Breaking: ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಹತ್ಯೆ
ಶ್ರೀನಗರ, ಅ.04: ಜಮ್ಮು ಮತ್ತು ಕಾಶ್ಮೀರ ಕಾರಾಗೃಹಗಳ ಮಹಾನಿರ್ದೇಶಕ ಹೇಮಂತ್ ಲೋಹಿಯಾ ಅವರು ಸೋಮವಾರ ತಡರಾತ್ರಿ ಜಮ್ಮುವಿನ ಉಡೆಯಾವಾಲಾದಲ್ಲಿರುವ ಅವರ ಮನೆಯಲ್ಲಿ ಕತ್ತು ಸೀಳಿರುವ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕೊಲೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ. ಆದರೆ ಶಂಕಿತನಾಗಿರುವ ಪೊಲೀಸ್ ಅಧಿಕಾರಿಯ ಮನೆಯ ಸಹಾಯಕ ಕಾಣೆಯಾಗಿದ್ದಾನೆ ಎಂದು ಹೇಳಲಾಗಿದ್ದು, ಆತನಿಗಾಗಿ ಶೋಧ ಆರಂಭಿಸಲಾಗಿದೆ. ಮಧ್ಯರಾತ್ರಿ ಈ ಘಟನೆ ನಡೆದಿದೆ.
ಅಮಿತ್ ಶಾ ಭೇಟಿ; ಪಹಾಡಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಘೋಷಣೆ ಸಾಧ್ಯತೆ
ಪ್ರಾಥಮಿಕ ತನಿಖೆಯಲ್ಲಿ ತಲೆಮರೆಸಿಕೊಂಡಿರುವ ಮನೆಯ ಸಹಾಯಕ ಜಾಸಿರ್ ಎಂಬುವವನತ್ತ ಬೊಟ್ಟು ಮಾಡುತ್ತಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾತನಾಡಿ, "ಜೆ & ಕೆ ಡಿಜಿ ಕಾರಾಗೃಹಗಳ ಮಹಾನಿರ್ದೇಶಕರ ಮೃತದೇಹವು ಅನುಮಾನಾಸ್ಪದ ಸಂದರ್ಭಗಳಲ್ಲಿ ಪತ್ತೆಯಾಗಿದೆ. ಅಪರಾಧದ ಸ್ಥಳದ ಪ್ರಾಥಮಿಕ ತನಿಖೆಯಲ್ಲಿ ಇದು ಶಂಕಿತ ಕೊಲೆ ಪ್ರಕರಣ ಎಂದು ತಿಳಿದುಬಂದಿದೆ. ಅಧಿಕಾರಿಯೊಂದಿಗೆ ಇದ್ದ ಗೃಹ ಸಹಾಯಕ ತಲೆಮರೆಸಿಕೊಂಡಿದ್ದಾನೆ. ಅವನಿಗಾಗಿ ಹುಡುಕಾಟ ಪ್ರಾರಂಭವಾಗಿದೆ" ಎಂದು ತಿಳಿಸಿದರು.
"ವಿಧಿವಿಜ್ಞಾನ ತಂಡಗಳು ಮತ್ತು ಅಪರಾಧ ತಂಡಗಳು ಸ್ಥಳದಲ್ಲಿವೆ. ತನಿಖಾ ಪ್ರಕ್ರಿಯೆಯು ಪ್ರಾರಂಭವಾಗಿದೆ. ಹಿರಿಯ ಅಧಿಕಾರಿಗಳು ಸಹ ಸ್ಥಳದಲ್ಲಿದ್ದಾರೆ. J&K ಪೊಲೀಸ್ ಕುಟುಂಬವು ತಮ್ಮ ಹಿರಿಯ ಅಧಿಕಾರಿಯ ಸಾವಿಗೆ ದುಃಖ ಮತ್ತು ಅಪಾರ ಸಂತಾಪ ವ್ಯಕ್ತಪಡಿಸುತ್ತದೆ" ಎಂದು ಹೇಳಿದರು.
57 ವರ್ಷದ 1992ರ ಬ್ಯಾಚ್ನ ಐಪಿಎಸ್ ಅಧಿಕಾರಿ ಲೋಹಿಯಾ, ಅಸ್ಸಾಂ ಮೂಲದವರಾಗಿದ್ದರು. ಅವರನ್ನು ಆಗಸ್ಟ್ನಲ್ಲಿ ಕಾರಾಗೃಹಗಳ ಮಹಾನಿರ್ದೇಶಕರಾಗಿ ಬಡ್ತಿ ನೀಡಿ ನೇಮಿಸಲಾಯಿತು.
ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಇದೊಂದು "ಅತ್ಯಂತ ದುರದೃಷ್ಟಕರ" ಘಟನೆ ಎಂದು ಸಂತಾಪ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿ ಹೇಮಂತ್ ಲೋಹಿಯಾ ಅವರ ಮನೆ ಕೆಲಸದವ ಜಾಸಿರ್ ಅವರನ್ನು ಮೊದಲು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ವರದಿಯಾಗಿದೆ. ನಂತರ ಒಡೆದ ಕೆಚಪ್ ಬಾಟಲಿಯಿಂದ ಅಧಿಕಾರಿಯ ಕತ್ತು ಸೀಳಿ, ನಂತರ ಅವರ ದೇಹಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.