Karnataka and Tamil Nadu: ಈ ವಿಷಯದಲ್ಲಿ ಒಂದಾದ ಕರ್ನಾಟಕ - ತಮಿಳುನಾಡು, ಇತಿಹಾಸದಲ್ಲೇ ಮೊದಲು!
ಸದಾ ಕಾವೇರಿ ನೀರಿನ ವಿಷಯದಲ್ಲಿ ಸಂಘರ್ಷದಿಂದಲೇ ಸುದ್ದಿಯಾಗುತ್ತಿದ್ದ ತಮಿಳುನಾಡು ಹಾಗೂ ಕರ್ನಾಟಕ ಇದೀಗ ಇತಿಹಾಸದಲ್ಲೇ ಮೊದಲ ಎನ್ನುವಂತೆ ಹೋರಾಟಕ್ಕೆ ಕೈಜೋಡಿಸಿವೆ. ಎರಡೂ ರಾಜ್ಯಗಳ ಈ ನಡೆ ದೇಶದಾದ್ಯಂತ ಅಚ್ಚರಿಯನ್ನೇ ಮೂಡಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಪತ್ರ ವ್ಯವಹಾರಗಳು ನಡೆದಿವೆ. ಸಹೋದರ ರಾಜ್ಯಗಳು ಒಂದಾಗಿರುವುದು ಯಾವ ವಿಷಯಕ್ಕೆ ಹಾಗೂ ಏನಿದು ಹೊಸ ರಾಜಕೀಯ ಬೆಳವಣಿಗೆ ಎನ್ನುವ ವಿವರ ಇಲ್ಲಿದೆ.
ದೇಶದ ಇತಿಹಾಸದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಘರ್ಷದ ಹಾದಿಯನ್ನು ಸವಿಸಿದ್ದೇ ಹೆಚ್ಚು. ಕಾವೇರಿ ನೀರು ಹಂಚಿಕೆ ವಿವಾದವು ಭಾರತದಾದ್ಯಂತ ಸುದ್ದಿಯಾಗಿದೆ. ಎರಡೂ ರಾಜ್ಯಗಳು ಸಂಘರ್ಷದ ಹಾದಿ ಸವಿಸಿದ್ದೇ ಹೆಚ್ಚು. ಆದರೆ, ಎರಡು ರಾಜ್ಯಗಳಲ್ಲಿ ಹವಾಮಾನ ವಿಕೋಪಗಳಾದಾಗ ಎರಡೂ ರಾಜ್ಯದ ಜನ ಮಮ್ಮಲ ಮರುಗಿರುವುದು ಇದೆ. ಸಂಕಷ್ಟ ಬಂದಾಗ ಎರಡೂ ರಾಜ್ಯಗಳು ಪರಸ್ಪರ ಸಹಕಾರ ಕೊಟ್ಟಿರುವುದು ಇದೆ. ಅದೇ ರೀತಿ ಇದೀಗ ಮತ್ತೊಂದು ಸಂಕಷ್ಟದ ಸಮಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಒಂದಾಗಿವೆ.

ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ, ದಕ್ಷಿಣ ಭಾರತ ರಾಜ್ಯಗಳ ಲೋಕಸಭಾ ಕ್ಷೇತ್ರ ವಿಂಗಡಣೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಮಿಳುನಾಡು ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಸಮಾನವಾಗಿ ವಿರೋಧಿಸಿವೆ. ಇದೀಗ ಈ ಹೋರಾಟಕ್ಕೆ ಕೈ ಜೋಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮಿಳುನಾಡಿನ ಸಿ.ಎಂ ಎಂ.ಕೆ ಸ್ಟಾಲಿನ್ ಅವರು ಪತ್ರ ಬರೆದಿದ್ದಾರೆ.

