Jan Aakrosh Yatra: ಕಾಂಗ್ರೆಸ್ಗೆ ಟಕ್ಕರ್ ಕೊಡುವ ಬದಲು ಬಿಜೆಪಿಗೆ ಉಲ್ಟಾ ಹೊಡಿತಾ ಜನ ಆಕ್ರೋಶ ಯಾತ್ರೆ?
ಜೈಪುರ ಡಿಸೆಂಬರ್ 20: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಟಕ್ಕರ್ ಕೊಡಲು ರಾಜಸ್ಥಾನದಲ್ಲಿ ಬಿಜೆಪಿ ಜನ ಆಕ್ರೋಶ ಯಾತ್ರೆಯನ್ನು ಪ್ರಾರಂಭಿಸಿತು. ಆದರೆ ಜನ ಆಕ್ರೋಶ ಯಾತ್ರೆಗೆ ಜನ ಒಲವು ತೋರಿದಂತೆ ಕಾಣಿಸಲಿಲ್ಲ.
ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿಯ ಜನ ಆಕ್ರೋಶ ಯಾತ್ರೆ ಯಾವುದೇ ಪರಿಣಾಮ ಬೀರಲಿಲ್ಲ. ಯಾತ್ರೆಯಲ್ಲಿ ಸಾರ್ವಜನಿಕರು ನಿರೀಕ್ಷೆಯಂತೆ ಭಾಗವಹಿಸಲಿಲ್ಲ. ಜೊತೆಗೆ ಸಾರ್ವಜನಿಕರಲ್ಲಿ ಯಾತ್ರೆಯ ಬಗ್ಗೆ ಒಲವು ಸೃಷ್ಟಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸರ್ಕಾರದ ಬಗ್ಗೆ ಯಾವುದೇ ವ್ಯಾಪಕ ವಿರೋಧವಿರಲಿಲ್ಲ. ಮತ್ತೊಂದು ಪ್ರಮುಖ ವಿಚಾರ ಅಂದರೆ ರಾಜಸ್ಥಾನದಲ್ಲಿ ಬಿಜೆಪಿಯ ಹಿರಿಯ ನಾಯಕರು ಎಲ್ಲಿಯೂ ಒಗ್ಗಟ್ಟಾಗಿ ಕಾಣಲಿಲ್ಲ. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿಯ ಆಂತರಿಕ ವಲಯದಲ್ಲಿ ವೈಮನಸ್ಸುಗಳಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ರಾಜಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ನೇತೃತ್ವದಲ್ಲಿ ನಡೆಯುತ್ತಿರುವ ಜನ ಆಕ್ರೋಶ ರಥಯಾತ್ರೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಪೈಪೋಟಿ ನೀಡಲಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರೋಧಿ ವಾತಾವರಣ ನಿರ್ಮಾಣವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ವಾತಾವರಣ ಬೇರೆಯೇ ಆಗುತ್ತಿದೆ. ಬಿಜೆಪಿಯ ರಾಜ್ಯ ನಾಯಕತ್ವ ಪರಸ್ಪರ ಕಚ್ಚಾಡುತ್ತಿರುವಂತೆ ಕಾಣುತ್ತಿದೆ. ಇದರಿಂದ ಒಳ್ಳೆಯ ವ್ಯಕ್ತಿ ಎಂಬ ಇಮೇಜ್ ಹೊಂದಿರುವ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರ ನಾಯಕತ್ವದಲ್ಲಿ ಏನಾದರೂ ಲೋಪವಾಗಿದೆಯೇ ಅಥವಾ ಪೂನಿಯಾ ಅವರ ಸಹಚರರ ಅಸಹಕಾರವು ಪಕ್ಷದ ಕಾರ್ಯಕ್ರಮವನ್ನು ಮರೆಮಾಡಿದೆಯೇ ಎಂದು ಬಿಜೆಪಿ ಹೈಕಮಾಂಡ್ ಆಶ್ಚರ್ಯ ಪಡುತ್ತಿದೆ.

