Jharkhand Assembly Election 2024: "ರಾಹುಲ್ ಗಾಂಧಿಯಿಂದ ಸಂವಿದಾನಕ್ಕೆ ಅವಮಾನ"
Jharkhand Assembly Election 2024: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಇದೀಗ ಸಂವಿಧಾನ ವಿಚಾರವನ್ನಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಆಕ್ರೋಶ ಹೊರಹಾಕಿದ್ದಾರೆ.
ಪಲಮು ನಗರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಕಲಿ ಪ್ರತಿಯನ್ನು ಪ್ರದರ್ಶಿಸುವ ಮೂಲಕ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪ ಮಾಡಿದರು.

ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ್ದು, ಎರಡು ದಿನಗಳ ನಂತರ ಅವರ ಗುಟ್ಟು ಬಟಾಬಯಲಾಗಿದೆ. ರಾಹುಲ್ ಗಾಂಧಿ ಅವರು ಪ್ರದರ್ಶಿಸಿದ್ದ ಪ್ರತಿ ಕೆಲವರಿಗೆ ಸಿಕ್ಕಿದ್ದು, ಮುಖಪುಟದಲ್ಲಿ ಭಾರತದ ಸಂವಿಧಾನ ಎಂದು ಬರೆಯಲಾಗಿದ್ದ ಆ ಪುಸ್ತಕದಲ್ಲಿ ಖಾಲಿ ಪುಟಗಳಿವೆ. ಈ ರೀತಿ ಸಂವಿಧಾನವನ್ನು ಅಪಹಾಸ್ಯ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.
ಇದು ನಂಬಿಕೆ & ವಿಶ್ವಾಸದ ವಿಚಾರ ಆಗಿದೆ. ಸಂವಿಧಾನ ಎಂಬ ನಕಲಿ ಪ್ರತಿಯನ್ನು ತೋರಿಸುವ ಮೂಲಕ ನೀವು ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನಿಕ ಸಭೆಯನ್ನು ಅವಮಾನ ಮಾಡಿದ್ದೀರಿ. ಹೀಗೆ ಕಾಂಗ್ರೆಸ್ ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ಆರೋಪ ಮಾಡಿದರು.
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲು ನಿರ್ಧರಿಸಿದ್ದಾರೆ ಅಂತಾ ಇದೇ ವೇಳೆ ಹೇಳಿದರು. ಇತರ ಹಿಂದುಳಿದ ವರ್ಗಗಳು, ಬುಡಕಟ್ಟು ಸಮುದಾಯ ಹಾಗೂ ದಲಿತರಿಗೆ ಕಲ್ಪಿಸಲಾಗಿರುವ ಮೀಸಲಾತಿಯನ್ನು ಕಾಂಗ್ರೆಸ್ ಕಸಿಯಲು ಯತ್ನಿಸುತ್ತಿದೆ ಮತ್ತು ಅದನ್ನು ಅಲ್ಪ ಸಂಖ್ಯಾತರಿಗೆ ನೀಡಲು ಪ್ಲಾನ್ ಮಾಡಿದೆ ಎಂದು ಆರೋಪಿಸಿದರು.
ಜಾರ್ಖಂಡ್ನ 81 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ಎಜೆಎಸ್ಯು: ಇಂಡಿಯಾ ಮೈತ್ರಿ ಕೂಟ ಸಪ್ತ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಇನ್ನು ನವೆಂಬರ್ 08ರಂದು ಬಿಜೆಪಿ ಮಿತ್ರ ಪಕ್ಷ ಎಜೆಎಸ್ಯು ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಹಾಗಾದರೆ ಇದರಲ್ಲಿ ಯಾವೆಲ್ಲ ಅಂಶಗಳು ಇವೆ ಎಂದು ಇಲ್ಲಿ ತಿಳಿಯಿರಿ.
ಎಜೆಎಸ್ಯು ಪಕ್ಷವು ರಾಜ್ಯದ ಪ್ರತಿಯೊಂದು ಬಡ ಕುಟುಂಬಕ್ಕೆ ವಾರ್ಷಿಕವಾಗಿ 1.21 ಲಕ್ಷ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಇನ್ನು ಪಕ್ಷದ ಮುಖ್ಯಸ್ಥ ಸುದೇಶ್ ಮೆಹ್ತೋ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ 1.21 ಲಕ್ಷ ಆರ್ಥಿಕ ನೆರವು, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ, ಮಹಿಳೆಯರ ಸುರಕ್ಷತೆಗೆ ಒಂದು ಆಯೋಗ, ಕೆಲಸ ಮಾಡುವ ಮಹಿಳೆಯರಿಗೆ ವಸತಿ ನಿಲಯಗಳ ಸ್ಥಾಪನೆ, ಪ್ರತಿಯೊಬ್ಬರಿಗೆ 25 ಲಕ್ಷದ ಆರೋಗ್ಯ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಡಿಯಲ್ಲಿ ಎಜೆಎಸ್ಯು 10, 10 ಜೆಡಿ(ಯು) 2, ಎಲ್ಜೆಪಿ (ರಾಮ್ ವಿಲಾಸ್) 1 ಸ್ಥಾನದಲ್ಲಿ ಸ್ಪರ್ಧಿಸುತ್ತಿವೆ. ಉಳಿದ 68 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.












Click it and Unblock the Notifications