ಪದ್ಮಾವತಿಗಾಗಿ ಭಾರತ್ ಬಂದ್ ಗೆ ಕರೆ ಕೊಟ್ಟ ರಜಪೂತರು
ಬೆಂಗಳೂರು, ನವೆಂಬರ್ 16: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಡಿಸೆಂಬರ್ 01ರಂದು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಪದ್ಮಾವತಿ ಚಿತ್ರ ಬಿಡುಗಡೆ ವಿರೋಧಿಸಿ ಶ್ರೀರಜಪೂತ ಕರ್ಣಿ ಸೇನಾ ಸಂಘಟನೆ ಡಿಸೆಂಬರ್ 1ರಂದು ಭಾರತ್ ಬಂದ್ಗೆ ಕರೆ ನೀಡಿದೆ.
ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡಲಾಗಿದೆ, ಪದ್ಮಾವತಿ ಪಾತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಹಾಗೂ ಹಿಂದೂ ಸಂಘಟನೆಗಳು ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದು, ಡಿಸೆಂಬರ್ 1ರಂದು ಭಾರತ ಬಂದ್ಗೆ ಕರೆ ನೀಡಿವೆ.

ರಜಪೂತ ಸಮುದಾಯ ಅಥವಾ ಹಿಂದೂ ಸಂಘಟನೆಗಳು ಮಾತ್ರ ಈ ಚಿತ್ರವನ್ನು ವಿರೋಧಿಸುತ್ತಿಲ್ಲ. ಚಿತ್ರವನ್ನ ಮುಸ್ಲಿಂ ಮುಖಂಡರು ಕೂಡಾ ವಿರೋಧಿಸುತ್ತಿದ್ದಾರೆ. ದೇಶದೆಲ್ಲೆಡೆ ಪದ್ಮಾವತಿ ಚಿತ್ರದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ ಎಂದು ಸಂಘಟನೆಯ ಸ್ಥಾಪಕ ಲೋಕೇಂದ್ರ ಕಲ್ವಿ ಹೇಳಿದ್ದಾರೆ.
ಸಿನಿಮಾಟೋಗ್ರಫಿ ಕಾಯ್ದೆಯಂತೆ ಚಿತ್ರದ ಬಿಡುಗಡೆಯನ್ನು 3 ತಿಂಗಳ ಕಾಲ ನಿಷೇಧಿಸಬೇಕು, ಪ್ರಧಾನಿ ಮೋದಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಎಂದು ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಆಗ್ರಹಿಸಿದೆ.












Click it and Unblock the Notifications