ಎಂಜಿಆರ್ ಸಮಾಧಿ ಬಳಿ ಜಯಲಲಿತಾ ಅಂತ್ಯ ಸಂಸ್ಕಾರ
ಚೆನ್ನೈ, ಡಿಸೆಂಬರ್ 06 : ಸೋಮವಾರ ರಾತ್ರಿ 11.30ರ ಸುಮಾರಿಗೆ ಇಹಲೋಕ ತ್ಯಜಿಸಿದ ಜಯಲಲಿತಾ ಅವರ ಅಂತ್ಯ ಸಂಸ್ಕಾರ ಮರೀನಾ ಬೀಚ್ ನಲ್ಲಿರುವ ಎಂಜಿ ರಾಮಚಂದ್ರನ್ ಅವರ ಸಮಾಧಿ ಬಳಿ ಮಂಗಳವಾರ ಸಂಜೆ 4.30ಕ್ಕೆ ನೆರವೇರಲಿದೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಜಯಾ ಅವರ ಅಧಿಕೃತ ನಿವಾಸವಾಗಿದ್ದ ಪೋಯೆಸ್ ಗಾರ್ಡನ್ ನಿಂದ ರಾಜಾಜಿ ಹಾಲ್ಗೆ ರಾಷ್ಟ್ರಧ್ವಜದಿಂದ ಸುತ್ತಲಾಗಿದ್ದ ತಮಿಳರ ನಾಯಕಿ ಜಯಲಲಿತಾ ಅವರ ದೇಹವನ್ನು ಮಂಗಳವಾರ ಬೆಳಿಗ್ಗೆ ತರಲಾಯಿತು.
ಎಂಜಿ ರಾಮಚಂದ್ರನ್ ಅವರ ಅಂದಕಾಲತ್ತಿಲ್ ಪ್ರೇಯಸಿಯಾಗಿದ್ದ ಜಯಲಲಿತಾ ಅವರ ಸಮಾಧಿಯನ್ನು ಎಂಜಿಆರ್ ಸಮಾಧಿ ಬಳಿಯೇ ನಿರ್ಮಿಸಲಾಗುತ್ತಿದ್ದುದು ಪೂರ್ವನಿಯೋಜಿತ. ಇದಕ್ಕಾಗಿ ಸ್ಥಳವನ್ನೂ ನಿಗದಿಪಡಿಸಲಾಗಿದೆ. [68 ರೀಲಿನ 'ಅಮ್ಮ' ಸಿನಿಮಾ ಮತ್ತು ಕನ್ನಡ ದಿನಪತ್ರಿಕೆಗಳು]
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವರು ಈ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.
ರಾಜಾಜಿ ಹಾಲ್ ಗೆ ದುಃಖತಪ್ತ ಅಭಿಮಾನಿಗಳ ಪ್ರವಾಹ ಹರಿದುಬರುತ್ತಿದೆ. ಅವಕಾಶ ವಂಚಿತರಾದ ಕೆಲವರು ಕಾಂಪೌಂಡ್ ಗೇಟನ್ನು ಮುರಿದು ಒಳನುಗ್ಗಿದ್ದಾರೆ. ನುಗ್ಗುತ್ತಿರುವ ಜನರನ್ನು ಚೆದುರಿಸಲು ಮತ್ತು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು.