ರಾಮನ ಮೇಲೆ ಕೇಸು ಹಾಕಿದ ಭೂಪನಿಗೆ ಕೇಳಿದ್ದು 3 ಪ್ರಶ್ನೆ
ಪಟ್ನಾ, ಫೆಬ್ರವರಿ 01 : ತ್ರೇತಾಯುಗದ ಶ್ರೀರಾಮ ತನ್ನ ಮಡದಿ ಸೀತೆಯನ್ನು ಕಾಡಿಗಟ್ಟಿ ಕ್ರೌರ್ಯವೆಸಗಿದ್ದ, ಆತನ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಅಂತ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲ ಠಾಕೂರ್ ಚಂದನ್ ಸಿಂಗ್ ಎಂಬಾತನಿಗೆ ನ್ಯಾಯಮೂರ್ತಿಗಳು ಕೇಳಿದ್ದು ಮೂರೇಮೂರು ಪ್ರಶ್ನೆಗಳು.
1) ರಾಮ ಸೀತೆಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ್ದಕ್ಕೆ ನಿಮ್ಮ ಬಳಿ ಸಾಕ್ಷಿಗಳಿವೆಯಾ?
2) ತ್ರೇತಾಯುಗದಲ್ಲಿ ರಾಮ ಮತ್ತು ಸೀತೆಯ ಮದುವೆಯಾದ ನಿಖರವಾದ ದಿನಾಂಕ ನಿಮಗೆ ಗೊತ್ತಿದೆಯಾ?
3) ರಾಮ ಸೀತೆಯನ್ನು ಯಾವ ಕಾಡಿಗೆ ಅಟ್ಟಿದ್ದ, ಅದು ಎಲ್ಲಿದೆ?
ಈ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ವಕೀಲ ತಬ್ಬಿಬ್ಬಾಗಿದ್ದು ಮಾತ್ರವಲ್ಲ, ಉತ್ತರಕ್ಕಾಗಿ ತಡಬಡಾಯಿಸಿದ್ದಾರೆ. ನಿಮಗೇನಾದ್ರೂ ಬುದ್ಧಿಯಿದೆಯಾ, ಆಟ ಆಡ್ತಿದ್ದೀರಾ ಅಂತ ವಕೀಲನ ಬೆವರಿಳಿಸಿದ ಮ್ಯಾಜಿಸ್ಟ್ರೇಟ್ ರಾಮ್ ಬಿಹಾರಿ, ಈ ಕೇಸು ನಿಷ್ಪ್ರಯೋಜಕ ಎಂದು ಹೇಳಿ ವಜಾ ಮಾಡಿದ್ದಾರೆ. [ತ್ರೇತಾಯುಗದ ರಾಮಲಕ್ಷ್ಮಣರ ವಿರುದ್ಧ ದೌರ್ಜನ್ಯದ ಕೇಸ್!]
ಈ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಕೂಡ ಅಪಹಾಸ್ಯಕ್ಕೆ ಕಾರಣವಾಗಿದೆ. ವೀರು ಗದಗ್ ಎಂಬುವವರು, "ಪ್ರೂವ್ ಮಾಡಿಯಾದ ಮೇಲೆ ಶಿಕ್ಷೆ ಕೊಡಿಸುವುದು ಯಾರಿಗೆ? ಸೀತೆಯನ್ನು ಕಿಡ್ನಾಪ್ ಮಾಡಿದ ರಾವಣನ ಮೇಲೆ ಕೇಸೇಕಿಲ್ಲ? ಕೆಲಸವಿಲ್ಲದ ಬಡಿಗ ಮಗನ ಅದೇನೋ ಮಾಡಿದನಂತೆ. ಚೀಪ್ ಪಬ್ಲಿಸಿಟಿಗೆ ಇದನ್ನೆಲ್ಲಾ ಮಾಡ್ತಾರೆ ಮೂರ್ಖರು" ಎಂದು ತರಾಮರಿ ಬಾರಿಸಿದ್ದಾರೆ.
ಕಥೆಯಲ್ಲಿ ಲವಕುಶರ ಬಾಲ್ಯದ ನಂತರ ಏನಾಗುತ್ತದೋ? ಅದಕ್ಕೂ ಒಂದು ಮಿಸ್ಸಿಂಗ್ ಕೇಸ್ ಈ ವಕೀಲರು ಮಾಡ್ತಾರೇನೋ? ಅಂತ ಮಂಜೇಶ್ ಮಂಜು ಎಂಬುವವರು ವ್ಯಂಗ್ಯ ಮಾಡಿದ್ದಾರೆ. ಇದಕ್ಕೇ ಇರಬೇಕು ಈ ಯುಗವನ್ನು ಕಲಿಯುಗ ಅಂತ ಕರೆಯೋದು ಎಂದು ಮತ್ತೊಬ್ಬರು ಮಾತಿನ ಚಾಟಿ ಬೀಸಿದ್ದಾರೆ. [ರಾಮ ಮಹಾನ್ ಕುಡುಕ ಎಂದಿದ್ದ ಯೋಗೇಶ್ ಮಾಸ್ಟರ್]
ಮಹಾಕಾವ್ಯ ರಾಮಾಯಣ, ಮರ್ಯಾದಾ ಪುರುಷೋತ್ತಮ ರಾಮನ ಹುಟ್ಟು, ರಾಮನ ಜೀವನವನ್ನು ಕೆಲವರು ಅಪಹಾಸ್ಯಕ್ಕೆ ಈಡುಮಾಡುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ನಮ್ಮ ಕರ್ನಾಟಕದಲ್ಲೇ ಇರುವ ಇಬ್ಬರು ಪ್ರಭೃತಿಗಳಾದ ಕೆಎಸ್ ಭಗವಾನ್ ಮತ್ತು ಸಾಹಿತಿ ಯೋಗೇಶ್ ಮಾಸ್ಟರ್ ರಾಮ ಕುಡುಕ, ಲಂಪಟ ಎಂದೆಲ್ಲ ಹೇಳಿ ವಿವಾದವೆಬ್ಬಿಸಿದ್ದಾರೆ.
ಅನವಶ್ಯಕವಾಗಿ ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವ ಇವರು ಏನೇ ಮಾತಾಡಿದರೂ ಅದನ್ನು ವಿರೋಧಿಸಿದರೆ 'ಅಸಹಿಷ್ಣುತೆ'ಗೆ ಗುರಿಯಾಗಬೇಕಾದ ಪರಿಸ್ಥಿತಿ. ಮಾತಾಡಲು ಅವಕಾಶ ಮಾಡಿಕೊಡದಿದ್ದರೆ ಈ ಮಹಾನ್ ಬುದ್ಧಿಜೀವಿಗಳ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡಂತೆ!













Click it and Unblock the Notifications