ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ತ್ರಿಪುರ ಸ್ಟೇಟ್ ರೈಫಲ್ಸ್
ಅಗರ್ತಲಾ, ನವೆಂಬರ್ 22: ಮಂಗಳವಾರ ತ್ರಿಪುರಾದಲ್ಲಿ ಪತ್ರಕರ್ತರೊಬ್ಬರನ್ನು ತ್ರಿಪುರಾ ಸ್ಟೇಟ್ ರೈಫಲ್ಸ್ ನ ಎರಡನೇ ಬೆಟಾಲಿಯನ್ನಿನ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಬೆಂಗಾಲಿ ಪತ್ರಿಕೆ ಸ್ಯಂದನ್ ಪತ್ರಿಕಾದ ಸುದೀಪ್ ದತ್ತಾ ಭೌಮಿಕ್ ಹತ್ಯೆಯಾದ ಪತ್ರಕರ್ತರಾಗಿದ್ದಾರೆ.
ತ್ರಿಪುರಾ: ಗಲಭೆ ವರದಿ ಮಾಡುತ್ತಿದ್ದ ಪತ್ರಕರ್ತನ ಕೊಲೆ
ತ್ರಿಪುರಾ ರಾಜಧಾನಿ ಅಗರ್ತಲಾದಿಂದ 20 ಕಿಲೋಮೀಟರ್ ದೂರದ ಆರ್.ಕೆ ನಗರದಲ್ಲಿರುವ ಎರಡನೇ ಬೆಟಾಲಿಯನ್ನಿನ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ.
ಸುದೀಪ್ ಅಪರಾಧ ವಿಭಾಗದ ವರದಿಗಾರರಾಗಿದ್ದರು. ಅವರು ತ್ರಿಪುರಾ ಸ್ಟೇಟ್ ರೈಫಲ್ಸ್ ನ ಕಮಾಂಡೆಂಟ್ ರನ್ನು ಭೇಟಿಯಾಗಲು ಹೋಗಿದ್ದರು. ಇದಕ್ಕಾಗಿ ಮುಂಗಡ ಅವಕಾಶವನ್ನೂ ಕೋರಿದ್ದರು. ಮಂಗಳವಾರ ಕಮಾಂಡೆಂಟ್ ಭೆಟಿಯಾಗಲು ಹೋದಾಗ ಪಿಎಸ್ಒ ಜತೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಪಿಎಸ್ಒ ಸುದೀಪ್ ರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಸುದೀಪ್ ಮೇಲೆ ಎರಡು ಸುತ್ತು ಗುಂಡಿಕ್ಕಲಾಗಿತ್ತು. ತಕ್ಷಣ ಅಗರ್ತಲಾದ ಜಿಬಿ ಪಂತ್ ಆಸ್ಪತ್ರೆಗೆ ಅವರನ್ನು ಕರೆತರಲಾಗಿತ್ತಾದರೂ ಅಷ್ಟರಲ್ಲಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇದು ಕಳೆದ ಎರಡು ತಿಂಗಳ ಅಂತರದಲ್ಲಿ ನಡೆದ ಎರಡನೇ ಪತ್ರಕರ್ತನ ಹತ್ಯೆಯಾಗಿದೆ. ದಿನ ರಾತ್ ಎಂಬ ಸ್ಥಳೀಯ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಪತ್ರಕರ್ತ ಶಂತನು ಭೌಮಿಕ್ ಸೆಪ್ಟೆಂಬರ್ 20ರಂದು ಕೊಲೆಯಾಗಿದ್ದರು.