ಮೋದಿ ಟೀಕಿಸಿದ್ದ ಪತ್ರಕರ್ತನಿಗೆ ಒಂದು ವರ್ಷ ಜೈಲು ಶಿಕ್ಷೆ
ಇಂಫಾಲ, ಡಿಸೆಂಬರ್ 19: ಬಿಜೆಪಿ ಸರ್ಕಾರವನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಮಣಿಪುರದ ಸುದ್ದಿವಾಹಿನಿಯ ಪತ್ರಕರ್ತನಿಗೆ ರಾಷ್ಟ್ರೀಯ ಭದ್ರತೆ ಕಾಯ್ದೆಯ ಅಡಿಯಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ.
ಮಣಿಪುರದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ 39 ವರ್ಷದ ಕಿಶೋರ್ ಚಂದ್ರ ವಂಘೇಮ್ ಅವರನ್ನು ನವೆಂಬರ್ 27ರಂದು ಬಂಧಿಸಲಾಗಿತ್ತು.
'ದೇಶದ ಭದ್ರತೆಗೆ ಯಾವುದೇ ರೀತಿಯ ಧಕ್ಕೆ ತರುವ ಚಟುವಟಿಕೆಗಳಿಂದ ಅವರನ್ನು ತಡೆಯಲು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ನಿಭಾಯಿಸಲು' ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದರು.
ಫೇಸ್ ಬುಕ್ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬೈರೆನ್ ಸಿಂಗ್ ಅವರನ್ನು ಟೀಕಿಸಿದ್ದ ಕಾರಣಕ್ಕೆ ಕಿಶೋರ್ ಚಂದ್ರ ಅವರನ್ನು ಬಂಧಿಸಲಾಗಿತ್ತು.

ಬೈರೆನ್ ಸಿಂಗ್ ಆಡುವ ಗೊಂಬೆ
ಬೈರೆನ್ ಸಿಂಗ್ ಅವರು ಪ್ರಧಾನಿ ಮೋದಿ ಅವರು ಆಡಿಸುವ ಗೊಂಬೆ. ಮಣಿಪುರಕ್ಕೆ ಸಂಬಂಧವೇ ಇಲ್ಲದ ರಜಪೂತ ರಾಣಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಆರೆಸ್ಸೆಸ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಧೈರ್ಯವಿದ್ದರೆ ತಮ್ಮನ್ನು ಬಂಧಿಸುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು ಎನ್ನಲಾಗಿದೆ.
|
ಸ್ವಾತಂತ್ರ್ಯ ಹೋರಾಟಗಾರರ ಪರ ಪೋಸ್ಟ್
'ಮಣಿಪುರದ ಸ್ವಾತಂತ್ರ್ಯ ಹೋರಾಟಗಾರರನ್ನು ವಂಚಿಸಬೇಡಿ, ಅವಮಾನಿಸಬೇಡಿ' ಎಂದು ಒಂದು ಫೇಸ್ ಬುಕ್ ಪೋಸ್ಟ್ನಲ್ಲಿ ಕಿಶೋರ್ ಚಂದ್ರ ಹೇಳಿದ್ದರು.
'ಇದು ಸರ್ಕಾರವು ತನ್ನ ಕಾನೂನು ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಘಟನೆಯಲ್ಲದೆ ಮತ್ತೇನೂ ಅಲ್ಲ' ಎಂದು ಪತ್ರಕರ್ತನ ಪರ ವಕೀಲರು ಆರೋಪಿಸಿದ್ದಾರೆ.
|
ಪ್ರಶ್ನಿಸಲು ತೀರ್ಮಾನ
ಸ್ಥಳೀಯ ವಾಹಿನಿ ಐಎಸ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಚಂದ್ರ, ಫೇಸ್ ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕುವ ಮುಂಚೆಯೇ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಗರಿಷ್ಠ ಅವಧಿಯ ಶಿಕ್ಷೆಯನ್ನು ಕಿಶೋರ್ ಚಂದ್ರ ಅವರಿಗೆ ವಿಧಿಸಲಾಗಿದ್ದು, ಅದನ್ನು ಪ್ರಶ್ನಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
|
ಮಣಿಪುರ ಪತ್ರಕರ್ತ ಬೆಂಬಲವಿಲ್ಲ
ಅವರ ಬಂಧನವನ್ನು ಪತ್ರಕರ್ತರ ಒಕ್ಕೂಟ ಮತ್ತು ಭಾರತೀಯ ಪತ್ರಿಕಾ ಸಮಿತಿ ಖಂಡಿಸಿವೆ. ಆದರೆ, ಅಖಿಲ ಮಣಿಪುರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಲ್ಪ ಮಟ್ಟದ ಬೆಂಬಲವಷ್ಟೇ ಸಿಕ್ಕಿದೆ. 'ಸಾಮಾಜಿಕ ಜಾಲತಾಣದಲ್ಲಿ ನಾಟಕೀಯವಾಗಿ ಭಾಷಣ ಮಾಡುವುದು ಪತ್ರಕೋದ್ಯಮ ಎನಿಸಿಕೊಳ್ಳುವುದಿಲ್ಲ' ಎಂದು ಅದು ಹೇಳಿದೆ.












Click it and Unblock the Notifications