ಫಾರ್ವರ್ಡ್ ಪೋಸ್ಟ್ ಬಗ್ಗೆ ತಿಳಿಯಲೇಬೇಕಾದ ಸಂಗತಿ
ಕಾರ್ಗಿಲ್, ಜು. 24 : ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ನಿಯಂತ್ರಣಾ ರೇಖೆ(LoC)ಯ ಅತಿ ಸನಿಹದಲ್ಲಿ ಗುರುವಾರ ಒನ್ಇಂಡಿಯಾ ತಲುಪಿದೆ. ಕಾರ್ಗಿಲ್ ನಲ್ಲಿರುವ ಈ ಗಡಿ ನಿಯಂತ್ರಣಾ ರೇಖೆ ನೋಡುತ್ತಲೇ ಏನೋ ತಲ್ಲಣ, ಏನೋ ರೋಮಾಂಚನ. ಇದನ್ನು ಪದಗಳಲ್ಲಿ ವರ್ಣಿಸುವುದು ಅಸದಳ.
ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದ ಸಮಯದಲ್ಲಿ ಪಾಕಿಸ್ತಾನದಿಂದ ಈ ಫಾರ್ವರ್ಡ್ ಪೋಸ್ಟ್ ಅನ್ನು ಭಾರತ ಕಬಳಿಸಿತ್ತು. ಇಲ್ಲಿ ಶತ್ರುಪಾಳಯದ ನುಸುಳುಕೋರರನ್ನು ಅಥವಾ ವೈರಿಗಳನ್ನು ಅತ್ಯಂತ ಸ್ಪಷ್ಟವಾಗಿ ಕಂಡುಹಿಡಿಯಬಹುದು ಮತ್ತು ಅವರ ಸೂಕ್ಷ್ಮ ಚಲನವಲನಗಳನ್ನು ನಿಖರವಾಗಿ ಗಮನಿಸಬಹುದಾದ್ದರಿಂದ ಇದು ಭಾರೀ ಮಹತ್ವ ಪಡೆದಿದೆ.
ಫಾರ್ವರ್ಡ್ ಪೋಸ್ಟನ್ನು ತಲುಪುವುದು ಬಲು ಕಷ್ಟದ್ದು ಮತ್ತು ಭಾರೀ ಸವಾಲಿನದ್ದು. ಇಲ್ಲಿ ಉಳಿದುಕೊಳ್ಳುವುದು ಮತ್ತು ಇಲ್ಲಿಂದ ಮರಳುವುದು ಇನ್ನೂ ಕಠಿಣವಾದದ್ದು. ಪಾಕಿಸ್ತಾನದ ನುಸುಳಕೋರರು ಈ ಪ್ರದೇಶದಿಂದಲೇ ಭಾರತವನ್ನು ಹೆಚ್ಚಾಗಿ ಪ್ರವೇಶಿಸುವುದರಿಂದ ಭದ್ರತೆಗೆ ಭಾರತ ಇಲ್ಲಿ ಹೆಚ್ಚಿನ ಗಮನ ಹರಿಸಿದೆ. [ಯುದ್ಧ ಮ್ಯೂಸಿಯಂ]

ಇಲ್ಲಿ ವಾಸಿಸುವುದು ಅಪಾಯದ್ದು ಎಂದು ತಿಳಿದಿದ್ದರೂ ಸುಮಾರು 40ರಿಂದ 50 ಜನರು ಈ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ ಮತ್ತು ಇಲ್ಲಿಂದ ತೆರಳಲು ನಿರಾಕರಿಸುತ್ತಿದ್ದಾರೆ. ಆದ್ದರಿಂದ, ಅವರ ರಕ್ಷಣೆಗಾಗಿ ಕೂಡ ಜವಾನರನ್ನು ಭಾರತದ ಸೇನೆ ನಿಯೋಜಿಸಿದೆ ಎಂದು ಸೇನಾಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದರು.
