ನಕಲಿ ಸುದ್ದಿಯಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಕೋಟ್ಯಂತರ ರು ನಷ್ಟ!
ಬೆಂಗಳೂರು, ಜುಲೈ 12: ಜನಪ್ರಿಯ ವಿಡಿಯೋ ಸಾಮಾಜಿಕ ಜಾಲ ತಾಣ ಯೂಟ್ಯೂಬಿನಲ್ಲಿ ಆದ ಎಡವಟ್ಟಿನಿಂದ ಸುಮಾರು 500 ಕೋಟಿ ರು ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿರುವುದಾಗಿ ಕಲ್ಯಾಣ್ ಜ್ಯುವೆಲ್ಲರ್ಸ್ ಹೇಳಿದೆ. ನಕಲಿ ಸುದ್ದಿ ಹರಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಕುರಿತು ಕಲ್ಯಾಣ್ ಜುವೆಲ್ಲರ್ಸ್ ಕೇರಳ ಹೈಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಕುವೈತ್ ನಲ್ಲಿ ಇರುವ ನಮ್ಮ ಚಿನ್ನಾಭರಣ ಮಳಿಗೆಯಲ್ಲಿ ಅಧಿಕಾರಿಗಳು ಪರಿಶೀಲನೆಗಾಗಿ ಬಂದಿದ್ದರು. ಇದನ್ನು ಐಟಿ ದಾಳಿ ಎಂಬಂತೆ ಬಿಂಬಿಸಿ ಈ ವಿಡಿಯೋ ಮಾಡಿ, ಸುದ್ದಿ ಪ್ರಸಾರ ಮಾಡಲಾಗಿದೆ.

ಕಲ್ಯಾಣ್ ಜುವೆಲ್ಲರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಪಪ್ರಚಾರ ನಡೆಸಿ ವಿಡಿಯೋ ಮಾಡಲಾಗಿತ್ತು. ಇದರಿಂದಾಗಿ ಈ ಪ್ರಮಾಣದ ನಷ್ಟ ಉಂಟಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.
ನಮ್ಮ ಸಂಸ್ಥೆಯ ಹೆಸರು, ಲೋಗೋ ಬಳಸಿ ಸುದ್ದಿ ಮಾಡಲಾಗಿದೆ ಇದರಿಂದ ನಮ್ಮ ಗ್ರಾಹಕರಿಗೆ ನಮ್ಮ ಬ್ರ್ಯಾಂಡ್ ಮೇಲಿದ್ದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ನಕಲಿ ಚಿನ್ನ ವಶ ಎಂದು ವಿಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.
ಕೇರಳ ಮೂಲದ ಕಲ್ಯಾಣ್ ಜ್ಯುವೆಲ್ಲರ್ಸ್ ರೀಟೈಲ್ ಸಂಸ್ಥೆಯು ಭಾರತ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ 120ಕ್ಕೂ ಅಧಿಕ ಮಳಿಗೆಯನ್ನು ಹೊಂದಿದೆ. ಅಮಿತಾಬ್ ಬಚ್ಚನ್, ಕತ್ರೀನಾ ಕೈಫ್, ನಾಗಾರ್ಜುನ, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಜನಪ್ರಿಯ ನಟ, ನಟಿಯರು ಈ ಸಂಸ್ಥೆಯ ರಾಯಭಾರಿಗಳಾಗಿದ್ದಾರೆ.












Click it and Unblock the Notifications