ಮಾರ್ಚ್ 24ರ ತನಕ ಚಿದಂಬರಂ ಮಗ ನ್ಯಾಯಾಂಗ ಬಂಧನಕ್ಕೆ, ತಿಹಾರ್ ಜೈಲಿಗೆ
ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಮಗ ಕಾರ್ತಿಯನ್ನು ಮಾರ್ಚ್ ಇಪ್ಪತ್ನಾಲ್ಕರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಶೇಷ ಕೋರ್ಟ್ ಸೂಚನೆ ನೀಡಿದೆ. ಇದರರ್ಥ ಏನೆಂದರೆ ಮಾರ್ಚ್ ಇಪ್ಪತ್ನಾಲ್ಕರ ತನಕ ಕಾರ್ತಿ ಚಿದಂಬರಂ ತಿಹಾರ್ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಹಣಕಾಸು ಅವ್ಯವಹಾರದ ಆರೋಪ ಅವರ ಮೇಲಿದೆ.
ಅಗತ್ಯ ಇರುವಷ್ಟು ಭದ್ರತೆಯನ್ನು ಕಾರ್ತಿ ಚಿದಂಬರಂಗೆ ನೀಡಿ ಎಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ. ಇನ್ನು ಮನೆಯೂಟವನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೋರ್ಟ್ ನ ಕೇಳಿಕೊಂಡಿದ್ದರು ಕಾರ್ತಿ. ಅದಕ್ಕೆ ಅವಕಾಶವನ್ನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಅಂದಹಾಗೆ ಐಎನ್ ಎಕ್ಸ್ ಮೀಡಿಯಾಗೆ ಸಂಬಂಧಿಸಿದ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತ್ತು. ಮತ್ತಷ್ಟು ಸಮಯ ನಮ್ಮ ವಶಕ್ಕೆ ಕಾರ್ತಿ ಚಿದಂಬರಂ ಅವರನ್ನು ನೀಡಬೇಕು ಎಂದು ಸಿಬಿಐ ಯಾವುದೇ ಅರ್ಜಿಯನ್ನು ಕೋರ್ಟ್ ಗೆ ಹಾಕಿರಲಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಚಿದಂಬರಂ ಪ್ರಭಾವಿ ಸಚಿವರಾಗಿದ್ದರು. ಬಿಜೆಪಿ ಸರಕಾರದ ವಿರುದ್ಧದ ಟೀಕಾಕಾರರಲ್ಲಿ ಚಿದಂಬರಂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications