ಅಗ್ನಿವೀರರಿಗೆ ಸಾಮಾಜಿಕ ಬಹಿಷ್ಕಾರ: ಖಾಪ್ ಪಂಚಾಯಿತಿ, ರೈತ ಮುಖಂಡರ ಬೆದರಿಕೆ
ಚಂಡೀಗಡ, ಜೂನ್ 23: ಅಗ್ನಿಪಥ್ ಯೋಜನೆ ಅಡಿ ಸೇನೆಗೆ ಅಗ್ನಿವೀರ್ ಆಗಿ ಯಾರಾದರೂ ಸೇರಿದರೆ, ಅಥವಾ ಸೇರಲು ಯತ್ನಿಸಿದರೆ ಅಂಥವರನ್ನು ಸಾಮಾಜಿಕವಾಗಿ ಪ್ರತ್ಯೇಕ ಇಡಲಾಗುವುದು ಎಂದು ಹರಿಯಾಣದ ವಿವಿಧ ಸಂಘಟನೆಗಳು ಮತ್ತು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಅಗ್ನಿಪಥ್ ಯೋಜನೆಯನ್ನು ಬೆಂಬಲಿಸುವ ಆಡಳಿತಾರೂಢ ಬಿಜೆಪಿ ಮತ್ತು ಜನನಾಯಕ್ ಜನತಾ ಪಾರ್ಟಿ ಪಕ್ಷಗಳ ನಾಯಕರು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಬಹಿಷ್ಕಾರ ಮಾಡುವುದಾಗಿ ಇವರು ಬೆದರಿಕೆ ಹಾಕಿದ್ದಾರೆ.
ಹರಿಯಾಣದ ರೋಹ್ತಕ್ ಜಿಲ್ಲೆಯ ಸಾಂಪ್ಲಾ ಪಟ್ಟಣದಲ್ಲಿ ನಿನ್ನೆ ಬುಧವಾರ ಖಾಪ್ ಪಂಚಾಯಿತಿ ಮುಖಂಡರು, ರೈತ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಸಭೆ ನಡೆಸಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದರಲ್ಲಿ ಹರಿಯಾಣ ಅಷ್ಟೇ ಅಲ್ಲ ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ವಿವಿಧ ಖಾಪ್ ಪಂಚಾಯಿತಿಗಳ ಮುಖ್ಯಸ್ಥರು ಹಾಗು ಇತರ ಸಮುದಾಯ ಸಂಘಟನೆಗಳ ನಾಯಕರು ಪಾಲ್ಗೊಂಡಿದ್ದರೆನ್ನಲಾಗಿದೆ.
ದೇಶದ ಯುವ ಜನತೆಗಾಗಿ ಅಗ್ನಿಪಥ್ ಯೋಜನೆ ಜಾರಿ, ವಿರೋಧ ಬೇಡ :ಎಸ್.ಎಂ. ಕೃಷ್ಣ
ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವವರನ್ನೂ ಬಹಿಷ್ಕಾರ ಮಾಡಲು ಖಾಪ್ ಪಂಚಾಯಿತಿಯವರು ನಿರ್ಧರಿಸಿದ್ಧಾರೆ.
ಸರ್ಕಾರಕ್ಕೆ ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ರಾಹುಲ್ ಒತ್ತಾಯ
ಏನಿದು ಖಾಪ್ ಪಂಚಾಯಿತಿ?
