ ಮುಂತಾದ ಕೆಲ ಪಕ್ಷಗಳನ್ನು ಮಮತಾ ದೂರ ಇಟ್ಟಿದ್ದರು.
ಎಎಪಿ ಬೆಂಬಲ ಸಿಕ್ಕರೆ ಸಿನ್ಹಾ ಮಾನ ಉಳಿದೀತು
ರಾಷ್ಟ್ರಪತಿ ಚುನಾವಣೆಯಲ್ಲಿ ಸದ್ಯದ ಬಲವನ್ನು ಗಮನಿಸಿದರೆ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಗೆಲುವು ಸಿಗುವುದರಲ್ಲಿ ಸಂಶಯ ಇಲ್ಲ. ಅವರು 6.60 ಲಕ್ಷ ಮತಗಳನ್ನು ಪಡೆಯುವ ನಿರೀಕ್ಷೆ ಇದೆ. ಯಶವಂತ್ ಸಿನ್ಹಾ ಸುಮಾರು 4 ಲಕ್ಷ ಮತಗಳನ್ನು ಪಡೆಯಬಹುದು, ಅದೂ ಎಎಪಿಯ ಬೆಂಬಲ ಸಿಕ್ಕರೆ ಮಾತ್ರ.
ಆಮ್ ಆದ್ಮಿ ಪಕ್ಷ ಎರಡು ರಾಜ್ಯಗಳಿಂದ 10 ರಾಜ್ಯಸಭಾ ಸದಸ್ಯರು, 15 ಶಾಸಕರನ್ನು ಹೊಂದಿದೆ. ಗೋವಾದಲ್ಲೂ ಇಬ್ಬರು ಶಾಸಕರಿದ್ದಾರೆ. ಏಪ್ರಿಲ್ 18, ಸೋಮವಾರ ರಾಷ್ಟ್ರಪತಿ ಚುನಾವಣೆ ಇದೆ. ಏಪ್ರಿಲ್ 21ರಂದು ಫಲಿತಾಂಶ ಪ್ರಕಟವಾಗಲಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications