ಅಮರನಾಥ ಯಾತ್ರಿಕರಿಗೆ ಈ ಬಾರಿ ಕಂಡು ಕೇಳರಿಯದ ಬಿಗಿ ಭದ್ರತೆ
ಶ್ರೀನಗರ, ಜೂನ್ 27: ಅಮರನಾಥ ಯಾತ್ರಿಕರಿಗೆ ಈ ಬಾರಿ ಹಿಂದೆಂದಿಗಿಂತಲೂ ಗರಿಷ್ಠ ಭದ್ರತೆ ನೀಡಲಾಗುತ್ತಿದೆ. ಯಾತ್ರಿಕರಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಎಲೆಕ್ಟ್ರೋಮ್ಯಾಗ್ನೆಟಿಕ್ ಚಿಪ್ ಇರುವ ವಾಹನಗಳು, ಬೈಕ್ ಗಳು, ಬುಲೆಟ್ ಪ್ರೂಫ್ ಎಸ್ ಯುವಿ ಪೊಲೀಸ್ ಬೆಂಗಾವಲು ವಾಹನಗಳು, ಬುಲೆಟ್ ಪ್ರೂಫ್ ಬಂಕರ್ ಗಳನ್ನು ಸ್ಥಾಪಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಳೆಯಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಈ ಬಾರಿ 2 ಲಕ್ಷಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವ ಸಮುದ್ರ ಮಟ್ಟದಿಂದ 3,880 ಮೀಟರ್ ಎತ್ತರದ ಅಮರನಾಥ ಗುಹಾಂತರ ದೇವಾಲಯಕ್ಕೆ ಈ ಭಕ್ತರು ಭೇಟಿ ನೀಡಲಿದ್ದಾರೆ.
ಉಗ್ರರ ನಿಜವಾದ ಟಾರ್ಗೆಟ್ ಯಾರು? ವಿಡಿಯೋದಲ್ಲಿ ಉಗ್ರ ಬಿಚ್ಚಿಟ್ಟ ಸತ್ಯ!
ಯಾತ್ರೆ ತೆರಳಲಿರುವ ಜಮ್ಮು-ಪಹಲ್ಗಾಮ್ ಮಾರ್ಗ ಮತ್ತು ಜಮ್ಮು-ಬಲ್ತಾಲ್ ರಸ್ತೆಯ ದಾರಿಯುದ್ಧಕ್ಕೂ 40,000 ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಮತ್ತು ರಾಜ್ಯ ಪೊಲೀಸರನ್ನು ಪಹರೆ ನಿಲ್ಲಿಸಲಾಗಿದೆ.
ಭಾರೀ ಪ್ರಮಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ದಾರಿಯಲ್ಲಿ ಅಳವಡಿಸಲಾಗಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕವೂ ಯಾತ್ರೆಯ ಮೇಲೆ ನಿಗಾ ಇಡಲಾಗಿದೆ. ಸಂಭಾವ್ಯ ಉಗ್ರರ ದಾಳಿಗಳನ್ನು ತಡೆಯುವುದು, ಒಂದೊಮ್ಮೆ ದಾಳಿ ನಡೆದರೂ ತಕ್ಷಣ ಸ್ಥಳಕ್ಕೆ ತೆರಳಲು ಇದು ಸಹಾಯ ಮಾಡಲಿದೆ.
ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಪ್ರತೀ ವಾಹನಕ್ಕೂ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಗಳನ್ನು ಜೋಡಿಸಲಾಗಿದ್ದು, ನಿಯಂತ್ರಣ ಕೊಠಡಿಯಿಂದ ಇವುಗಳ ಮೇಲೆ ನಿಗಾ ಇಡಲಾಗುತ್ತದೆ. ಜೊತೆಗೆ ಎಲ್ಲಾ ವಾಹನಗಳನ್ನೂ ಬುಲೆಟ್ ಪ್ರೂಫ್ ಬೆಂಗಾವಲ ವಾಹನಗಳ ಮಧ್ಯದಲ್ಲಿ ಕೊಂಡೊಯ್ಯಲಾಗುತ್ತದೆ.
ಕಳೆದ ವರ್ಷ ಅನಂತ್ ನಾಗ್ ನಲ್ಲಿ ಯಾತ್ರಿಗಳ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಪ್ರತೀ ವಾಹನಕ್ಕೂ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಗಳನ್ನು ಜೋಡಿಸಲಾಗುತ್ತಿದೆ.