ಮಣ್ಣಿನಿಂದ ನಿರ್ಮಿಸಿದ ಮನೆಗಳಲ್ಲಿ ಗ್ರಾಮಸ್ಥರು ವಾಸಿಸುತ್ತಾರೆ. ಇದರ ಬಳಿಯೇ ಸೇನೆ ಕೂಡ ಮಣ್ಣಿನಿಂದ ನಿರ್ಮಿಸಲಾದ ಕೋಣೆಗಳಲ್ಲಿ ವಾಸಿಸುತ್ತಿದೆ. ಪುಟ್ಟ ಅಡುಗೆಮನೆ, ಡೈನಿಂಗ್ ಟೇಬಲ್, ಒಂದಿಷ್ಟು ಆಹಾರಧಾನ್ಯಗಳು, ಟೈಂ ಪಾಸ್ ಗೆಂದು ಒಂದು ದೂರದರ್ಶನವಿರುವ ಈ ಕೋಣೆಯನ್ನು ಜವಾನರು 'ಮೌಜ್ ಮಸ್ತಿ ಕೋಣೆ' ಎಂದು ಕರೆಯುತ್ತಾರೆ.
ದಹಿಸುವ ಬೇಸಿಲಿದ್ದರೂ, ಕೊರೆಯುವ ಚಳಿಯಿದ್ದರೂ ಲೆಕ್ಕಿಸದೆ ಸೈನಿಕರು ಈ ಗಡಿಭಾಗವನ್ನು ಕಾಯುತ್ತಿರುವುದನ್ನು ನೋಡಿದರೆ ಅವರ ಬಗ್ಗೆ ಹೆಮ್ಮೆ ಮೂಡದೆ ಇರದು. ಕತ್ತಲಾಗುತ್ತಿದ್ದಂತೆ ಬೆನ್ನುಹುರಿಯನ್ನು ಚುಳ್ಳನೆ ಸೀಳುವ ಚಳಿಯನ್ನು ಮೆಟ್ಟಿನಿಂತು ಭಾರತವನ್ನು ಕಾಯುವ ಸೈನಿಕರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. [ಕಾರ್ಗಿಲ್ ಯುದ್ಧ ಸ್ಮಾರಕ]
ಹಳ್ಳಿಗರು ಮತ್ತು ಸೈನಿಕರು ಕ್ರಿಕೆಟ್ ಪ್ರೇಮಿಗಳು. ಭಾರತ ವಿಜಯ ಸಾಧಿಸಿದಾಗ ಪಂಜು ಹೊತ್ತಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ. ಮೊದಲು ಪಟಾಕಿ ಸಿಡಿಸಿ ಸಂತಸಪಡುತ್ತಿದ್ದರು. ಆದರೆ, ಭದ್ರತೆಯ ದೃಷ್ಟಿಯಿಂದ ಪಟಾಕಿಗೆ ಗೋಲಿ ಹೊಡೆದು ಪಂಜು ಮಾತ್ರ ಉರಿಸುತ್ತಾರೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ಗೆದ್ದರಂತೂ ಅವರ ಸಂಭ್ರಮ ಹೇಳತೀರದು.
ಇಲ್ಲಿ ಭಾರತದ ಅನೇಕ ಭಾಗಗಳಿಂದ ಸೈನಿಕರು ಬಂದು ಗಡಿ ಕಾಯುತ್ತಿದ್ದಾರೆ. ಒಂಟಿತನವನ್ನು ಮರೆಯಲು ಒಬ್ಬರಿಗೊಬ್ಬರೂ ಹೆಗಲಾಗಿ ಇರುತ್ತಾರೆ. ಜೊತೆಜೊತೆಯಾಗಿ ಸುಖದುಃಖಗಳನ್ನು ಹಂಚಿಕೊಳ್ಳುತ್ತಾರೆ. ಬಂಧುಬಳಗ, ನೆಂಟರ ನೆನಪು ಅವರನ್ನು ಕಾಡಿದರೂ ಭಾರತವನ್ನು ಕಾಯುವ ಕೈಂಕರ್ಯದ ಮುಂದೆ ಅದೇನೂ ಅಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ.












Click it and Unblock the Notifications