ಬಿಜೆಪಿ ಜನ ಆಕ್ರೋಶ ಯಾತ್ರೆ
ಇದಕ್ಕೆ ಬಹುಮುಖ್ಯವಾದ ಕಾರಣ ಕೂಡ ಇದೆ. ಅದೇನೆಂದರೆ ರಾಜಸ್ಥಾನದ ಹಿರಿಯ ನಾಯಕಿ ವಸುಂಧರಾ ರಾಜೇ ಅವರನ್ನು ಯಾತ್ರೆಯಿಂದ ದೂರವಿಟ್ಟಿರುವುದು. ಈ ಇಡೀ ಯಾತ್ರೆಯ ಕಾರ್ಯಕ್ರಮದಿಂದ ರಾಜಸ್ಥಾನದ ಹಿರಿಯ ನಾಯಕಿ ವಸುಂಧರಾ ರಾಜೇ ಅವರನ್ನು ದೂರವಿಡುವ ಮೂಲಕ ರಾಜ್ಯ ಸಂಘಟನೆಯು ತನ್ನ ಪ್ರಾಮುಖ್ಯತೆಯನ್ನು ತೋರಿಸಲು ಪ್ರಯತ್ನಿಸಿದರೆ, ರಾಜ್ಯದಲ್ಲಿ ಪೂನಿಯಾ ಅವರ ಪ್ರತಿಸ್ಪರ್ಧಿ ನಾಯಕರೂ ಈ ಕಾರ್ಯಕ್ರಮದಲ್ಲಿ ಅರೆಮನಸ್ಸಿನಿಂದ ತೊಡಗಿಸಿಕೊಂಡಿದ್ದಾರೆ.
ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ಹತ್ತು ತಿಂಗಳು ಬಾಕಿ ಇದೆ. ಹೀಗಾಗಿ ಜನ ಆಕ್ರೋಶ್ ಯಾತ್ರೆಯಂತಹ ಸಮಯೋಚಿತ ದೊಡ್ಡ ಕಾರ್ಯಕ್ರಮವು ಇಡೀ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಉತ್ತಮ ಅವಕಾಶವಾಗಿದೆ. ಆದರೆ ಬಿಜೆಪಿ ಸ್ವತಃ ತನ್ನದೇ ಆದ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಈ ಬಾರಿಯ ಜನ ಆಕ್ರೋಶ ಯಾತ್ರೆಯಲ್ಲಿ ರಾಜ್ಯ ಸಂಘಟನೆಯಿಂದ ಕಣಕ್ಕಿಳಿದಿರುವ ವಸುಂಧರಾ ರಾಜೇ ಅವರಿಗೆ ಜವಾಬ್ದಾರಿಯಾಗಲಿ, ಕಾರ್ಯಕ್ರಮವಾಗಲಿ ಎಲ್ಲಿಯೂ ನೀಡಲಾಗಿಲ್ಲ. ರಾಜೇ ಅವರು ಕೂಡ ಈ ಬಗ್ಗೆ ಏನನ್ನೂ ಹೇಳಿಲ್ಲ.
ರಾಜ್ಯಾಧ್ಯಕ್ಷರಾದ ಪೂನಿಯಾ ಅವರೊಂದಿಗೆ ಅವರದೇ ಪದಾಧಿಕಾರಿಗಳೂ ಸಂಪರ್ಕ ಹೊಂದಿಲ್ಲ ಎಂಬುದು ಬಿಜೆಪಿ ಆಂತರಿಕ ವಲಯದಲ್ಲಿ ಮನಸ್ತಾಪಗಳಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ವಸುಂಧರಾ ರಾಜೇ ಅವರು ಬದಲಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಅನೇಕ ಬಿಜೆಪಿ ನಾಯಕರಿಗೆ ಪೂನಿಯಾ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಇಷ್ಟವಿಲ್ಲ, ಆದರೆ ಈ ನಾಯಕರು ಪಕ್ಷದ ಒಗ್ಗಟ್ಟಿಗೆ ಧಕ್ಕೆಯಾಗಬಾರದು ಎಂಬ ತಮ್ಮ ಆಸೆಯನ್ನು ಸಹ ಹೊಂದಿಲ್ಲ.

