ಜಮ್ಮು-ಕಾಶ್ಮೀರಕ್ಕೆ ಮಾತ್ರ ರಾಜ್ಯಪಾಲರ ಆಳ್ವಿಕೆ ಏಕೆ?
ಶ್ರೀನಗರ, ಜೂನ್ 20: ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯು ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ)ಯಿಂದ ಬೆಂಬಲ ವಾಪಸ್ ಪಡೆದ ಮೇಲೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲು ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದಾರೆ.
ಈ ಮೂಲಕ 1977 ರಿಂದ ಇಲ್ಲಿಯ ತನಕ 9 ನೇ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿದೆ.
ಆದರೆ ಜಮ್ಮು-ಕಾಶ್ಮೀರಕ್ಕೆ ರಾಷ್ಟ್ರಪತಿ ಆಳ್ವಿಕೆಯ ಬದಲಾಗಿ ರಾಜ್ಯಪಾಲರ ಆಳ್ವಿಕೆ ಏಕೆ? ಸಾಮಾನ್ಯವಾಗಿ ಯಾವುದೇ ರಾಜ್ಯ ಸರ್ಕಾರಗಳು ಬಹುಮತವಿಲ್ಲದೆ ಬಿದ್ದುಹೋದರೆ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗುತ್ತದೆ. ಸಂವಿಧಾನದ 356 ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಕ್ಕೆ ಸಾಧ್ಯವಿದೆ. ಆದರೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವೇ ಇರುವುದರಿಂದ ಇದು ಸಾಧ್ಯವಿಲ್ಲ.

ಜಮ್ಮು ಕಾಶ್ಮೀರ ಸಂವಿಧಾನದ 92 ನೇ ವಿಧಿಯ ಪ್ರಕಾರ ಇಲ್ಲಿ ಆರು ತಿಂಗಳುಗಳ ಕಾಲ ರಾಜ್ಯಪಾಲರ ಆಳ್ವಿಕೆಯನ್ನು ಹೇರಬಹುದು. ಈ ಅವಧಿಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ರಾಜ್ಯಪಾಲರ ಮೇಲುಸ್ತುವಾರಿಯಲ್ಲಿರುತ್ತದೆ.
ಆರು ತಿಂಗಳ ಕಾಲ ಜಮ್ಮು ಕಾಶ್ಮೀರ ವಿಧಾನಸಭೆ ಅಮಾನತಿನಲ್ಲಿರುತ್ತದೆ. ವಿಧಾನಸಭೆ ಅಮಾನತಿನಲ್ಲಿದ್ದರೂ, ಹಾಲಿ ಶಾಸಕರೆಲ್ಲರೂ ಶಾಸಕರಾಗಿಯೇ ಇರುತ್ತಾರೆ. ಆದರೆ ಯಾವುದೇ ಶಾಸನೀಯ ಅಧಿಕಾರಗಳು ಅವರಿಗಿರುವುದಿಲ್ಲ. ಈ ಸಮಯದಲ್ಲಿ ರಾಜ್ಯಪಾಲರು ಶಾಸನೀಯ ಅಧಿಕಾರ ಪಡೆದಿರುತ್ತಾರೆ.
ಈ ಆರು ತಿಂಗಳ ಅವಧಿಯಲ್ಲಿ ವಿಶ್ವಾಸ ಮತ ಗಳಿಸಿ ಯಾವುದೇ ಪಕ್ಷ ಅಥವಾ ಮೈತ್ರಿ ಕೂಟಗಳು ಸರ್ಕಾರ ನಡೆಸಲು ಮುಂದಾದರೆ ನಡೆಸಬಹುದು. ಆರು ತಿಂಗಳು ಕಳೆದರೂ ಸರ್ಕಾರ ರಚನೆಯಾಗದಿದ್ದಲ್ಲಿ ಜಮ್ಮು-ಕಾಶ್ಮೀರವು ರಾಷ್ಟ್ರಪತಿ ಆಳ್ವಿಕೆಗೆ ಒಳಪಡುತ್ತದೆ.
ಅಕಸ್ಮಾತ್ ರಾಜ್ಯಪಾಲರು ಅಥವಾ ರಾಷ್ಟ್ರಪತಿ ಆಳ್ವಿಕೆಯ ಸಮಯದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡರೆ, ಅದು ರದ್ದುಗೊಂಡ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ಆರು ತಿಂಗಳೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಫಲವಾದರೆ, ಅದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ.












Click it and Unblock the Notifications