KSRTC: ಕೆಎಸ್ಆರ್ಟಿಸಿ ಬಸ್ ಫುಡ್ ಸ್ಟಾಪ್, ಬರಲಿದೆ ಹೊಸ ಮಾರ್ಗಸೂಚಿ
ತಿರುವನಂತಪುರಂ, ನವೆಂಬರ್ 04: ದೂರ ಪ್ರಯಾಣ ಮಾಡುವ ಸರ್ಕಾರಿ ಬಸ್ಗಳು ಹೋಟೆಲ್, ಡಾಬಾದ ಬಳಿ ಕಾಫಿ, ಟೀ, ಉಪಹಾರಕ್ಕಾಗಿ ಕೆಲವು ಹೊತ್ತು ನಿಲ್ಲಿಸುತ್ತವೆ. ಚಾಲಕ ಮತ್ತು ನಿರ್ವಾಹಕರು, ಪ್ರಯಾಣಿಕರು ಸ್ವಲ್ಪ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸಲು ಈ ಲಘು ವಿರಾಮ ಅನುಕೂಲ ಮಾಡಿಕೊಡಲಿದೆ. ಆದರೆ ಬಸ್ ಚಾಲಕರು ಅವರಿಷ್ಟದ ಹೋಟೆಲ್ ಮುಂದೆ ಇನ್ನು ಮುಂದೆ ಬಸ್ಗಳನ್ನು ನಿಲುಗಡೆ ಮಾಡುವಂತಿಲ್ಲ. ಇದಕ್ಕಾಗಿಯೇ ಮಾರ್ಗಸೂಚಿಯೊಂದು ಬರಲಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ಗಳ ಫುಡ್ ಸ್ಟಾಪ್ ಕುರಿತು ಮಾರ್ಗಸೂಚಿ ತಯಾರಿಸುತ್ತಿದೆ. ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸುವ ಮಾರ್ಗದ ಹೋಟೆಲ್ಗಳ ಪಟ್ಟಿಯನ್ನು ತಯಾರಿಸಲಿದೆ. ಈ ಹೋಟೆಲ್ಗಳಲ್ಲಿ ಮಾತ್ರ ಬಸ್ಗಳನ್ನು ನಿಲ್ಲಿಸಬೇಕು ಎಂದು ನಿಯಮ ರೂಪಿಸಲಾಗುತ್ತದೆ.

ಹೋಟೆಲ್ಗಳ ಪಟ್ಟಿ ತಯಾರು ಮಾಡುವುದು ಮಾತ್ರವಲ್ಲ. ಅದನ್ನು ಬಸ್ನ ಡ್ರೈವರ್ ಸೀಟಿನ ಹಿಂಭಾಗದಲ್ಲಿ ಅಂಟಿಸಲಾಗುತ್ತದೆ. ಆ ಹೋಟೆಲ್ಗೆ ಬಸ್ ಎಷ್ಟು ಸಮಯಕ್ಕೆ ತಲುಪಬಹುದು, ಅಲ್ಲಿ ಎಷ್ಟು ಹೊತ್ತು ನಿಲ್ಲಿಸಲಾಗುತ್ತದೆ ಎಂದು ಅಂದಾಜು ಸಮಯವನ್ನು ಸಹ ಮುದ್ರಿಸಲಾಗುತ್ತದೆ.
ಮಾರ್ಗಸೂಚಿ ರಚನೆ: ಬಸ್ಗಳು ಬೆಳಗ್ಗೆ 7.30ರಿಂದ 9.30ರ ತನಕ ಉಪಹಾರಕ್ಕೆ ನಿಲ್ಲಿಸಬೇಕು. 12.30 ರಿಂದ 2 ಗಂಟೆಯ ತನಕ ಊಟದ ವಿರಾಮ ನೀಡಬೇಕು. ಸಂಜೆ 4 ರಿಂದ 6 ಗಂಟೆಯ ತನಕ ಕಾಫಿ, ಟೀ ಬ್ರೇಕ್ ತೆಗೆದುಕೊಳ್ಳಬೇಕಿದೆ. ರಾತ್ರಿ 8 ರಿಂದ 11ರ ತನಕ ರಾತ್ರಿ ಊಟಕ್ಕಾಗಿ ಬಸ್ಗಳನ್ನು ನಿಲ್ಲಿಸಬೇಕು.
