Sabarimala Prasadam: ಏಲಕ್ಕಿಯಲ್ಲಿ ಕೀಟನಾಶಕದ ಅಂಶ; ಶಬರಿಮಲೆ ಅರವಣ ಪ್ರಸಾದಕ್ಕೆ ಹೈಕೋರ್ಟ್ ನಿಷೇಧ
ತಿರುವನಂತಪುರಂ, ಜ. 12: ಕೋಟ್ಯಾಂತರ ಜನರು ಪ್ರಸಾದವಾಗಿ ಸ್ವೀಕರಿಸುವ ಶಬರಿಮಲೆ ಅಯ್ಯಪ್ಪಸ್ವಾಮಿ ಅರವಣ ಪಾಯಸಂ ಪ್ರಸಾದದ ಮಾರಾಟಕ್ಕೆ ಕೇರಳ ಹೈಕೋರ್ಟ್ ನಿಷೇಧ ಹೇರಿದೆ.
ಹೌದು, ಇಷ್ಟು ವರ್ಷಗಳ ಕಾಲ ದೇವರ ಪ್ರಸಾದವೆಂದು ಸ್ವೀಕರಿಸುತ್ತಿದ್ದ ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಬಳಕೆಯಾಗುವ ಏಲಕ್ಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಅಸುರಕ್ಷಿತ ಕೀಟನಾಶಕದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಕೇರಳ ಹೈಕೋರ್ಟ್ನ ಆದೇಶ ನೀಡಿದ್ದು, ಶಬರಿಮಲೆ ಮೈದಾನದಲ್ಲಿ ಅರವಣ ಪಾಯಸಂ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.
Sabarimala:ನೆಚ್ಚಿನ ನಟರು, ರಾಜಕಾರಣಿಗಳ ಫೋಟೋ ತೆಗೆದುಕೊಂಡು ಹೋದರೆ ಶಬರಿಮಲೆಗೆ ಪ್ರವೇಶವಿಲ್ಲ: ಕೇರಳ ಹೈಕೋರ್ಟ್
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಸಂಶೋಧನೆಗಳ ಆಧಾರದ ಮೇಲೆ ನ್ಯಾಯಾಲಯವು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಪ್ರಸಾದ ಮಾರಾಟ ಮಾಡದಂತೆ ಆದೇಶವನ್ನು ನೀಡಿತು. ಅರಾವಣ ಪ್ರಸಾದದ ಸುವಾಸನೆಗೆ ಬಳಸುವ ಏಲಕ್ಕಿಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳ ಪ್ರಕಾರ ಕೀಟನಾಶಕದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾಗಿದೆ.
ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ ಜಿ ಅಜಿತ್ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿತ್ತು. ಆದೇಶ ಪ್ರತಿಗಾಗಿ ಕಾಯುವ ಅಗತ್ಯವಿಲ್ಲ. ಸನ್ನಿಧಾನಂನಲ್ಲಿರುವ ಆಹಾರ ಸುರಕ್ಷತಾ ಅಧಿಕಾರಿಯ ಮೂಳಕ ತಕ್ಷಣದಿಂದಲೇ ಪ್ರಸಾದ ಹಂಚುವುದನ್ನು ನಿಲ್ಲಿಸಬೇಕು ಎಂದು ತಿಳಿಸಿತ್ತು.
ಇನ್ನು, ತಿರುವನಂತಪುರಂನ ಸರ್ಕಾರಿ ವಿಶ್ಲೇಷಕರ ಪ್ರಯೋಗಾಲಯದಿಂದ ಪರೀಕ್ಷಾ ವರದಿಯನ್ನು ಪಡೆದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಅಡಿಯಲ್ಲಿ ರೂಪಿಸಲಾದ ನಿಯಮಾವಳಿಗಳಲ್ಲಿ ಸೂಚಿಸಲಾದ ಮಾನದಂಡಗಳನ್ನು ಪೂರೈಸುವ ಏಲಕ್ಕಿಯನ್ನು ಖರೀದಿಸಬಹುದು. ಅಥವಾ ಏಲಕ್ಕಿ ಇಲ್ಲದೆ ಪ್ರಸಾದವನ್ನು ತಯಾರಿಸುವುದಕ್ಕೆ ಈ ಆದೇಶವು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಗುತ್ತಿಗೆದಾರರ ನಡುವಿನ ಅನಾರೋಗ್ಯಕರ ಪೈಪೋಟಿ ಪ್ರಸ್ತುತ ಸಮಸ್ಯೆಗೆ ಕಾರಣವಾಗಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಟಿಡಿಬಿ ಕ್ರಮಕೈಗೊಳ್ಳಲಿದೆ ಎಂದರು. 350 ಕೆಜಿ ಅಕ್ಕಿ, ಬೆಲ್ಲದಂತಹ ಪದಾರ್ಥಗಳನ್ನು ಒಳಗೊಂಡಿರುವ ಅರವಣ ಪ್ರಸಾದಕ್ಕೆ 720 ಗ್ರಾಂ ಏಲಕ್ಕಿಯನ್ನು ಮಾತ್ರ ಬಳಸಲಾಗುತ್ತದೆ ಎಂದು ಟಿಡಿಬಿ ವಕೀಲರು ಹೈಕೋರ್ಟ್ಗೆ ತಿಳಿಸಿದ್ದರು.
ತಿರುವನಂತಪುರದ ಪ್ರಯೋಗಾಲಯದಲ್ಲಿ ಹಾಗೂ ಕೊಚ್ಚಿಯಲ್ಲಿರುವ ಮಸಾಲೆ ಮಂಡಳಿಯ ಗುಣಮಟ್ಟ ಮೌಲ್ಯಮಾಪನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಮಾದರಿಗಳಲ್ಲಿ ಏಲಕ್ಕಿಯಲ್ಲಿ ಹೆಚ್ಚಿನ ಕೀಟನಾಶಕ ಇರುವುದು ಕಂಡುಬಂದಿದೆ.
ಇತ್ತ ಗುರುವಾರದಿಂದಲೇ ಏಲಕ್ಕಿ ರಹಿತ ಅರವಣ ಪ್ರಸಾದ ವಿತರಣೆ ಆರಂಭವಾಗಲಿದೆ ಎಂದು ಟಿಡಿಬಿ ಅಧ್ಯಕ್ಷ ಕೆ.ಅನಂತಗೋಪನ್ ಪ್ರಕಟಿಸಿದ್ದಾರೆ. ಸಾವಯವ ಏಲಕ್ಕಿ ಲಭ್ಯವಾದರೆ, ಏಲಕ್ಕಿ ಮಿಶ್ರಿತ ಅರವಣ ಉತ್ಪಾದನೆಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು. ಭಕ್ತರಿಗೆ ಅರಾವಣ ಮತ್ತು ಅಪ್ಪಂ ಬಹಳ ಮುಖ್ಯ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬುಧವಾರ ಅರವಣ ಉತ್ಪಾದನೆಯನ್ನು ನಿಲ್ಲಿಸಿ ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಲಾಯಿತು ಎಂದು ಅನಂತಗೋಪನ್ ತಿಳಿಸಿದ್ದಾರೆ.