ಕೆಣಕುವ, ಕಲಕುವ, ಚರ್ಚಾಸ್ಪದ ಸುದ್ದಿಗಳ ಸಡಗರ!
ಬೆಂಗಳೂರು, ಜನವರಿ 23 : ಎಂದಿನಂತೆ ಇಂದು ಕೂಡ ಸುದ್ದಿಯ ಸಡಗರ. ಟಿವಿ, ಟ್ವಿಟ್ಟರ್, ಫೇಸ್ ಬುಕ್, ವಾಟ್ಸಾಪ್ ಮುಂತಾದ ತಾಣಗಳ ಮೂಲಕ ಓದುಗರನ್ನು ತಲುಪುವ ಧಾವಂತ. ಕೆಣಕುವ, ಮನಕಲಕುವ ಸುದ್ದಿಗಳೊಂದಿಷ್ಟಾದರೆ, ಸುಮ್ಮನೆ ಹಾಸ್ಯರಸ ಚಿಮ್ಮಿಸುವ, ಜಿಜ್ಞಾಸೆಗೆ ದೂಡುವ ಸುದ್ದಿಗಳು ಮತ್ತೊಂದಿಷ್ಟು.
ಮಂಗಳವಾರ ಮಧ್ಯಾಹ್ನದೊಳಗೆ ಚರ್ಚೆಗೆ ಗ್ರಾಸವಾದ, ಹೋರಾಟಕ್ಕೆ ಕುಮ್ಮಕ್ಕು ನೀಡಿದ ಒಂದಿಷ್ಟು ಸುದ್ದಿಗಳನ್ನು ಹೆಕ್ಕಿ ನಿಮಗಾಗಿ ನೀಡುತ್ತಿದ್ದೇವೆ. ಮತ್ತೊಂದಿಷ್ಟು ಸುದ್ದಿಗಳು ಸೇರಿಕೊಳ್ಳುತ್ತಲೇ ಇವೆ. ಅವು ಕೂಡ ನಿಮಗಾಗಿ ನಿರಂತರವಾಗಿ ಬರುತ್ತಲೇ ಇರುತ್ತವೆ. ಅಲ್ಲಿಯವರೆಗೆ ಇವಿಷ್ಟನ್ನು ಓದಿಕೊಳ್ಳಿ.
* ಬೆಂಗಳೂರಿನ ರಿಚ್ಮಂಡ್ ವೃತ್ತದ ಬಳಿ ಅಪಾರ್ಟ್ಮೆಂಟ್ ಹೊರಗಡೆ ನಿಲ್ಲಿಸಿದ್ದ, ಶಿವಶಂಕರ್ ಎಂಬುವವರಿಗೆ ಸೇರಿದ ಟೊಯೋಟಾ ಇಟಿಯೋಸ್ ಕಾರಿನ ಗಾಜು ಒಡೆದು, ಸ್ಪೀಕರ್, ಎಸಿ ಕಿಟ್, ನಾಲ್ಕು ಟೈರುಗಳನ್ನು ಲಪಟಾಯಿಸಲಾಗಿದೆ.
* Give me blood and I will give you Freedom ಎಂದು ಹೇಳಿ ಭಾರತದ ಸ್ವಾತಂತ್ರ್ಯಕ್ಕಾಗಿ ವಿದೇಶದ ನೆಲದಲ್ಲಿಯೇ ಹೋರಾಟ ನಡೆಸಿದ್ದ ಸುಭಾಶ್ ಚಂದ್ರ ಬೋಸ್ ಅವರ 121ನೇ ಹುಟ್ಟುಹಬ್ಬವನ್ನು ಇಂದು ಆಚರಿಸಲಾಗುತ್ತಿದೆ.
* ಭಾರತೀಯ ಕಲೆ ಮತ್ತು ವಿಜ್ಞಾನದ ಪ್ರದರ್ಶನ 'Art Sci' ಉತ್ಸವ ವೈಟ್ ಫೀಲ್ಡ್ ರಸ್ತೆಯಲ್ಲಿರುವ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಜನವರಿ 24ರಂದು ಆಯೋಜಿಸಲಾಗಿದೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಈ ಉತ್ಸವವನ್ನು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ.
* ಹಾಸನ ಡಿಸಿ ರೋಹಿಣಿ ಸಿಂಧೂರಿ ಸೇರಿದಂತೆ 7 ಐಎಎಸ್ ಅಧಿಕಾರಿಗಳನ್ನು ಸಿದ್ದರಾಮಯ್ಯ ಸರಕಾರ ಎತ್ತಂಗಡಿ ಮಾಡಿದೆ. ಇದರ ಬೆನ್ನಲ್ಲೇ ಹಾಸನ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದ್ದ ರೋಹಿಣಿ ಅವರ ವರ್ಗಾವಣೆಗೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ರೋಹಿಣಿ ತಮ್ಮ ಮಾತು ಕೇಳುತ್ತಿಲ್ಲ, ಗೌರವ ನೀಡುತ್ತಿಲ್ಲ ಎಂದು ದೂರಿದ್ದರು. ಇದರ ಪರಿಣಾಮ ಈ ವರ್ಗಾವಣೆಯೆ?
* ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ವಿರೋಧಿಸಿ ಜನವರಿ 23, ಮಂಗಳವಾರದಂದು ಬಿಜೆಪಿಯವರು ಪ್ರತಿಭಟನೆ ನಡೆಸಲಿದ್ದರೆ, ಜನವರಿ 25ರಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಕೆಲ ದಲಿತ ಸಂಘಟನೆಗಳು ಕೂಡ ಈ ಪ್ರತಿಭಟನೆಯಲ್ಲಿ ಕೈಜೋಡಿಸುವ ಸುದ್ದಿಯೂ ಇದೆ.
* ಐಎಸ್ಐ ಹೆಲ್ಮೆಟ್ ಬಳಸಲೇಬೇಕೆಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಲವಾರು ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಮೋಟರ್ ವೆಹಿಕಲ್ ಆಕ್ಟ್ 129, ಕರ್ನಾಟಕ ಮೋಟರ್ ವೆಹಿಕಲ್ ರೂಲ್ ಸೆಕ್ಷನ್ 230 ಮತ್ತು ಸೆಂಟ್ರಲ್ ವೆಹಿಕಲ್ ರೂಲ್ಸ್ 138ರ ಪ್ರಕಾರ ತಲೆ ಕಾಪಾಡುವಂಥ ಹೆಲ್ಮೆಟ್ ಧರಿಸಲೇಬೇಕು. ಇದರಲ್ಲಿ ಟ್ರಾಫಿಕ್ ಪೊಲೀಸರ ಕೈವಾಡವೇನೂ ಇಲ್ಲ ಎಂದು ಹೆಚ್ಚುವರಿ ಕಮಿಷನರ್ ಹಿತೇಂದ್ರ ಹಿತವಚನ ಹೇಳಿದ್ದಾರೆ. ಕೇಳುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.
* ಹಲವಾರು ಪುಢಾರಿಗಳು ಟಿಕೆಟ್ ಪಡೆಯಲು ತಯಾರಿ ನಡೆಸಿದ್ದರೆ, ಬಿಜೆಪಿ ತಣ್ಣನೆ ಒಂದು ಬಿಸಿಬಿಸಿ ಸುದ್ದಿಯನ್ನು ಹರಿಯಬಿಟ್ಟಿದೆ. ಅದೇನೆಂದರೆ, ವಿಧಾನ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡುವುದಿಲ್ಲ. ಇದು ಹಲವರ ಕಣ್ಣು ಕೆಂಪಾಗುವಂತೆ ಮಾಡಿದರೂ ಅಚ್ಚರಿಯಿಲ್ಲ. ಎಂಎಲ್ಸಿ ಆಗಿರುವ ವಿ ಸೋಮಣ್ಣ ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೆ ತಯಾರಿ ನಡೆಸಿದ್ದಾರೆ.
* ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ 69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕದ 'ಅರಣ್ಯ ಸಂಪತ್ತು' ಆಕರ್ಷಣೆಯ ಕೇಂದ್ರಬಿಂದುವಾಗಿರಲಿದೆ. ಹುಲಿ, ಆನೆ ಮತ್ತು ವೈವಿಧ್ಯಮಯ ಕಾಡಿನ ಚಿತ್ರಣ ಮೆರವಣಿಗೆಯಲ್ಲಿ ಮೈನವಿರೇಳಿಸಲಿದೆ. ಸಂತಸದ ಸಂಗತಿಯೆಂದರೆ, ಕರ್ನಾಟಕದ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
* 1983ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿ ಸ್ಥಾಪಿಸಿದಾಗ ಅದರ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಸಮಾರಂಭಗಳಲ್ಲಿ ಕೆಲಕ್ಷಣಗಳ ಕಾಲ ನಿದ್ದೆಗೆ ಜಾರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಸೋಮವಾರವೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪರಿಷತ್ತಿನ ಶತಮಾನೋತ್ಸವ ಭವನವನ್ನು ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ನಿದ್ದೆಗೆ ಜಾರಿದಾಗ, ಅವರ ಕನ್ನಡವೂ ಕಣ್ಣಿಂದ ಜಾರಿ ಬಿದ್ದಿದೆ.
* ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರಿಗೆ ವಿಚಾರ ಯಾಕೆ ಬಂತೋ ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ 'ಚಾರ್ಲ್ಸ್ ಡಾರ್ವಿನ್ ಥಿಯರಿ', ಅಂದ್ರೆ ಮಂಗನಿಂದ ಮಾನವ ಎಂಬ ಸಂಗತಿಯೇ ಸುಳ್ಳು ಎಂಬ 'ಸತ್ಯ'ವನ್ನು ಕಂಡುಹಿಡಿದಿದ್ದಾರೆ ಸತ್ಯಪಾಲ್ ಸಿಂಗ್.