ಲೀಟರ್ ಹಾಲಿಗೆ 6 ರೂಪಾಯಿ ಏರಿಕೆ ಮಾಡಿದ ಕೇರಳ
ತಿರುವನಂತಪುರಂ, ನವೆಂಬರ್ 25: ಕೇರಳ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಮಿಲ್ಮಾ) ಗುರುವಾರ ಹಾಲಿನ ದರವನ್ನು ಲೀಟರ್ಗೆ 6 ರೂಪಾಯಿ ಹೆಚ್ಚಿಸುವ ನಿರ್ಧಾರವನ್ನು ಮಾಡಿದ್ದು ಪರಿಷ್ಕೃತ ದರಗಳು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
1980ರಲ್ಲಿ ಸ್ಥಾಪಿತವಾದ ಮಿಲ್ಮಾ ತಿರುವನಂತಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಜ್ಯ ಸಹಕಾರಿ ಸಂಘವಾಗಿದೆ. 2019 ರಲ್ಲಿ ಮಿಲ್ಮಾ ಪ್ರತಿ ಲೀಟರ್ಗೆ 4 ರೂಪಾಯಿ ಹೆಚ್ಚಳ ಮಾಡಿತ್ತು. ಅದರ ಬಳಿಕ ಈಗ ಮೂರು ವರ್ಷಗಳ ನಂತರ ಬೆಲೆ ಏರಿಕೆಯಾಗಿದೆ.
ಫಿಫಾ ವಿಶ್ವಕಪ್ ಅಭಿಮಾನ: ಕಾಲೋನಿಗೆ ಬಣ್ಣ ಬಳಿದ ದಿನಗೂಲಿ ಕಾರ್ಮಿಕರು
2019ರ ಸಮಯದಲ್ಲಿ ಹಾಲಿನ ದರದ ಹೆಚ್ಚುವರಿ ಮೊತ್ತದ ಶೇಕಡಾ 83.75 (ರೂ. 3.35) ರೈತರಿಗೆ ಹೋಗಿತ್ತು. ಈ ಬಾರಿಯೂ ಆ ಪ್ರಮಾಣ ಮುಂದುವರಿಯಲಿದೆ. ಅಂದರೆ ಏರಿಕೆಯಾದ 6 ರೂಪಾಯಿಗಳಲ್ಲಿ 5.25 ರೂ. ರೈತನಿಗೆ ಸೇರಲಿದೆ ಎಂದು ಫೆಡರೇಶನ್ ಅಧ್ಯಕ್ಷ ಕೆ. ಎಸ್. ಮಣಿ ತಿಳಿಸಿದ್ದಾರೆ.
ರಾಜ್ಯದ ಪಶುವೈದ್ಯಕೀಯ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳ ತಜ್ಞರನ್ನು ಒಳಗೊಂಡ ಮಿಲ್ಮಾ ನೇಮಿಸಿದ ಸಮಿತಿಯು ಹೈನುಗಾರರಿಗೆ ತಗಲುವ ವೆಚ್ಚಗಳ ಕುರಿತು ಅಧ್ಯಯನ ನಡೆಸಿದ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರವನ್ನು ಸರ್ಕಾರ ಮಾಡಿದೆ. ಕಳೆದ ವಾರ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ರೈತರು ಪ್ರತಿ ಲೀಟರ್ ಹಾಲಿಗೆ ಅಂದಾಜು 8.57 ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಮಿತಿ ಹೇಳಿದೆ.
ಶಬರಿಮಲೆ: ಭಕ್ತರಿಗೆ ದರ್ಶನ ಸಮಯದಲ್ಲಿ ಬದಲಾವಣೆ, ಇಲ್ಲಿದೆ ವಿವರ
ಹಾಲಿನ ದರ ಹೆಚ್ಚಳದ ಬಗ್ಗೆ ಮಿಲ್ಮಾ ನಿರ್ದೇಶಕ ಮಂಡಳಿ ಸಭೆ ನಡೆಸಿ ಬೆಲೆ ಏರಿಕೆ ಅನಿವಾರ್ಯ ಎಂದು ತೀರ್ಮಾನಿಸಿದರು. ಹಾಲಿನ ಬೆಲೆಯನ್ನು ಹೆಚ್ಚಿಸಲು ಅಧಿಕಾರ ಹೊಂದಿದ್ದರೂ, ಮಂಡಳಿಯ ನಿರ್ಧಾರವನ್ನು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಬಳಿಕವೇ ಸೂಕ್ತ ಹೆಚ್ಚಳವನ್ನು ಅಂತಿಮಗೊಳಿಸಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಕೆ. ಎಸ್. ಮಣಿ ತಿಳಿಸಿದರು.
