ಟೈಗರ್ ಹಿಲ್ ಭಾರತಕ್ಕೆ ಮರಳಿ ಸಿಕ್ಕಿದ್ದು ಎಂಟು ಸಿಖ್ ಯೋಧರ ಸಾಹಸದಿಂದ
ಶ್ರೀನಗರ, ಜುಲೈ 26: 1999ರ ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಟೈಗರ್ ಹಿಲ್ ಗೆಲುವು. ಕಾರ್ಗಿಲ್ ಯುದ್ಧದ ಈ ಅತಿ ದೊಡ್ಡ ವಿಜಯವನ್ನು ತಂದುಕೊಟ್ಟಿದ್ದು 192 ಮೌಂಟೇನ್ ಬ್ರಿಗೇಡ್.
ಟೈಗರ್ ಹಿಲ್ ವಶಪಡಿಸಿಕೊಳ್ಳುವ ಈ ಕಠಿಣ ಹೋರಾಟದಲ್ಲಿ ಪ್ರಧಾನ ಪಾತ್ರ ನಿಭಾಯಿಸಿದ್ದು ಎಂಟು ಸಿಖ್ ಸೈನಿಕರು.
ಈ ಪಡೆಯ ನೇತೃತ್ವ ವಹಿಸಿದ್ದ ಕಮಾಂಡರ್ ಎಂಪಿಎಸ್ ಬಾಜ್ವಾ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಅದರ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಕಾರ್ಗಿಲ್ ಯುದ್ಧ ಪ್ರಾರಂಭವಾಗಿ ಆಗಲೇ ಕೆಲವು ಪ್ರದೇಶಗಳು ಪಾಕ್ ಪಡೆಯ ವಶವಾಗಿದ್ದವು. ಅವುಗಳಲ್ಲಿ ಅತ್ಯಂತ ಕಠಿಣವಾದ ಟೈಗರ್ ಹಿಲ್ ಕೂಡ ಒಂದು.
ಅದನ್ನು ಕೆಲವು ದಿನಗಳ ಒಳಗೇ ವಶಪಡಿಸಿಕೊಳ್ಳಬೇಕು ಎಂದು ಮೇಜರ್ ಜನರಲ್ ಮೋಹಿಂದರ್ ಪುರಿ, ಬಾಜ್ವಾ ಅವರಿಗೆ ಸೂಚಿಸಿದರು.
ಮರುದಿನದೊಳಗೆ ಯುದ್ಧಕ್ಕೆ ಸಿದ್ಧತೆ ನಡೆಸಿ ಹೊರಡಬೇಕಿತ್ತು. ಇದಕ್ಕೆ ನಾಲ್ಕು ಬಟಾಲಿಯನ್ಗಳು ಸಿದ್ಧವಾಗಿದ್ದರೂ ಫೈನಲ್ ಟಾಸ್ಕ್ಗೆಂದು ಆರಂಭದಲ್ಲಿ 18 ಗ್ರೆನೇಡಿಯರ್ಗಳು ಮತ್ತು 8 ಸಿಖ್ ಯೋಧರ ತಂಡವನ್ನು ಆಯ್ಕೆ ಮಾಡಿಕೊಂಡರು.

ಟೈಗರ್ ಹಿಲ್ನ ತುದಿಯನ್ನೇರಲು ಅತ್ಯಂತ ಕ್ಲಿಷ್ಟಕರ ಮಾರ್ಗವನ್ನು ಆಯ್ದುಕೊಳ್ಳಲಾಯಿತು. ಪರ್ವತವನ್ನೇರಲು ಪರಿಣತರಿಂದ ತರಬೇತಿ ನೀಡಲಾಯಿತು. ಇಬ್ಬರು ಅಧಿಕಾರಿಗಳು ಮತ್ತು ನಾಲ್ವರು ಜೆಸಿಒಗಳನ್ನು ಒಳಗೊಂಡ 52 ಮಂದಿಯ ತಂಡವನ್ನು ಕಾಯ್ದಿರಿಸಲಾಯಿತು.
ಪಾಕಿಸ್ತಾನ ಪಡೆಗಳ ದಾಳಿಗೆ ಪ್ರತಿದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಿದ ಶ್ರೇಯಸ್ಸು ಲೆಫ್ಟಿನೆಂಟ್ ಬಲ್ವಾನ್ ಸಿಂಗ್ ನೇತೃತ್ವದ 18 ಗ್ರೆನೇಡಿಯನ್ನರ ತಂಡಕ್ಕೆ ಸಲ್ಲಬೇಕು.