ಬಿಜೆಪಿ ಆಂತರಿಕ ವಲಯದಲ್ಲಿ ಮನಸ್ತಾಪ
ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಹಲವು ಬಣಗಳಾಗಿ ಒಡೆದಿದೆ. ವಸುಂಧರಾ ರಾಜೇ, ಓಂ ಬಿರ್ಲಾ, ರಾಜೇಂದ್ರ ರಾಥೋಡ್, ಗುಲಾಬ್ಚಂದ್ ಕಟಾರಿಯಾ, ಗಜೇಂದ್ರಸಿಂಗ್ ಶೇಖಾವತ್, ಅರ್ಜುನ್ ರಾಮ್ ಮೇಘವಾಲ್, ರಾಜ್ಯವರ್ಧನ್ ರಾಥೋಡ್, ಓಂ ಪ್ರಕಾಶ್ ಮಾಥೂರ್, ಕಿರೋರಿಲಾಲ್ ಮೀನಾ ಮತ್ತು ಇತರ ಕೆಲವು ಹಿರಿಯ ನಾಯಕರು ರಾಜಸ್ಥಾನದಲ್ಲಿ ವ್ಯಾಪಕ ಜನಬಲವನ್ನು ಹೊಂದಿದ್ದಾರೆ. ಅವರಲ್ಲಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಕಿರಿಯರಾಗಿದ್ದು, ಅವರ ಯಶಸ್ಸು ಯಾರೂ ನೋಡಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಲ್ಲಾ ನಾಯಕರು ತಮ್ಮದೇ ಆದ ಪ್ರಭಾವದ ಕ್ಷೇತ್ರಗಳನ್ನು ಹೊಂದಿದ್ದಾರೆ, ತಮ್ಮದೇ ಆದ ಜಾತಿಗಳು, ತಮ್ಮದೇ ಆದ ಜನರು ಮತ್ತು ಅವರ ಸ್ವಂತ ಉದ್ದೇಶಗಳನ್ನು ಹೊಂದಿದ್ದಾರೆ. ಆದ್ದರಿಂದಲೇ ಎಲ್ಲರನ್ನು ಒಗ್ಗೂಡಿಸುವುದು ಯಾವ ಬಿಜೆಪಿ ನಾಯಕರಿಗೂ ಸುಲಭದ ಮಾತಲ್ಲ.
ಡಿಸೆಂಬರ್ 1 ರಂದು ರಾಜಧಾನಿ ಜೈಪುರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಜನ ಆಕ್ರೋಶ ಯಾತ್ರೆ ರಥಗಳಿಗೆ ಚಾಲನೆ ನೀಡಿದ್ದರು. ರಾಜ್ಯದ 200 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ನಗರ ಪಟ್ಟಣಗಳಿಗೆ ಜನ ಆಕ್ರೋಶ ರಥಗಳನ್ನು ನಿರ್ಮಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲು ಹೊರಟಿರುವ ಈ ರಥಗಳು ರಾಜ್ಯದೆಲ್ಲೆಡೆ ಸಂಚರಿಸುತ್ತಿದ್ದರೂ ಎಲ್ಲೂ ಜನ ಜಮಾಯಿಸುತ್ತಿಲ್ಲ. ಎಲ್ಲಿಂದಲೂ ನಿರೀಕ್ಷಿತ ಬೆಂಬಲ ಇಲ್ಲದಿರುವುದರಿಂದ ಮತ್ತು ಸಾರ್ವಜನಿಕರಲ್ಲಿ ಗೆಹ್ಲೋಟ್ ಸರ್ಕಾರದ ಬಗ್ಗೆ ಯಾವುದೇ ಗೋಚರ ಅಸಮಾಧಾನವಿಲ್ಲದ ಯಾತ್ರೆ ನಿರಾಶೆಗೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ, ರಾಜಸ್ಥಾನದ ವಿವಿಧ ಬಿಜೆಪಿ ಕಾರ್ಯಕ್ರಮಗಳಲ್ಲಿ ಜನ ಆಕ್ರೋಶ ಯಾತ್ರೆಯನ್ನು ಅತ್ಯಂತ ಫ್ಲಾಪ್ ಘಟನೆ ಎಂದು ಕರೆಯಲಾಗುತ್ತಿದೆ.

