ಉ.ಪ್ರ. ಉಪಚುನಾವಣೆ: ಮಾಧ್ಯಮವನ್ನು ಹೊರಗಟ್ಟಿದ ವ್ಯಕ್ತಿ ಇವರೇ..!
ಲಕ್ನೋ, ಮಾರ್ಚ್ 15: ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತ ಪಕ್ಷ(ಕೇಂದ್ರ ಮತ್ತು ರಾಜ್ಯದಲ್ಲಿ)ವಾಗಿದ್ದ ಬಿಜೆಪಿ, ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ವಿಫಲವಾಗಿದೆ.
ಆದರೆ ನಿನ್ನೆ(ಮಾ.14) ಉಪಚುನಾವಣೆಯ ಮತಎಣಿಕೆ ಸಂದರ್ಭದಲ್ಲಿ ಹಲವು ಅಚ್ಚರಿಯ ಘಟನೆಗಳು ನಡೆದವು. ಅದರಲ್ಲಿ ಪ್ರಮುಖವಾದುದು, ಮಾಧ್ಯಮಗಳನ್ನು ಮತ ಎಣಿಕೆ ಕೇಂದ್ರದಿಂದ ಆಚೆ ಹಾಕಿದ್ದು! ಮತ್ತು ಇದಕ್ಕೆ ಪ್ರಮುಖ ಕಾರಣರಾಗಿದ್ದು ರಾಜೀವ್ ರೌಟೆಲಾ ಎಂಬ ಜಿಲ್ಲಾ ಮ್ಯಾಜಿಸ್ಟ್ರೇಟ್!
ನಡೆದಿದ್ದಿಷ್ಟು: ಇಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್(ಗೋರಖ್ಪುರ) ಮುನ್ನಡೆ ಸಾಧಿಸುತ್ತಿದ್ದಂತೆಯೇ ಮಾಧ್ಯಮಗಳನ್ನು ಮತಗ ಎಣಿಕೆ ಕೇಂದ್ರದಿಂದ ದೂರ ಇರುವಂತೆ ಹೇಳಲಾಗಿತ್ತು. ಮಾತ್ರವಲ್ಲ, ಹಲವು ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದ್ದರೂ ಫಲಿತಾಂಶ ಘೋಷಿಸಲು ವಿಳಂಬವಾಗಿತ್ತು. ಇದು ಆಡಳಿತ ಪಕ್ಷ ಬಿಜೆಪಿ ಮೇಲೆ ಅನುಮಾನ ಹುಟ್ಟುವಂತೆ ಮಾಡಿತ್ತು. ನಂತರ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಬೆಂಬಲಿಗರು ಈ ಕುರಿತು ಗಲಾಟೆ ಆರಂಭಿಸಿದ್ದರಿಂದ ಮಾಧ್ಯಮಗಳನ್ನು ಒಳಗೆ ಬಿಡಲಾಗಿತ್ತು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಪ್ತರಾಗಿರುವ ರಾಜೀವ್ ಅವರು ಮಾಧ್ಯಮಗಳನ್ನು ಮತ ಎಣಿಕೆ ಕೇಂದ್ರದಿಂದ ಬೇಕೆಂದೇ ದೂರ ಇಟ್ಟು, ಫಲಿತಾಂಶದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬ ಮಾತೂ ಕೇಳಿಬಂತು. ಆದರೆ ಈ ಕುರಿತು ವಿರೋಧ ಪಕ್ಷಗಳು ರಾಜೀವ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಪತ್ರ ಮುಖೇನ ದೂರು ಸಲ್ಲಿಸಿದ್ದರಿಂದ ಪರಿಸ್ಥಿತಿ ತಣ್ಣಗಾಗಿತ್ತು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ರಾಜೀವ್ ರೌಟೆಲಾ ವಿರುದ್ಧ ಈಗಾಗಲೇ ಹಲವು ದೂರುಗಳಿವೆ. ಇಂಥವರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಉಳಿಸಿಕೊಂಡಿರುವ ಬಗ್ಗೆಯೂ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
ಒಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿನಿಧಿಸುತ್ತಿದ್ದ ಗೋರಖ್ಪುರ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದ ಫುಲ್ಪುರ ಕ್ಷೇತ್ರಗಳಲ್ಲೇ ಬಿಜೆಪಿ ಮಣ್ಣುಮುಕ್ಕಿದ್ದು, ಆಡಿಕೊಳ್ಳುವವರ ಮುಂದೆ ಎಡವಿ ಬಿದ್ದಂತಾಗಿದೆ. 2019 ರ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಇದೊಂದು ಪಾಠ ಎಂದೇ ಹಲವರು ಬಣ್ಣಿಸುತ್ತಿದ್ದಾರೆ.












Click it and Unblock the Notifications