Breaking; ಲಖೀಂಪುರ ಗಲಭೆ, ಆಶಿಷ್ ಮಿಶ್ರಾ ಜಾಮೀನು ರದ್ದು
ನವದೆಹಲಿ, ಏಪ್ರಿಲ್ 18; ಉತ್ತರ ಪ್ರದೇಶದ ಲಖೀಂಪುರ ಖೇರಿ ಗಲಭೆ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರ ಆಶಿಷ್ ಮಿಶ್ರಾ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಫೆಬ್ರವರಿಯಲ್ಲಿ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಸೋಮವಾರ ಸುಪ್ರೀಂಕೋರ್ಟ್ ಈ ಕುರಿತು ಆದೇಶ ಹೊರಡಿಸಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಲಖೀಂಪುರ ಖೇರಿ ಗಲಭೆ ಪ್ರಕರಣದ ಆರೋಪಿ. ಆಶಿಷ್ ಮಿಶ್ರಾಗೆ ಜಾಮೀನು ನೀಡಿರುವುದನ್ನು ಲಖೀಂಪುರ ಖೇರಿ ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬದವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು.
2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಗಲಭೆ ನಡೆದಿತ್ತು. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹತ್ತಿಸಲಾಗಿತ್ತು. ನಾಲ್ವರು ರೈತರು ಮೃತಪಟ್ಟಿದ್ದರು. ಆಶಿಷ್ ಮಿಶ್ರಾ ಈ ಪ್ರಕರಣದಲ್ಲಿ ಆರೋಪಿ.
ಲಖೀಂಪುರ ಖೇರಿ ಗಲಭೆ ಪ್ರಕರಣದ ಬಗ್ಗೆ ಮೊದಲು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಯಿತು. ಸುಪ್ರೀಂಕೋರ್ಟ್ಗೆ ಸಹ ಈ ಕುರಿತು ಅರ್ಜಿ ಸಲ್ಲಿಕೆಯಾಗಿದೆ.
ಆಶಿಷ್ ಮಿಶ್ರಾ ಜಾಮೀನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರ ನೇತೃತ್ವದ ಪೀಠ ಒಂದು ವಾರದಲ್ಲಿ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

ಜಾಮೀನು ರದ್ದು ಮಾಡಿದ ಸುಪ್ರೀಂ
2022ರ ಫೆಬ್ರವರಿ 10ರಂದು ಅಲಹಾಬಾದ್ ಹೈಕೋರ್ಟ್ ಆಶಿಷ್ ಮಿಶ್ರಾಗೆ ಜಾಮೀನು ನೀಡಿತ್ತು. ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬದವರು ಸುಪ್ರೀಂಕೋರ್ಟ್ನಲ್ಲಿ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನೆ ಮಾಡಿದ್ದರು.
ಸೋಮವಾರ ಜಾಮೀನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ಹೈಕೋರ್ಟ್ ಅನಗತ್ಯ ಅಂಶಗಳನ್ನು ಪರಿಗಣಿಸಿದೆ ಎಂದು ಹೇಳಿದೆ ಮತ್ತು ಆಶಿಷ್ ಮಿಶ್ರಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

124 ದಿನ ಜೈಲಿನಲ್ಲಿದ್ದ ಆಶಿಷ್ ಮಿಶ್ರಾ
ಲಖೀಂಪುರ ಖೇರಿ ಗಲಭೆ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಷ್ ಮಿಶ್ರಾ ಬಂಧನವಾಗಿತ್ತು. 124 ದಿನಗಳ ಕಾಲ ಜೈಲಿನಲ್ಲಿದ್ದ ಅವರು ಫೆಬ್ರವರಿ 10ರಂದು ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ ಮೇಲೆ ಹೊರ ಬಂದಿದ್ದರು.
ಅಲಹಾಬಾದ್ ಹೈಕೋರ್ಟ್ನಲ್ಲಿ ಆಶಿಷ್ ಮಿಶ್ರಾ ಪರವಾಗಿ ವಾದ ಮಂಡಿಸಿದ್ದ ವಕೀಲ ಸಲೀಲ್ ಶ್ರೀವಾಸ್ತವ್ ಘಟನೆ ನಡೆದ ಸಂದರ್ಭದಲ್ಲಿ ಆಶಿಷ್ ಮಿಶ್ರಾ ಕಾರು ಓಡಿಸುತ್ತಿರಲಿಲ್ಲ. ಚಾಲಕನ ಅಪರಾಧಕ್ಕೆ ಆಶಿಷ್ ಮಿಶ್ರಾ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ವಾದಿಸಿದ್ದರು.

5 ಸಾವಿರ ಪುಟಗಳ ಚಾರ್ಜ್ ಶೀಟ್
ಗಲಭೆ ಬಗ್ಗೆ ತನಿಖೆ ಆರಂಭಿಸಿದ್ದ ಎಸ್ಐಟಿ ಜನವರಿ 3ರಂದು 5 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿತ್ತು. ಇದರಲ್ಲಿ ಆಶಿಷ್ ಮಿಶ್ರಾ ಪ್ರಮುಖ ಆರೋಪಿ ಎಂದು ಉಲ್ಲೇಖ ಮಾಡಲಾಗಿತ್ತು.
ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಲಖೀಂಪುರ ಪ್ರವಾಸದಲ್ಲಿದ್ದರು. ಉಪಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಮೂರು ವಾಹನಗಳು ಸಾಗುತ್ತಿದ್ದವು.
Recommended Video

ರೈತರ ಮೇಲೆ ಕಾರು ಹರಿಸಿದ್ದಾರೆ
ಆಗ ರೈತರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾನಿರತ ರೈತರು ವಾಹನ ಸವಾರರ ಜೊತೆ ವಾಗ್ವಾದ ನಡೆಸಿದರು. ಆಗ ಆಶಿಷ್ ಮಿಶ್ರಾ ತಮ್ಮ ಥಾರ್ ಜೀಪ್ ಅನ್ನು ರೈತರ ಮೇಲೆ ಹರಿಸಿದ್ದಾರೆ ಎಂಬುದು ಆರೋಪ.
ಆಗ ನಾಲ್ವರು ರೈತರು ಮೃತಪಟ್ಟರು. ಬಳಿಕ ರೈತರು ರೊಚ್ಚಿಗೆದ್ದರು. ಆಗ ನಡೆದ ಗಲಭೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರು ಮೃತಪಟ್ಟಿದ್ದರು.












Click it and Unblock the Notifications