ಬಿಜೆಪಿ ಯಾತ್ರೆಯ ಬಗ್ಗೆ ಹಲವಾರು ದೂರು
ಕೆಲವೆಡೆ ಯಾತ್ರೆಯ ರಥವನ್ನು ಗ್ರಾಮಗಳಿಗೆ ಪ್ರವೇಶಿಸಲು ಬಿಡದ ಸುದ್ದಿ ಇದೆ. ಇನ್ನೂ ಕೆಲವೆಡೆ ಯಾತ್ರೆಗೆ ಸಂಬಂಧಿಸಿದಂತೆ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಸುದ್ದಿಯೂ ಇದೆ. ಕೆಲವೆಡೆ ಬಿಜೆಪಿಯ ಜನಪ್ರತಿನಿಧಿಗಳನ್ನು ಭೇಟಿ ಮಾಡದಿರುವ ಬಗ್ಗೆ ದೂರುಗಳು ಬಂದಿದ್ದು, ಕೆಲವೆಡೆ ಅಭಿವೃದ್ಧಿ ಕೊರತೆ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಯಾತ್ರೆಯ ಪೋಸ್ಟರ್ನಲ್ಲಿ ತಮ್ಮ ನಾಯಕನ ಫೋಟೋ ಇಲ್ಲ ಎಂಬುದಕ್ಕೆ ಕೆಲವೆಡೆ ವಿವಾದಗಳು ಬಿಸಿಯಾಗುತ್ತಿದ್ದು, ಸಂಸದರ ನಾಪತ್ತೆ ಬಗ್ಗೆ ಕೆಲವೆಡೆ ಪ್ರಶ್ನೆಗಳು ಎದ್ದಿವೆ. ಇನ್ನು ಕೆಲವೆಡೆ ಬಿಜೆಪಿ ಶಾಸಕರ ಮೇಲೆ ಜಾತಿವಾದದ ಆರೋಪ ಕೇಳಿ ಬರುತ್ತಿದೆ. ಕೆಲ ಜನರು ಹೇಳುವ ಪ್ರಕಾರ ಚುನಾವಣೆಗಳು ಬರುತ್ತಿವೆ ಅದಕ್ಕಾಗಿಯೇ ಈ ಗಿಮಿಕ್ ನಡೆಯುತ್ತಿದೆ? ಎಂದು ಹೇಳುತ್ತಿದ್ದಾರೆ.
ನಾಗೌರ್ ಗ್ರಾಮದಲ್ಲಿ ಬಿಜೆಪಿ ಶಾಸಕ ರೂಪಾರಾಮ್ ಮುರವತಿಯಾ ಮತ್ತು ಬಿಜೆಪಿ ಸರಪಂಚ್ ವಿರುದ್ಧ ಜನರು ಪ್ರತಿಭಟಿಸಿದರು. ಉದಯಪುರವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಜನ ಆಕ್ರೋಶ್ ರ್ಯಾಲಿಯಲ್ಲಿ ಪರಸ್ಪರ ಘರ್ಷಣೆ ನಡೆಸಿದರು. ಜುಂಜಣ್ಣು ಸಂಸದ ನರೇಂದ್ರ ಕುಮಾರ್ ಅವರಿಗೆ ಪಾಚಲಂಗಿ ಗ್ರಾಮದ ಜನರು ಒಂದು ರೂಪಾಯಿ ಕೆಲಸ ಮಾಡಿಲ್ಲ, ಮೂರೂವರೆ ವರ್ಷಗಳಿಂದ ಮುಖವನ್ನೂ ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹೊರಟಿದ್ದಾರೆ.

ಕಾಂಗ್ರೆಸ್ ಬಿಜೆಪಿ ನಡುವೆ ಕೆಸೆರೆರೆಚಾಟ
ರಾಜ್ಯದ ಜನರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಸರ್ಕಾರದಿಂದ ತೃಪ್ತರಾಗಿದ್ದಾರೆ. ಅಶೋಕ್ ಗೆಹ್ಲೋಟ್ ಅವರ ಆಡಳಿತದಲ್ಲಿ ಸಂತೋಷವಾಗಿರುವಾಗ, ಜನ ಆಕ್ರೋಶ ಯಾತ್ರೆಯಲ್ಲಿ ಜನರು ಭಾಗವಹಿಸಿಲ್ಲ. ಇದರಿಂದ ಬಿಜೆಪಿ ವೈಫಲ್ಯ ಎದ್ದು ಕಾಣುತ್ತಿದೆ ಎಂದು ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ನಾಯಕ ನೀರಜ್ ಡಾಂಗಿ ಹೇಳುತ್ತಾರೆ. ಆದರೆ ರಾಜಸ್ಥಾನದಲ್ಲಿ ರಾಜ್ಯದ ಗೆಹ್ಲೋಟ್ ಸರ್ಕಾರದ ಆಡಳಿತ ಜಂಗಲ್ ರಾಜ್ನಂತಿದೆ ಎಂದು ರಾಜಸ್ಥಾನದ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಹೇಳುತ್ತಾರೆ. ಆಡಳಿತದ ಬದಲು ದುರಾಡಳಿತ ಸರಕಾರದಲ್ಲಿ ಗೋಚರಿಸುತ್ತಿದೆ. ಅವರ ವಿರುದ್ಧ ಇಡೀ ಬಿಜೆಪಿ ಒಗ್ಗಟ್ಟಾಗಿದ್ದು, ರಾಜಸ್ಥಾನದ ಜನರಿಂದ ಜನ ಆಕ್ರೋಶ ಯಾತ್ರೆಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರು ಕಟಾರಿಯಾ ಅವರಿಗೆ ಬಹುಶಃ ದೈವಿಕ ದೃಷ್ಟಿ ಇದೆ ಎಂದು ವ್ಯಂಗ್ಯ ಮಾಡಿದ್ದಾರೆ. ಅದಕ್ಕಾಗಿಯೇ ಅವರ ಪಕ್ಷದ ವಿಫಲವಾಗಿದೆ ಎಂದು ಕುಟುಕಿದ್ದಾರೆ.

ಒಗ್ಗೂಡಿದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿ ಉಳಿದಿರುವುದು ಬಿಜೆಪಿಗೆ ಅಸಮಾಧಾನ ತಂದಿದೆ. ಆದರೆ ದೊಡ್ಡ ಮಹತ್ವಾಕಾಂಕ್ಷೆ ಹೊಂದಿರುವ ನಾಯಕರ ನಡುವಿನ ಪರಸ್ಪರ ಘರ್ಷಣೆ ಮತ್ತು ಅಂತರದಿಂದಾಗಿ ಜನ ಆಕ್ರೋಶ ಯಾತ್ರೆಯಂತಹ ಮಹತ್ವದ ಕಾರ್ಯಕ್ರಮವು ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಫಲವಾಗುವುದು ಯಾವುದೇ ದೊಡ್ಡ ರಾಜಕೀಯ ಅಪಾಯದ ಲಕ್ಷಣವಲ್ಲ. ಬಿಜೆಪಿಯ ಬಹುದೊಡ್ಡ ಕಳವಳ ಏನೆಂದರೆ, ಜನ ಆಕ್ರೋಶ್ ಯಾತ್ರೆಯಲ್ಲಿನ ತನ್ನ ನಾಯಕರ ಅನೈತಿಕತೆ ಮತ್ತು ಭಿನ್ನಾಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ನಲ್ಲಿ ಪರಸ್ಪರ ಬದ್ಧ ವಿರೋಧಿಗಳು ಎಂದು ಹೇಳಲಾದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ತಮ್ಮ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ವಿಫಲಗೊಳಿಸುವ ಪ್ರಯತ್ನದಲ್ಲಿ ಅಬ್ಬರದ ಪ್ರಚಾರದೊಂದಿಗೆ ಪ್ರಾರಂಭಿಸಲಾಯಿತು. ಇಡೀ ಪ್ರವಾಸದಲ್ಲಿ ಇಬ್ಬರ ನಡುವೆ ಯಾವುದೇ ಬಿರುಕು ಇರಲಿಲ್ಲ. ಬಿಜೆಪಿಯ ಯಾತ್ರೆಯು ರಾಹುಲ್ ಗಾಂಧಿಯವರ ಯಾತ್ರೆಗೆ ನಿಖರವಾಗಿ ಏನು ಬೇಕೋ ಅದನ್ನು ಸೋಲುವ ಮೂಲಕ ಪೂರೈಸಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲ ಮತ್ತು ವಿಫಲವೆಂದು ಸಾಬೀತುಪಡಿಸಲು ಪ್ರಾರಂಭಿಸಲಾದ ಜನ ಆಕ್ರೋಶ್ ಯಾತ್ರೆಯು ಹೇಗೆ ದಯನೀಯವಾಗಿ ವಿಫಲವಾಯಿತು ಎಂಬುದಕ್ಕೆ ರಾಜಸ್ಥಾನದ ರಾಜಕೀಯದಲ್ಲಿ ಕಾರಣಗಳನ್ನು ಹುಡುಕಲಾಗುತ್ತಿದೆ? ಒಟ್ಟಿನಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಮುಂದಿನ ಚುನಾವಣೆಗೆ ರಣತಂತ್ರ ಹೆಣಿಯದೇ ಇದ್ದಲ್ಲಿ ಜನ ಆಕ್ರೋಶ ಯಾತ್ರೆಯಂತೆ ಸೋಲನ್ನು ಅನುಭವಿಸುವುದು ಖಚಿತ.












Click it and Unblock the Notifications