ಕೊರೊನಾ ವೈರಸ್ ಅಲ್ಲ ಭಾರತಕ್ಕೆ ಮಿಡತೆಗಳೇ ದೊಡ್ಡ ಸವಾಲು!
ನವದೆಹಲಿ, ಮೇ.27: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಭಾರತದಲ್ಲೂ ಕೊವಿಡ್-19 ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷದ ಗಡಿ ದಾಟಿದ್ದು, ಇದರ ನಡುವೆ ಭಾರತೀಯರಿಗೆ ಹೊಸ ಸವಾಲು ಎದುರಾಗಿದೆ.
Recommended Video
ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದರೆ ಭಾರತದಲ್ಲಿ ಸರ್ಕಾರವು ಮಿಡತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತಾ ವಾತಾವರಣ ನಿರ್ಮಾಣವಾಗಿದೆ. ವಲಸೆ ಬರುತ್ತಿರುವ ಮಿಡತೆಗಳು ದೇಶದಲ್ಲಿ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ.
ಮಿಡತೆ ದಾಳಿಗೆ ಉತ್ತರ ಭಾರತದ ಬಹುತೇಕ ರಾಜ್ಯಗಳು ತತ್ತರಿಸಿ ಹೋಗಿವೆ. ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳ 24 ಜಿಲ್ಲೆಗಳಲ್ಲಿನ ಸುಮಾರು 50,000 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆಯು ಮಿಡತೆಗಳ ಬಾಯಿಗೆ ಸಿಕ್ಕು ಖಾಲಿಯಾಗಿದೆ. ಅವಧಿ ಪೂರ್ವ ಮಿಡತೆ ದಾಳಿ ಭಾರತಕ್ಕೆ ಮತ್ತೊಂದು ಸವಾಲನ್ನು ತಂದೊಡ್ಡಿದೆ.

ದೇಶದಲ್ಲಿ ನಿರೀಕ್ಷೆಗಿಂತ ಮೊದಲು ದಾಳಿಯಿಟ್ಟವಾ ಮಿಡತೆಗಳು?
ಕೊರೊನಾ ವೈರಸ್ ಅಟ್ಟಹಾಸ ನಡೆಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮಿಡತೆ ದಾಳಿ ಕೂಡಾ ನಿರೀಕ್ಷೆಗಿಂತಲೂ ಮೊದಲೇ ನಡೆದಿದೆ ಎಂದು ಮಿಡತೆ ಎಚ್ಚರಿಕೆ ಸಂಸ್ಥೆ(ಎಲ್ ಡಬ್ಲ್ಯುಓ) ಡೆಪ್ಯುಟಿ ಡೈರೆಕ್ಟರ್ ಕೆ.ಎಲ್. ಗುರ್ಜರ್ ಹೇಳಿದ್ದಾರೆ. ಏಪ್ರಿಲ್.30ರ ಆಸುಪಾಸಿನಲ್ಲೇ ಭಾರತದಲ್ಲಿ ಮಿಡತೆಗಳ ದಾಳಿ ಶುರುವಿಟ್ಟುಕೊಂಡಿದ್ದು, ಇಂದಿಗೂ ಪಂಜಾಬ್ ಮತ್ತು ಮಧ್ಯಪ್ರದೇಶಗಳಲ್ಲಿನ ಐದು ಜಿಲ್ಲೆಗಳಲ್ಲಿ ಮಿಡತೆಗಳ ಹಾವಳಿ ನಿರಂತರವಾಗಿದೆ ಎಂದು ತಿಳಿಸಿದ್ದಾರೆ.

ಮಿಡತೆಗಳಲ್ಲೂ ನಾಲ್ಕು ವಿಧಗಳು
ಇನ್ನು, ಸಾಮಾನ್ಯವಾಗಿ ಮಿಡತೆಗಳಲ್ಲಿ ನಾಲ್ಕು ವಿಧಗಳು ಇರುತ್ತವೆ. ಮರುಭೂಮಿ ಮಿಡತೆ, ಮರ ಮಿಡತೆ, ಬಾಂಬೆ ಮಿಡತೆ ಹಾಗೂ ವಲಸೆ ಮಿಡತೆ. ಇದೀಗ ಭಾರತದಲ್ಲಿ ಮರುಭೂಮಿ ಮಿಡತೆಯು ಹಾವಳಿ ಎಬ್ಬಿಸುತ್ತಿದೆ. ದೇಶದಲ್ಲಿ ಅವಧಿಗೂ ಮುನ್ನ ಸುರಿದ ಮಳೆಯು ಮರುಭೂಮಿ ಮಿಡತೆಗಳ ಸಂತಾನೋತ್ಪತ್ತಿಗೆ ಹೆಚ್ಚು ಸಹಕಾರಿಯಾಗಿದ್ದು, ಅವಧಿಗೂ ಪೂರ್ವದಲ್ಲಿ ಮಿಡತೆ ದಾಳಿ ನಡೆಯಲು ಇದೊಂದು ಕಾರಣವಾಗಿದೆ ಎನ್ನುವುದು ತಜ್ಞರು ಅಭಿಪ್ರಾಯವಾಗಿದೆ.