ತಮಿಳುನಾಡಿನ ಸಿ.ಎಂ ಪತ್ರಕ್ಕೆ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಿಯ ಎಂ.ಕೆ. ಸ್ಟಾಲಿನ್ ಅವರೇ, ನಮ್ಮ (ದಕ್ಷಿಣ ಭಾರತದ) ಮೇಲೆ ರಾಜಕೀಯ ತತ್ವಗಳ ಮೇಲೆ ಗಂಭೀರ ಪರಿಣಾಮ ಬೀರುವ ಹಾಗೂ ರಾಜ್ಯಗಳ ಸ್ವಾಯತ್ತತೆಯ ಪ್ರಮುಖ ಸಮಸ್ಯೆಗಳ ಧ್ವನಿ ಎತ್ತುವ ನಿಮ್ಮ ಪತ್ರವನ್ನು (07.03.2025) ನಾನು ಸ್ವೀಕರಿಸಿದ್ದೇನೆ. ವಿಶೇಷವಾಗಿ ಹೊಸ ಜನಸಂಖ್ಯೆಯ ಮಾನದಂಡಗಳನ್ನು ಆಧರಿಸಿದ ಆಗಲಿರುವ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಸಮಸ್ಯೆ ಎದುರಾಗಲಿವೆ. ಈ ವಿಷಯಗಳನ್ನು ಸಮಾನ ಮನಸ್ಸಿನ ರಾಜ್ಯಗಳು ದೀರ್ಘವಾಗಿ ಚರ್ಚಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮುಂದುವರಿದು ಪೂರ್ವ ನಿರ್ಧರಿತ ಕಾರ್ಯಕ್ರಮದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, 22ರಂದು ನಡೆಯಲಿರುವ ಈ ಸಭೆಯ ಮಹತ್ವವನ್ನು ಪರಿಗಣಿಸಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಭೆಯಲ್ಲಿ ಭಾಗವಹಿಸಲು ನಾನು ವಿನಂತಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಭಾಗವಹಿಸಲಿ ಎಂದ ಕನ್ನಡಿಗರು
ಇನ್ನು ದಕ್ಷಿಣ ಭಾರತದ ಮಹತ್ವದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಾಜರಾಗಬೇಕು ಎಂದು ಹಲವು ಕನ್ನಡಿಗರು ಒತ್ತಾಯಿಸಿದ್ದಾರೆ. ಪುರುಷೋತ್ತಮ ಗೋಪಾಲ್ ಎನ್ನುವವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ... ನೀವು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ತರಹ ಒಕ್ಕೂಟ ಸರಕಾರಕ್ಕೆ ಗಟ್ಟಿಯಾಗಿ ಸಂದೇಶ ಕಳಿಸಿ..ಅವರ ರೀತಿ ರೂಪಾಯಿ ಅಕ್ಷರ ಬದಲಾಯಿಸಿ ಬಳಸಲು ಕನ್ನಡಿಗರಿಗೆ ಸಂದೇಶ ಕೊಡಿ.ದ್ವಿಭಾಷೆ ನೀತಿ ಬೆಂಬಲಿಸಿ.ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡು ತರಹ ನೀತಿ ಅನುಸರಿಸಿ ಎಂದು ಮನವಿ ಮಾಡಿದ್ದಾರೆ.
ನಟರಾಜ್ ಎನ್ನುವವರು ಡಿ.ಕೆ ಶಿವಕುಮಾರ್ ಅವರು ಪರಿಣಾಮಕಾರಿಯಾಗಿ ಕರ್ನಾಟಕವನ್ನು ಪ್ರತಿನಿಧಿಸುವಂತಾಗಲಿ. ಆದರೂ ನೀವೂ ಅವರ ಜೊತೆ ಭಾಗವಹಿಸಿದ್ದಿದ್ದರೆ ಉಪಯುಕ್ತವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ಅಪ್ಪಾಜಿ ಗೌಡ ಎನ್ನುವವರು, ನೀವೇ ಭಾಗವಹಿಸಿದರೆ ಉತ್ತಮ ಹಾಗೂ ದಕ್ಷಿಣ ರಾಜ್ಯಗಳಿಗೆ ಉತ್ತಮ ಬೆಂಬಲ ಸಿಕ್ಕಂತೆ ಆಗುತ್ತೆ .ಯಾವುದೇ ಪೂರ್ವ ನಿರ್ಧಾರಿತ ಮೀಟಿಂಗ್ ಇದ್ದರೂ ರದ್ದು ಮಾಡಿ ಭಾಗವಹಿಸಿ ಬೆಂಬಲ ಕೊಡಿ. ಇದು ಬಹಳ ಮುಖ್ಯ ಹಾಗೂ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ತಡೆಗೆ ಸೂಕ್ತ ಪ್ರತಿರೋಧ ಸಭೆಯಾಗಿದೆ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನೀವು ಸಹ ಕರೆದು ಕೇಂದ್ರಕ್ಕೆ ವಿರೋಧದ ಪತ್ರ ರವಾನಿಸಿ ಎಂದಿದ್ದಾರೆ.












Click it and Unblock the Notifications