ಬಸ್ ಹೊರಡುವಾಗಲೇ ವೇಳಾಪಟ್ಟಿಗೆ ಅನುಗುಣವಾಗಿ ಫುಡ್ ಬ್ರೇಕ್ ಯಾವಾಗ? ಎಂದು ಅಂದಾಜಿನ ಸಮಯವನ್ನು ಪ್ರಯಾಣಿಕರಿಗೆ ತಿಳಿಸಬೇಕು. ಆಗಸ್ಟ್ ತಿಂಗಳಿನಲ್ಲಿಯೇ ಕೆಎಸ್ಆರ್ಟಿಸಿ ಫುಡ್ ಸ್ಟಾಪ್ ಬಗ್ಗೆ ನಿಯಮ ರೂಪಿಸಲು ಮುಂದಾಗಿತ್ತು. ಈಗ ಎಲ್ಲಾ ಪರಿಶೀಲನೆ ಬಳಿಕ ಹೊಸ ಮಾರ್ಗಸೂಚಿಯನ್ನೇ ಬಿಡುಗಡೆ ಮಾಡಲಾಗುತ್ತಿದೆ.
ಕೆಎಸ್ಆರ್ಟಿಸಿ ಬಸ್ ಚಾಲಕರು ಎಲ್ಲೆಂದರಲ್ಲಿ ಫುಡ್ ಬ್ರೇಕ್ ಮತ್ತು ಶೌಚಾಲಯಕ್ಕೆ ಬಸ್ ನಿಲ್ಲಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ದೂರುಗಳು ಬಂದಿತ್ತು. ಆದ್ದರಿಂದ ಕೆಎಸ್ಆರ್ಟಿಸಿ ಹೋಟೆಲ್ಗಳಿಂದ ಅರ್ಜಿಗಳನ್ನು ಸಹ ಆಹ್ವಾನಿಸಿತ್ತು.
ಈಗ ಒಂದು ವರ್ಷದ ಗುತ್ತಿಗೆ ಅವಧಿಯಲ್ಲಿ ಹೋಟೆಲ್ ಮುಂದೆ ಬಸ್ ನಿಲ್ಲಿಸಲು ಕೆಎಸ್ಆರ್ಟಿಸಿ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಈ ನಿಗದಿಗೊಳಿಸಿದ ಹೋಟೆಲ್ಗಳಲ್ಲಿ ಮಾತ್ರ ಬಸ್ಗಳನ್ನು ನಿಲ್ಲಿಸಬೇಕಿದೆ. ಹೀಗೆ ಬಸ್ ನಿಲ್ಲಿಸುವ ಹೋಟೆಲ್ ಕಳೆದ ಎರಡು ವರ್ಷಗಳಿಂದ ಇರಬೇಕು, ಉತ್ತಮ ಮೂಲ ಸೌಲಭ್ಯಗಳು ಇರಬೇಕು ಎಂದು ಷರತ್ತು ಹಾಕಲಾಗಿದೆ.
ಹೋಟೆಲ್ಗಳು ಉತ್ತಮ ಗುಣಮಟ್ಟದ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರವನ್ನು ನೀಡಬೇಕು. ಅಡುಗೆ ಮನೆ, ಒಳಾಂಗಣ ಸ್ವಚ್ಛವಾಗಿರಬೇಕು. 50 ಜನರು ಕುಳಿತುಕೊಳ್ಳುವ ವ್ಯವಸ್ಥೆ ಇರಬೇಕು. ಹೋಟೆಲ್ ಆವರಣದಲ್ಲಿ ಎರಡು ಬಸ್ಗಳನ್ನು ನಿಲ್ಲಿಸಲು ವ್ಯವಸ್ಥೆ ಇರಬೇಕು ಎಂದು ನಿಯಮ ರೂಪಿಸಿ, ಹೋಟೆಲ್ಗಳಿಂದ ಅರ್ಜಿಗಳನ್ನು ಕರೆಯಲಾಗಿತ್ತು.
ಕೆಎಸ್ಆರ್ಟಿಸಿ ಈ ವರ್ಷದ ಆರಂಭದಲ್ಲಿ ಕೆಲವು ಮಾರ್ಗದ ಬಸ್ಗಳಲ್ಲಿ ಕಾಫಿ, ಟೀ, ಸ್ನ್ಯಾಕ್ಸ್ ವಿತರಣೆ ಮಾಡುವ ಕುರಿತು ಘೋಷಣೆ ಮಾಡಿತ್ತು. ಇದಕ್ಕಾಗಿ ಬಸ್ನಲ್ಲಿಯೇ ಕಾಫಿ ಮೆಷಿನ್ ಇಡಲು ಈಗ ತೀರ್ಮಾನಿಸಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಮಂಗಳೂರು, ಬೆಂಗಳೂರು, ಮೈಸೂರು ಮಾರ್ಗದ ಬಸ್ಗಳಲ್ಲಿ ಪರಿಚಯಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.












Click it and Unblock the Notifications