ಕಾಶ್ಮೀರದಲ್ಲಿ ಮೈತ್ರಿ ಮುಂದುವರಿಕೆಗೆ ಕೆಲವು ಷರತ್ತು!
ಶ್ರೀನಗರ, ಫೆಬ್ರವರಿ 03 : ಜಮ್ಮು ಮತ್ತು ಕಾಶ್ಮೀರದಲ್ಲಿನ ಸರ್ಕಾರ ರಚನೆ ಕಸರತ್ತು ಇನ್ನಷ್ಟು ದಿನ ಮುಂದುವರೆಯುವ ಸಾಧ್ಯತೆ ಇದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮೈತ್ರಿ ಪಕ್ಷ ಬಿಜೆಪಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಮಂಗಳವಾರ ಸರ್ಕಾರ ರಚನೆ ಕುರಿತು ಅಂತಿಮ ತೀರ್ಮಾನ ಪ್ರಕಟಿಸಿ ಎಂದು ರಾಜ್ಯಪಾಲರು ಬಿಜೆಪಿ ಮತ್ತು ಪಿಡಿಪಿಗೆ ಸೂಚಿಸಿದ್ದರು. ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ರಾಜ್ಯಪಾಲ ಎನ್.ಎನ್.ವೋಹ್ರಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. [ಕಾಶ್ಮೀರದಲ್ಲಿ ಮೈತ್ರಿ ಮುಂದುವರಿಕೆ?]

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮುಫ್ತಿ ಅವರು, ಕಾಶ್ಮೀರದಲ್ಲಿನ ಆರ್ಥಿಕ ಅಭಿವೃದ್ಧಿ ಮತ್ತು ಶಾಂತಿ ಸ್ಥಾಪನೆ ಸೇರಿದಂತೆ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರ ಭರವಸೆ ನೀಡಬೇಕು ಎಂದು ಮೈತ್ರಿ ಪಕ್ಷ ಬಿಜೆಪಿಗೆ ಷರತ್ತು ವಿಧಿಸಿದರು. [ಕಾಶ್ಮೀರದಲ್ಲಿ ಮುರಿದು ಬಿದ್ದ ಪಿಡಿಪಿ-ಬಿಜೆಪಿ ಮೈತ್ರಿ?]
'ಜಮ್ಮು ಮತ್ತು ಕಾಶ್ಮೀರ ರಾಜ್ಯವು ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. ಇಲ್ಲಿ ಹೊಸ ಸರ್ಕಾರ ರಚನೆಯಾದರೆ ಉತ್ತಮ ವಾತಾವರಣ, ಆರ್ಥಿಕ ಬೆಳವಣಿಗೆ ಮತ್ತಿತರ ಸೌಲಭ್ಯ ಕಲ್ಪಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದರೆ, ಸರ್ಕಾರ ರಚನೆಯಾಗಲಿದೆ' ಎಂದರು. [ಮುಫ್ತಿ ಮೊಹಮದ್ ಸಯೀದ್ ವಿಧಿವಶ]
ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಆದ್ದರಿಂದ 8 ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು ಅವರಿಗೂ ಈ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ. ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ (79) ಅವರು ಜನವರಿ 7ರಂದು ವಿಧಿವಶರಾಗಿದ್ದಾರೆ. ನಂತರ ಕಾಶ್ಮೀರದ ರಾಜಕೀಯ ಚಿತ್ರಣ ಬದಲಾಗಿದ್ದು, ಬಿಜೆಪಿ ಮತ್ತು ಪಿಡಿಪಿ ಮೈತ್ರಿಕೂಟದ ಸರ್ಕಾರ ಮುಂದುವರೆಯುವ ಬಗ್ಗೆ ಗೊಂದಲ ಉಂಟಾಗಿದೆ. [ಪಿಟಿಐ ಚಿತ್ರಗಳು]












Click it and Unblock the Notifications