ಖಾಪ್ ಪಂಚಾಯಿತಿ ಎಂಬುದು ಸಾಂಪ್ರದಾಯಿಕ ಜನತಾ ಪಂಚಾಯಿತಿ. ಇದು ನಮ್ಮ ಅಧಿಕೃತ ಗ್ರಾಮ ಪಂಚಾಯಿತಿಗೆ ಪರ್ಯಾಯವಾಗಿ ಗ್ರಾಮೀಣ ಭಾಗಗಳಲ್ಲಿ ಅಸ್ತಿತ್ವ ಇರುವ ವ್ಯವಸ್ಥೆಯಾಗಿದೆ. ಹಿಂದೆಲ್ಲಾ ಇದ್ದ ಪಂಚಾಯಿತಿ ಕಟ್ಟೆ ಇದಕ್ಕೆ ಉದಾಹರಣೆ. ಖಾಪ್ ಪಂಚಾಯಿತಿಗಳು ಹರಿಯಾಣ, ರಾಜಸ್ಥಾನ, ಪಂಜಾಬ್, ರಾಜಸ್ತಾನ್, ಬಿಹಾರ ಮೊದಲಾದ ಉತ್ತರ ಭಾರತದ ರಾಜ್ಯಗಳಲ್ಲಿ ಈಗಲೂ ಅಸ್ತಿತ್ವದಲ್ಲಿವೆ. ಜಾಟ್, ಗುರ್ಜರ್ ಮೊದಲಾದ ಪ್ರಬಲ ಸಮುದಾಯಗಳಲ್ಲಿ ಇದು ಇದೆ. ಗ್ರಾಮಸ್ಥರಿಗೆ ಈಗಲೂ ನ್ಯಾಯ ಪಂಚಾಯಿತಿ ಇತ್ಯಾದಿ ಕೆಲಸಗಳು ಇಲ್ಲಿಂದಲೇ ತೀರ್ಮಾನ ಆಗುತ್ತವೆ ಎಂಬುದು ಕುತೂಹಲ.
ಅಗ್ನಿಪಥ್ ಯೋಜನೆ ವಿರುದ್ಧ ಕಿಡಿ
ಪ್ರಭಾನಿ ಎನಿಸಿದ ಧಂಕರ್ ಖಾಪ್ನ ಮುಖ್ಯಸ್ಥ ಓಂ ಪ್ರಕಾಶ್ ಧಂಕರ್ ನೇತೃತ್ವದಲ್ಲಿ ಜೂನ್ 22ರಂದು ನಡೆದ ಸಭೆಯಲ್ಲಿ ಅಗ್ನಿಪಥ್ ಯೋಜನೆಯನ್ನು ತಡೆಯುವ ಬಗೆ ಹೇಗೆ ಎಂಬುದನ್ನು ಚರ್ಚಿಸಲಾಯಿತೆನ್ನಲಾಗಿದೆ.
"ಈ ಯೋಜನೆಗೆ ಅರ್ಜಿ ಸಲ್ಲಿಸುವವರನ್ನು ನಾವು ಸಾಮಾಜಿಕವಾಗಿ ಪ್ರತ್ಯೇಕ ಮಾಡುತ್ತೇವೆ. ಅಗ್ನಿವೀರ್ ಹೆಸರಿನಲ್ಲಿ ಯುವ ಜನರನ್ನು ಕಾರ್ಮಿಕರನ್ನಾಗಿ ಮಾಡುವ ಈ ಯೋಜನೆಯನ್ನು ನಾವು ಬಹಿಷ್ಕಾರ ಮಾಡುತ್ತೇವೆ" ಎಂದು ಓಂ ಪ್ರಕಾಶ್ ಧಂಕರ್ ಹೇಳಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳ ಬಹಿಷ್ಕಾರ:
ಅಗ್ನಿವೀರ್ ಯೋಜನೆ ಸಮರ್ಥಿಸುವ ರಾಜಕಾರಣಿಗಳನ್ನು ಮತ್ತು ಕಾರ್ಪೊರೇಟ್ ಕಂಪನಿಗಳನ್ನು ಬಹಿಷ್ಕಾರ ಮಾಡುವುದಾಗಿ ಖಾಪ್ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿಯವರು ಹೇಳಿಕೆ ನೀಡಿದ ಪರಿಣಾಮ ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಕಂಪನಿಗಳ ವಸ್ತುಗಳನ್ನು ಬಹಿಷ್ಕಾರ ಮಾಡಿದ ರೀತಿಯಲ್ಲೇ ತಾವೂ ಕ್ರಮ ಕೈಗೊಳ್ಳುವುದಾಗಿ ಧಂಕರ್ ಹೇಳಿದ್ದಾರೆ. "ಈ ಕಂಪನಿಗಳಿಂದ 10 ಸಾವಿರ ರೂ ಮೊತ್ತಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಜನರು ಖರೀದಿಸಬಾರದೆಂದು ಒತ್ತಾಯಿಸುತ್ತೇವೆ" ಎಂದವರು ತಿಳಿಸಿದ್ಧಾರೆ.
ಇತರ ಬೇಡಿಕೆಗಳು:
ಖಾಪ್ ಪಂಚಾಯಿತಿಗಳು, ರೈತ ಮತ್ತು ವಿದ್ಯಾರ್ಥಿ ಸಂಘಟನೆಗಳು ಮತ್ತು ವಿವಿಧ ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.