35,000 ಜನರ ಆಹಾರ = ಒಂದು ಮಿಡತೆ ಸಮೂಹದ ಆಹಾರ
ಒಂದು ಮಿಡತೆ ಸಮೂಹದ ಆಹಾರ = 35,000 ಜನರ ಆಹಾರ ಎಂಬ ಸಾಲಿನ ಅರ್ಥವಿಷ್ಟೇ. 35,000 ಜನರ ಆಹಾರಕ್ಕೆ ಸಾಕಾಗುವಷ್ಟು ಬೆಳೆಯನ್ನು ಒಂದು ಮಿಡತೆಯ ಸಮೂಹವು ಒಂದೇ ದಿನದಲ್ಲಿ ತಿಂದು ಹಾಳು ಮಾಡುತ್ತದೆ ಎಂದರ್ಥ. ಕೊರೊನಾ ವೈರಸ್ ಭೀತಿಯಿಂದಾಗಿ ಆಹಾರ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದು, ಮಿಡತೆಗಳಿಗೂ ಆಹಾರ ಸಿಗುತ್ತಿಲ್ಲ. ಹೀಗಾಗಿ ಎಲೆ, ಹೂವು, ಹಣ್ಣು ಸೇರಿದಂತೆ ಹಸಿರು ತರಕಾರಿಗಳನ್ನು ಮಿಡತೆಗಳು ತಿನ್ನುತ್ತಿವೆ.

3 ರಾಜ್ಯಗಳು 27 ವರ್ಷಗಳಲ್ಲಿ ಹೀಗೆಲ್ಲ ಆಗಿರಲಿಲ್ಲ
ಕಳೆದ 27 ವರ್ಷಗಳಲ್ಲೇ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಇಷ್ಟೊಂದು ಪ್ರಮಾಣದ ಮಿಡತೆಗಳ ದಾಳಿಯನ್ನು ನೋಡಿರಲಿಲ್ಲ. ರಾಜಸ್ಥಾನದ 16, ಉತ್ತರ ಪ್ರದೇಶದ 17 ಹಾಗೂ ಮಧ್ಯ ಪ್ರದೇಶದ ಒಂದು ಜಿಲ್ಲೆಗಳಲ್ಲಿ ಮಿಡತೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ. ಇನ್ನು, ಒಂದು ಮಿಡತೆಯು ಕನಿಷ್ಠ ಒಂದು ದಿನಕ್ಕೆ 150 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಭಾರತದಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮಿಡತೆಗಳ ಅಟ್ಟಹಾಸ ಹೆಚ್ಚಾಗುವುದರಲ್ಲಿ ಪಾಕಿಸ್ತಾನದ ಅಸಹಕಾರವೂ ಕೂಡಾ ಒಂದು ರೀತಿಯಲ್ಲಿ ಕಾರಣ ಎಂದೆನಿಸುತ್ತದೆ.

ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ
ನೆರೆಯ ರಾಷ್ಟ್ರ ಪಾಕಿಸ್ತಾನ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಮಿಡತೆಗಳ ದಾಳಿಗೆ ತತ್ತರಿಸಿದೆ. ಕಳೆದ ಎರಡು ದಶಕಗಳನ್ನೇ ಮೀರಿಸುವ ಮಟ್ಟಿಗೆ ಈ ಬಾರಿ ಮಿಡತೆಗಳು ದಾಳಿ ನಡೆಸಿದ್ದು ಫೆಬ್ರವರಿ ತಿಂಗಳಿನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇನ್ನು, ಪಾಕಿಸ್ತಾನ ರೈತರ ಪ್ರಕಾರ ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಈ ರೀತಿ ಮಿಡತೆಗಳ ದಾಳಿ ನಡೆದಿರಲಿಲ್ಲ ಎಂದು ತಿಳಿದು ಬಂದಿದೆ.

ಪಾಕಿಸ್ತಾನವೇ ಮಿಡತೆಗಳ ಸಂತಾನೋತ್ಪತ್ತಿಗೆ ಸೂಕ್ತ
ಪಾಕಿಸ್ತಾನದಲ್ಲಿ ಅಟ್ಟಹಾಸ ತೋರುತ್ತಿರುವ ಮಿಡತೆಗಳ ಪೈಕಿ ಶೇ.38ರಷ್ಟು ಮಿಡತೆಗಳಿಗೆ ಬಲೂಚಿಸ್ತಾನ್, ಸಿಂಧ್ ಹಾಗೂ ಪಂಜಾಬ್ ಪ್ರದೇಶವು ಸಂತಾನೋತ್ಪತ್ತಿಯ ಕೇಂದ್ರವಾಗಿದ್ದವು ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ತಿಳಿಸಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಪಾಕಿಸ್ತಾನದಲ್ಲಿ ಮಿಡತೆಗಳ ದಾಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ ಸ್ಕೈಪ್ ಮೂಲಕ 9 ಬಾರಿ ಸಭೆಗಳನ್ನು ನಡೆಸಲಾಗಿತ್ತು. ಅಫ್ಘಾನಿಸ್ತಾನ್ ಮತ್ತು ಇರಾನ್ ರಾಷ್ಟ್ರಗಳ ಮುಖ್ಯಸ್ಥರು ಕೂಡಾ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಭಾರತದ ಜೊತೆಗಿನ ಮಾತುಕತೆಗೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications