ಮರಣಶಯ್ಯೆಯಲ್ಲಿರುವ ತಾಯಿಯನ್ನು ನೋಡಲು ಕಪ್ಪನ್ಗೆ ಸಿಗದ ಜಾಮೀನು
ನವದೆಹಲಿ, ಫೆಬ್ರವರಿ 5: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಘಟನೆಯ ವರದಿಗಾರಿಕೆಗೆ ತೆರಳುವಾಗ ಮಥುರಾದಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳದ ವೆಬ್ಸೈಟ್ ಒಂದರ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರಿಗೆ 123 ದಿನ ಕಳೆದರೂ ಜಾಮೀನು ಸಿಕ್ಕಿಲ್ಲ. ತಮ್ಮ ಬಂಧನ ಪ್ರಶ್ನಿಸಿ ಮತ್ತು ಜಾಮೀನಿಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆರು ಬಾರಿ ಮುಂದೂಡಿದೆ.
ಕಪ್ಪನ್ ಅವರ ತಾಯಿ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅವರನ್ನು ನೋಡಲು ಐದು ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಆರು ದಿನಗಳ ಹಿಂದೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಇದುವರೆಗೂ ವಿಚಾರಣೆಗೆ ನಿಗದಿ ಮಾಡಿಲ್ಲ.
ಕಳೆದ ಅಕ್ಟೋಬರ್ 5ರಂದು ಬಂಧನಕ್ಕೆ ಒಳಗಾದ ಕಪ್ಪನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ನಾಲ್ಕು ತಿಂಗಳಿಂದ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಅವರ ಜಾಮೀನು ಅರ್ಜಿ ಮೂರು ತಿಂಗಳ ಹಿಂದೆ ಸಲ್ಲಿಕೆಯಾಗಿತ್ತು.

ಕಪ್ಪನ್ ವಿರುದ್ಧ ಮಥುರಾದಲ್ಲಿ ಅಕ್ಟೋಬರ್ 7ರಂದು ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 153ಎ (ಧಾರ್ಮಿಕ ನೆಲೆಯಲ್ಲಿ ಎರಡು ಗುಂಪುಗಳ ನಡುವೆ ವೈರತ್ವ ಬಿತ್ತುವುದು) ಮತ್ತು 295ಎ (ಧರ್ಮ ಅಥವಾ ಧಾರ್ಮಿಕ ನಂಬಿಕೆಯನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳಿಗೆ ಗಾಸಿ ಉಂಟು ಮಾಡುವ ಉದ್ದೇಶಪೂರ್ವಕ ಕೃತ್ಯ), ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಪ್ಪನ್ ಅವರ 90 ವರ್ಷದ ತಾಯಿ ಮರಣಶಯ್ಯೆಯಲ್ಲಿದ್ದು, ಹೆಚ್ಚೂ ಕಡಿಮೆ ಅರೆಪ್ರಜ್ಞಾವಸ್ಥೆಯಲ್ಲಿದ್ದಾರೆ. ಅವರನ್ನು ವಿಡಿಯೋ ಕಾಲ್ ಮೂಲಕ ನೋಡಲು ಕಪ್ಪನ್ಗೆ ಅವಕಾಶ ನೀಡಲಾಗಿತ್ತು. ಆದರೆ ತಾಯಿಯೊಂದಿಗೆ ಮಾತನಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು ನೇರ ಭೇಟಿಗೆ ತೆರಳಲು ಅವಕಾಶ ನೀಡುವಂತೆ ಕಪ್ಪನ್ ಕುಟುಂಬದ ಪರವಾಗಿ ಪತ್ರಕರ್ತರ ಒಕ್ಕೂಟ ಜ. 29ರಂದು ಅರ್ಜಿ ಸಲ್ಲಿಸಿತ್ತು.












Click it and Unblock the Notifications