ಅಗ್ನಿಪಥ್ ಯೋಜನೆ ಹಿಂಪಡೆಯಬೇಕೆಂಬುದು ಪ್ರಮುಖವಾದುದು. ಹಾಗೆಯೇ, ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದೂ ಸಭೆಯಲ್ಲಿ ಒತ್ತಾಯಿಸಲಾಗಿದೆ.
ರೋಹ್ತಕ್ ಜಿಲ್ಲೆಯ ಸಾಂಪ್ಲಾ ಪಟ್ಟಣದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಖಾಯಂ ಪ್ರತಿಭಟನೆ ನಡೆಸಬೇಕೆಂದು ನಿರ್ಧರಿಸಲಾಗಿದೆ. ಈ ಪ್ರದೇಶದ ಸುತ್ತಮುತ್ತಲಿರುವ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಏನಿದು ಅಗ್ನಿಪಥ್ ಯೋಜನೆ?
ಅಗ್ನಿಪಥ್ ಯೋಜನೆ ಎಂಬುದು ಸೇನೆಗಳಿಗೆ ನಡೆಯಲಿರುವ ಹೊಸ ನೇಮಕಾತಿ ವ್ಯವಸ್ಥೆಯಾಗಿದೆ. 17.5ರಿಂದ 21 ವರ್ಷದವರೆಗಿನ ವಯೋಮಾನದ ಯುವಕ ಮತ್ತು ಯುವತಿಯರನ್ನು ಅಗ್ನಿವೀರ್ ಆಗಿ ಸೇನೆಗೆ ನೇಮಕ ಮಾಡಿಕೊಳ್ಳುವ ಯೋಜನೆ ಇದು. ನಾಲ್ಕು ವರ್ಷದವರೆಗೆ ಇವರ ಸೇವಾವಧಿ ಇರುತ್ತದೆ. ಅದಾದ ಬಳಿಕ ಶೇ. 25ರಷ್ಟು ಮಂದಿಯನ್ನು ಆಯ್ದು ಸೇನೆಯಲ್ಲಿ ಮುಂದುವರಿಸಲಾಗುತ್ತದೆ. ಉಳಿದವರನ್ನು ಬಿಟ್ಟುಬಿಡಲಾಗುವುದು.
ಸೇನೆಗಳಿಗೆ ಯುವತನದ ಕಳೆ ನೀಡುವುದು ಈ ಯೋಜನೆಯ ಉದ್ದೇಶ. ಹಾಗೆಯೇ ಸರಕಾರಕ್ಕೆ ಭಾರವಾಗಿರುವ ನಿವೃತ್ತ ಯೋಧರಿಗೆ ಪಿಂಚಣಿ ನೀಡುವ ಹೊರೆ ತಪ್ಪಿಸುವುದು ಇದರ ಅಘೋಷಿತ ಉದ್ದೇಶ ಎನ್ನಲಾಗಿದೆ.
ನಾಲ್ಕು ವರ್ಷ ಅಗ್ನಿವೀರ್ಗಳಾಗಿ ಹೊರಬಂದವರಿಗೆ ಯಾವುದೇ ಪಿಂಚಣಿ ಇರುವುದಿಲ್ಲ. ಓದು ಬಿಟ್ಟು ಸೇನೆ ಸೇರಿ ಹೊರಬಂದವರು ಅತಂತ್ರ ಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಭಯ ಇದೆ. ಅಲ್ಲದೇ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸೇನಾ ನೇಮಕಾತಿಯೇ ಅಲ್ಲಿನ ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಆಶಾಕಿರಣವಾಗಿದೆ. ಈಗ ಅಲ್ಪಾವಧಿಗೆ ಅಗ್ನಿವೀರ್ ನೇಮಕ ಮಾಡಿಕೊಳ್ಳಲು ಹೊರಟಿರುವುದು ಅಲ್ಲೆಲ್ಲಾ ಜನಾಕ್ರೋಶಕ್ಕೆ ಕಾರಣವಾಗಿದೆ. ಅಂತೆಯೇ ಪ್ರತಿಭಟನೆ, ಹಿಂಸಾಚಾರಗಳು ನಡೆಯುತ್ತಿರುವುದು.
(ಒನ್ಇಂಡಿಯಾ ಸುದ್ದಿ)