ಈ ತಂಡ ಮೊದಲು ಪರ್ವತದ ತುದಿಯನ್ನು ತಲುಪಿದಾಗ ಪಾಕ್ ಪಡೆಗಳು ತೀವ್ರ ಗುಂಡಿನ ದಾಳಿ ನಡೆಸಿದರು. ಈ ವೇಳೆ 8 ಸಿಖ್ಖರ ಪಡೆ ತುದಿಯತ್ತ ಮುನ್ನುಗ್ಗಿತು.
ಅವರಿಗೆ ರೇಡಿಯೋ ಮೂಲಕ ನಾನು ಉತ್ಸಾಹ ತುಂಬುತ್ತಿದ್ದೆ. ಪಾಕಿಸ್ತಾನಿ ಪ್ರತಿದಾಳಿಗೆ ಒಂದಿಂಚೂ ಅವಕಾಶ ನೀಡದಂತೆ ದಾಳಿ ನಡೆಸುವಂತೆ ಹುರಿದುಂಬಿಸುತ್ತಿದ್ದೆ.
ಈ ದಾಳಿಯಲ್ಲಿ ಮುಂಚೂಣಿಯಲ್ಲಿದ್ದ ಬಲ್ವಾನ್ ಸಿಂಗ್ ಮಹಾವೀರ್ ಚಕ್ರ ಗೌರವಕ್ಕೆ ಪಾತ್ರರಾದರೆ, ಪ್ರಾಣತ್ಯಾಗ ಮಾಡಿದ ಯೋಗೇಂದ್ರ ಯಾದವ್ ಪರಮವೀರ ಚಕ್ರದ ಗೌರವ ಪಡೆದರು.
ಪಾಕಿಸ್ತಾನದ ಪಡೆಗಳು ಪ್ರತಿದಾಳಿ ನಡೆಸುತ್ತಿದ್ದ ವೇಳೆ, ಪಾಕಿಸ್ತಾನದ ಎತ್ತರದ ನಿಲುವಿನ ವ್ಯಕ್ತಿಯೊಬ್ಬ ತನ್ನ ಸೈನಿಕರಿಗೆ ನಿರಂತರ ದಾಳಿಗೆ ಉತ್ತೇಜನ ನೀಡುತ್ತಿದ್ದು, ಅದರಿಂದ ಸಮಸ್ಯೆಯಾಗುತ್ತಿದೆ ಎಂದು ಸಿಖ್ ಸೈನಿಕನೊಬ್ಬ ಮಾಹಿತಿ ನೀಡಿದ್ದ.
ಕೂಡಲೇ ನಾನು, ಆತ ಮೇಲಿನ ಅಧಿಕಾರಿಯಾಗಿದ್ದು, ದಾಳಿಯನ್ನು ಹಿಮ್ಮೆಟ್ಟಿಸಲು ಆತನನ್ನು ನಿಷ್ಕ್ರಿಯಗೊಳಿಸಬೇಕು ಎಂದು ಹೇಳಿದೆ.
ಅದಾದ ಬಳಿಕ ನಮ್ಮ ಪಡೆಗಳು ಅದ್ಯಾವುದೋ ಉತ್ಸಾಹ ತುಂಬಿಕೊಂಡು ತುದಿಯತ್ತ ನುಗ್ಗಿದ್ದರು. ಛಲಬಿಡದೆ ದಾಳಿ ನಡೆಸಿ ಪಾಕ್ ಅಧಿಕಾರಿ ಮತ್ತು ಸೈನಿಕರನ್ನು ಕೊಂದು ಹಾಕಿದರು.
ಈ ಹೋರಾಟದಲ್ಲಿ ಪಾಕಿಸ್ತಾನದ 30 ಸೈನಿಕರು ಮೃತಪಟ್ಟರು. ಉಳಿದಿದ್ದು ಜನಪ್ರಿಯವಾದ ವಿಜಯಗಾಥೆ. ಪಾಕಿಸ್ತಾನದ ಕ್ಯಾಪ್ಟನ್ ಕರ್ನಲ್ ಶೇರ್ ಖಾನ್ ತಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು. ಅದನ್ನು ನಾವು ಪ್ರಶಂಸಿಸಲೇಬೇಕು ಎಂದು ಬಾಜ್ವಾ ಅವರು ಟೈಗರ್ ಹಿಲ್ ಕದನದ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications