ಕೇರಳ ಪ್ರವಾಹ: ಕಪಾಟು, ವಾಷಿಂಗ್ ಮಶೀನ್ ನಲ್ಲಿ ಹಾವಿದ್ದೀತು ಜೋಕೆ!
ತಿರುವನಂತಪುರಂ, ಆಗಸ್ಟ್ 25: ಕೇರಳದಲ್ಲಿ ಮಳೆ ಮತ್ತು ಪ್ರವಾಹ ಕೊಂಚ ಕಡಿಮೆಯಾಗಿದ್ದು, ಜನರು ಇದೀಗ ಹೊಸ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.
ಮನೆಯ ಕಪಾಟು, ವಾಷಿಂಗ್ ಮಷೀನ್, ಕಾರ್ಪೇಟ್ ಅಡಿ, ಹಾಸಿಗೆಯ ಒಳಗೆ ವಿಷಕಾರಿ ಹಾವುಗಳಿರಬಹುದು ಎಂಬ ಎಚ್ಚರಿಕೆಯನ್ನು ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಡಳಿತ ನೀಡಿದೆ.
ಕೇರಳದಲ್ಲಿ ಮನೆಗೆ ವಾಪಸ್ ಬಂದವರನ್ನು ಸ್ವಾಗತಿಸಲು ಮೊಸಳೆ, ಹಾವುಗಳು
ಈಗಾಗಲೇ ಕೇರಳದ ಹಲವು ಆಸ್ಪತ್ರೆಗಳು ವಿಷಪ್ರತಿರೋಧಕ ಔಷಧಗಳನ್ನು ನೀಡುತ್ತಿವೆ. ಸಂತ್ರಸ್ಥರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುವಾಗ ವಿಷಕಾರೀ ಕೀಟಗಳು ಮತ್ತು ಸರಿಸೃಪಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಜನರಿಗೆ ಈಗಾಗಲೇ ವಾರ್ನಿಂಗ್ ನೀಡಲಾಗಿದೆ.
ಸಂತ್ರಸ್ತ ಶಿಬಿರದಿಂದ ಮನೆಗೆ ತೆರಳಿದವರನ್ನು ಹಾವು ಮೊಸಳೆಗಳು ಸ್ವಾಗತಿಸಿದ ಸುದ್ದಿಯನ್ನು ಕೇಳಿದ್ದೆವು. ಆದರೆ ಮನೆಯ ಸಂಧಿಗಳಲ್ಲಿ, ಕಪಾಟು, ವಾಷಿಂಗ್ ಮೆಷಿನ್, ಬಾಕ್ಸ್ ಗಳಲ್ಲಿ ಹಾವುಗಳಿರಬಹುದು ಎಂಬ ಎಚ್ಚರಿಕೆಯನ್ನು ಕೆಲವು ವರದಿಗಳು ನೀಡಿದ್ದು, ಜನ ಮತ್ತಷ್ಟು ಆತಂಕ ಎದುರಿಸುವಂತಾಗಿದೆ.
ಈಗಷ್ಟೆ ಪ್ರವಾಹದ ಬಾಯಿಂದ ಕಷ್ಟಪಟ್ಟು ಪಾರಾಗಿ ಬಂದ ಜನರಿಗೆ ಇದೊಂದು ಹೊಸ ಸವಾಲಾಗಿ ಪರಿಣಮಿಸಿದೆ.
ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಸುಮಾರು 400 ಕ್ಕೂ ಹೆಚ್ಚು ಜನರು ಮೃತರಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಲಕ್ಷಾಂತರ ಕೋಟಿ ರೂ. ನಷ್ಟ ಸಂಭವಿಸಿದೆ.