ಹಿಂದೂ ಮುಖಂಡರ ಹತ್ಯೆಗೆ ಭಯೋತ್ಪಾದಕರ ಸಂಚು!
ಉತ್ತರ ಪ್ರದೇಶ ಹಾಗೂ ಪಂಜಾಬ್ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನದಲ್ಲಿ ಯೋಜನೆ ರೂಪಿಸಲಾಗಿದೆ
ನವದೆಹಲಿ, ನವೆಂಬರ್ 21: ವಿಎಚ್ ಪಿ ಹಾಗೂ ಆರ್ ಎಸ್ ಎಸ್ ಮುಖಂಡರ ಹತ್ಯೆಗೆ ಸಿಖ್ ಭಯೋತ್ಪಾದಕರು ಹಾಗೂ ಲಷ್ಕರ್ ಇ ತೋಯ್ಬಾ ಉಗ್ರರು ಸಂಚು ರೂಪಿಸಿದ್ದಾರಾ? ಮುಂಬರುವ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನದಲ್ಲಿ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ.
ವಿವಿಧ ತನಿಖಾ ದಳಗಳು ಹಾಗೂ ಭಯೋತ್ಪಾದನಾ ವಿರೋಧಿ ದಳ ಕಲೆ ಹಾಕಿರುವ ಮಾಹಿತಿ ಪ್ರಕಾರ, ಚುನಾವಣೆ ಕೆಲವೇ ದಿನಗಳು ಇರುವಂತೆ ದೊಡ್ಡ ಸಂಖ್ಯೆಯಲ್ಲಿ ಉಗ್ರರನ್ನು ಒಟ್ಟು ಮಾಡಿಕೊಂಡು ಹಿಂದೂ ಮುಖಂಡರ ಮೇಲೆ ದಾಳಿ ನಡೆಸುವುದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ. ಈ ಬೆದರಿಕೆ ತುಂಬ ಗಂಭೀರವಾದ ವಿಚಾರವಾಗಿದೆ. ಮತ್ತು ಇದನ್ನು ಪ್ರಾಮುಖ್ಯದ ಮೇಲೆ ಗಮನಿಸಬೇಕಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ಎಲ್ಲಾ ನೋಟು ನಿಷೇಧದ ಮಹಿಮೆ: ಸದ್ಯ ಕಾಶ್ಮೀರ ಕಣಿವೆ ಸಂಪೂರ್ಣ ಶಾಂತ]
'ನಮಗೆ ಸಿಕ್ಕ ಮಾಹಿತಿ ಪ್ರಕಾರ ಸಿಖ್ ಭಯೋತ್ಪಾದಕರು ಹಾಗೂ ಲಷ್ಕರ್ ಇ ತೋಯ್ಬಾದ ಉಗ್ರರು ಒಟ್ಟಾಗಿ ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳು ದಾಳಿಯ ಗುರಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಖ್ ಉಗ್ರರು ಹಿಂದೂ ಮುಖಂಡರ ಮೇಲೆ ದಾಳಿಗೆ ಸಂಚು ಮಾಡಿದ್ದರೆ, ಲಷ್ಕರ್ ಇ ತೋಯ್ಬಾ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಹಿಂದೂ ಮುಖಂಡರನ್ನು ಕೊಲ್ಲುವುದರಿಂದ ಉದ್ವಿಗ್ನ ಸ್ಥಿತಿ ಏರ್ಪಡುತ್ತದೆ. ಕೋಮುಗಲಭೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂಬ ಲೆಕ್ಕಾಚಾರ ದಾಳಿಯ ಹಿಂದಿದೆ.[ಉಗ್ರರ ಪೆನ್ ಡ್ರೈವಿನಲ್ಲಿ ಮೋದಿ ಚಿತ್ರವಿದ್ದದ್ದು ಏಕೆ?]
ಸಿಖ್ ಭಯೋತ್ಪಾದನಾ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಿದೆ. ಆದರೆ ಉಗ್ರರನ್ನು ಭಾರತದೊಳಗೆ ಕಳಿಸಲು ಐಎಸ್ ಐ ಸಮಯಕ್ಕಾಗಿ ಕಾದು ನೋಡುತ್ತಿದೆ. ಯಾವಾಗ ಭದ್ರತಾ ಸಿಬ್ಬಂದಿ ಚುನಾವಣೆ ಕೆಲಸದಲ್ಲಿ ಮಗ್ನರಾಗುತ್ತಾರೋ ಆಗ ದೇಶದೊಳಗೆ ನುಸುಳಲು ಆಲೋಚಿಸಲಾಗಿದೆ.
ಬರುವ ತಿಂಗಳುಗಳಲ್ಲಿ ಕಾಶ್ಮೀರದ ಆಚೆಗೆ ದಾಳಿಗಳನ್ನು ನಡೆಸಲು ಲಷ್ಕರ್ ಇ ತೋಯ್ಬಾ ಎದುರು ನೋಡುತ್ತಿದೆ. ಈ ಬಗ್ಗೆ ಪೊಲೀಸರಿಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಸಿಮಿಯಂಥ ಸಂಘಟನೆಗಳ ಚಲನವಲನಗಳ ಮೇಲೂ ಕಣ್ಣಿರಿಸಲು ಸೂಚಿಸಲಾಗಿದೆ. ಏಕೆಂದರೆ, ಲಷ್ಕರ್ ಇ ತೋಯ್ಬಾದ ಪರವಾಗಿ ಇಂಥ ಸಂಘಟನೆಗಳು ಕೃತ್ಯ ಎಸಗುವ ಸಾಧ್ಯತೆಗಳಿವೆ.[ಪಾಕ್ ನಲ್ಲಿ ಉಗ್ರಗಾಮಿಗಳ ಬ್ಯಾಂಕ್ ಖಾತೆ ಮುಟ್ಟುಗೋಲು]
ಭೋಪಾಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿಮಿ ಸದಸ್ಯರ ಎನ್ ಕೌಂಟರ್ ಪ್ರಕರಣದಲ್ಲಿ ಪ್ರತೀಕಾರ ಹೇಳಲು ಆ ಸಂಘಟನೆ ಪ್ರಯತ್ನಿಸುತ್ತದೆ ಎಂಬ ಬಗ್ಗೆ ಎರಡು ವಾರದ ಹಿಂದೆ ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿತ್ತು.