ಹಾಲಿನ ದರ ಹೆಚ್ಚಳದ ಬಗ್ಗೆ ಎರ್ನಾಕುಲಂ ಅಂಗಡಿಯ ಬೆನ್ನಿ ಮಾತನಾಡಿ, ಒಮ್ಮೆ ಸರ್ಕಾರಿ ಸ್ವಾಮ್ಯದ ಮಿಲ್ಮಾ ಹಾಲಿನ ದರವನ್ನು ಹೆಚ್ಚಿಸಿದರೆ ಖಾಸಗಿ ಕಂಪನಿಗಳು ಅದನ್ನು ಅನುಸರಿಸುತ್ತವೆ. ಮಿಲ್ಮಾ ಬೆಲೆ ಏರಿಕೆಯನ್ನು ಘೋಷಿಸಲು ಅವರು ಕಾಯುತ್ತಿದ್ದರು. ಯಾವುದೇ ಖಾಸಗಿ ಕಂಪನಿಯು ಇನ್ನೂ ಬೆಲೆ ಏರಿಕೆಯನ್ನು ಘೋಷಿಸಿಲ್ಲ. ಕೇರಳದಲ್ಲಿ ಮಾರಾಟವಾಗುತ್ತಿರುವ ಇತರೆ ಜನಪ್ರಿಯ ಹಾಲು ಬ್ರಾಂಡ್ಗಳೆಂದರೆ ಪಿಡಿಡಿಪಿ, ಅಮೃತ್ ಎಟ್ ಸೆಟೆರಾ ಆಗಿವೆ ಎಂದರು.
ಹಾಲಿನ ಸಹಕಾರ ಸಂಘಗಳು ಮತ್ತು ವಿತರಕರು ಹೊಸದಾಗಿ ಹೆಚ್ಚಿಸಿದ ಮೊತ್ತದ ಶೇ. 5.75 ಪ್ರತಿಶತವನ್ನು ಪಡೆಯುತ್ತಾರೆ ಮತ್ತು 0.75 ರಷ್ಟು ಮೊತ್ತವು ಡೈರಿ ರೈತರ ಕಲ್ಯಾಣ ನಿಧಿ ಮಂಡಳಿಗೆ ಹೋಗುತ್ತದೆ. ಸಹಕಾರಿ ಒಕ್ಕೂಟದ ಹಾಲು ಸಂಗ್ರಹಣೆ ಬೆಲೆ ಏರಿಕೆಯ ಜೊತೆಗೆ ಸರ್ಕಾರವು ರೈತರಿಗೆ ವಿವಿಧ ಸಬ್ಸಿಡಿಗಳನ್ನು ನೀಡುತ್ತಿದೆ. ಹಾಲಿನ ಸಂಗ್ರಹಣೆ ಬೆಲೆಯಲ್ಲಿನ ಪ್ರಸ್ತುತ ಹೆಚ್ಚಳವು ಹಾಲು ಉತ್ಪಾದಕರಿಗೆ ಪ್ರಯೋಜನವನ್ನು ನೀಡುತ್ತದೆ. ಅವರಲ್ಲಿ ಹೆಚ್ಚಿನವರು ಡೈರಿ ಕ್ಷೇತ್ರಕ್ಕೆ ಸೇರಲು ಒಲವು ತೋರುತ್ತಾರೆ ಎಂದು ಫೆಡರೇಶನ್ ಅಧ್ಯಕ್ಷ ಕೆ.ಎಸ್. ಮಣಿ ಹೇಳಿದರು.