ಮೋದಿಗೆ ಸೆಡ್ಡು ಹೊಡೆಯಲಿದ್ದಾರೆ ಲಾಲೂ ಪ್ರಸಾದ್!
ರಾಂಚಿ, ಡಿ. 16 : "ಜೈಲು ಶ್ರೀ ಕೃಷ್ಣನ ಜನ್ಮ ಸ್ಥಳ, ನ್ಯಾಯಕ್ಕಾಗಿ ಹೋರಾಡಿ ನಾನು ಜೈಲು ಸೇರಿದ್ದೆ" ಎಂದು ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. "ಕೋಮುವಾದಿಗಳನ್ನು ಎದುರಿಸಲು ನಾನು ಸಿದ್ದವಾಗಿದ್ದೇನೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಲಾಲೂ ಘೋಷಿಸಿದ್ದಾರೆ.
ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸಿಯಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸುಪ್ರೀಂಕೋರ್ಟಿನಿಂದ ಜಾಮೀನು ನೀಡಿತ್ತು. ಸೋಮವಾರ ಆರ್ ಜೆಡಿ ಮುಖ್ಯಸ್ಥ ಲಾಲೂ ರಾಂಚಿಯ ಜೈಲಿನಿಂದ ಬಿಡುಗಡೆ ಆದರು. ಜೈಲಿನಿಂದ ಬಿಡುಗಡೆ ಆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜೈಲು ಶ್ರೀ ಕೃಷ್ಣನ ಜನ್ಮ ಸ್ಥಳ, ನ್ಯಾಯಕ್ಕಾಗಿ ಹೋರಾಡಿ ನಾನು ಜೈಲು ಸೇರಿದ್ದೆ ಎಂದರು.

ಡಿ.13 ರಂದು ಲಾಲೂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಜಾಮೀನು ಪ್ರತಿ ರಾಂಚಿ ಜೈಲುಅಧಿಕಾರಿಗಳಿಗೆ ವಿಳಂಬವಾಗಿ ತಲುಪಿದ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಬಿಡುಗಡೆ ಆದ ತಕ್ಷಣ ಲಾಲೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಲಾಲೂ ಯಾದವ್ ಗೆ ಜಾಮೀನು)
ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನ ತಡೆಯಲು ನಾನು ಪ್ರಯತ್ನಿಸುತ್ತೇನೆ. ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ ಎಂದು ಹೇಳುವ ಮೂಲಕ ಲಾಲೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಮೊದಲ ತೀರ್ಪು ಪ್ರಕಟವಾಗಿ,ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು 5 ವರ್ಷ ಕಾಲ ಜೈಲುಶಿಕ್ಷೆ ವಿಧಿಸಿತ್ತು.












Click it and Unblock the Notifications