ಯಾವುದೇ ಅಹಿತಕರ ಘಟನೆಗಳನ್ನು ನಡೆದಾಗ ರಸ್ತೆ ಬಂದ್ ಆದರೆ ಅದನ್ನು ತೆರವು ಮಾಡಲು ಸಿಆರ್ ಪಿಎಫ್ ನ ಪರಿಣತರ ತಂಡ, ಜೊತೆಗೆ ಯಾವುದೇ ದಾಳಿಗಳಂಥ ಘಟನೆಗಳನ್ನು ನಡೆದರೆ ಅದನ್ನು ಎದುರಿಸಲು 100 ಜನರ ತಂಡವನ್ನು ಸರ್ವ ಸನ್ನದ್ಧವಾಗಿ ಇಡಲಾಗಿದೆ.
ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಸಿಆರ್ ಪಿಎಫ್ ನೋಂದಣಿ ಕೇಂದ್ರವನ್ನು ತೆರೆದಿದ್ದು, ಅಲ್ಲೇ ಯಾತ್ರಿಗಳ ನೋಂದಣಿ ಮಾಡಿಕೊಂಡು, ಅವರ ವಾಹನಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಗಳನ್ನು ಜೋಡಿಸಲಾಗುತ್ತದೆ.
ಮೊದಲ ಬ್ಯಾಚ್ ನ ಯಾತ್ರಿಗಳು ಇಂದು ಭಗ್ವಾತಿ ನಗರ ಕ್ಯಾಂಪ್ ನಿಂದ ಬೆಳಿಗ್ಗೆ 4.45ಕ್ಕೆ ಹೊರಟಿದ್ದಾರೆ. ಇವರು ಗುಹಾಂತರ ದೇವಾಲಯಕ್ಕೆ ಬಲ್ತಾಲ್ ಮತ್ತು ಪಹಲ್ಗಾಮ್ ಮಾರ್ಗದಲ್ಲಿ ನಾಳೆ ಯಾತ್ರೆ ಆರಂಭಿಸಲಿದ್ದಾರೆ. ಮೊದಲ ತಂಡದಲ್ಲಿ 1,904 ಜನರಿದ್ದು ಇವರಲ್ಲಿ 330 ಮಹಿಳೆಯರು ಮತ್ತು 30 ಮಕ್ಕಳು ಸೇರಿದ್ದಾರೆ.
ಇನ್ನು ನಿನ್ನೆಯಷ್ಟೇ ಸಿಆರ್ ಪಿಎಫ್ ಬೈಕ್ ತಂಡಗಳಿಗೆ ಚಾಲನೆ ನೀಡಲಾಗಿದೆ. ಇವರು ಸಂಭಾವ್ಯ ದಾಳಿ ಸಂದರ್ಭದಲ್ಲಿ ತುರ್ತಾಗಿ ಎದುರೇಟು ನೀಡುವುದಲ್ಲದೇ ಆ್ಯಂಬುಲೆನ್ಸ್ ರೀತಿಯಲ್ಲೂ ಯಾತ್ರಿಗಳಿಗೆ ನೆರವಾಗಲಿದ್ದಾರೆ. ಇವರಿಗೆ ಕ್ಯಾಮೆರಾ ಜೋಡಿಸಾಲದ ಹೆಲ್ಮೆಟ್ ಗಳನ್ನು ನೀಡಲಾಗಿದ್ದು, ಯಾತ್ರಿಗಳ ರಕ್ಷಣೆಯ ಜೊತೆಗೆ ಸಂದರ್ಭವನ್ನು ರೆಕಾರ್ಡ್ ಮಾಡಿಕೊಳ್ಳಲೂ ಇದು ಸಹಾಯ ಮಾಡಲಿದೆ.
ಸಿಆರ್ ಪಿಎಫ್ ಡಿಜಿ ಆರ್.ಆರ್. ಭಟ್ನಾಗರ್ ಖುದ್ದಾಗಿ ಭದ್ರತಾ ಏರ್ಪಾಟುಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್ 26ರಂದು ರಕ್ಷಾ ಬಂಧನದ ದಿನ ಯಾತ್ರೆ ಕೊನೆಯಾಗಲಿದೆ.