ಜೇಟ್ಲಿ V/S ಜೇಠ್ಮಲಾನಿ: ದೆಹಲಿ ಹೈಕೋರ್ಟ್ ನಲ್ಲಿ ಮದಗಜಗಳ ವಾಗ್ವಾದ
ಸೋಮವಾರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ನಡುವಿನ ವಾಗ್ವಾದಕ್ಕೆ ದೆಹಲಿ ಹೈಕೋರ್ಟ್ ಸಾಕ್ಷಿಯಾಯಿತು. ಈ ಇಬ್ಬರು ಮದಗಜಗಳ ನಡುವಿನ ವಾದ ವಿವಾದ ಆಲಿಸಲು ಯುವ ವಕೀಲರು ಕಿಕ್ಕಿರಿದು ತುಂಬಿದ್ದರು.
ನವದೆಹಲಿ, ಮಾರ್ಚ್ 7: ಸೋಮವಾರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಮಾಜಿ ಕೇಂದ್ರ ಸಚಿವ, ಮಾಜಿ ಬಿಜೆಪಿಗ ರಾಮ್ ಜೇಠ್ಮಲಾನಿ ನಡುವಿನ ವಾಗ್ವಾದಕ್ಕೆ ದೆಹಲಿ ಹೈಕೋರ್ಟ್ ಸಾಕ್ಷಿಯಾಯಿತು. ಈ ಇಬ್ಬರು ಮದಗಜಗಳ ನಡುವಿನ ವಾದ ವಿವಾದ ಆಲಿಸಲು ಯುವ ವಕೀಲರು ಕಿಕ್ಕಿರಿದು ಕೋರ್ಟ್ ಹಾಲಿನಲ್ಲಿ ತುಂಬಿದ್ದರು.
ಡಿಡಿಸಿಎ (ದೆಹಲಿ ಕ್ರಿಕೆಟ್ ಬೋರ್ಡ್)ಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಅರುಣ್ ಜೇಟ್ಲಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು ಕೇಜ್ರಿವಾಲ್ ಪರ ಪ್ರಖ್ಯಾತ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಆಗಮಿಸಿದ್ದರು. ಇತ್ತ ಅರುಣ್ ಜೇಟ್ಲಿ ಕೂಡಾ ಜನಪ್ರಿಯ ಹಿರಿಯ ವಕೀಲರಾಗಿದ್ದು ಇಬ್ಬರ ನಡುವೆ ಕಾವೇರಿದ ವಾದ ವಿವಾದಗಳು ನಡೆದವು.[ಪಕ್ಷಗಳಿಗೆ ದೇಣಿಗೆ ಮೇಲೆ ನಿಬಂಧನೆ: ಕಪ್ಪು ಹಣ ಹೀಗೆ ನಿರ್ಮೂಲನೆ]
ವಾದ ಮಂಡಿಸಿದ ರಾಮ್ ಜೇಠ್ಮಲಾನಿ ಆರ್ಥಿಕವಾಗಿ ಯಾವುದೇ ನಷ್ಟವಾಗದೆ ಯಾಕೆ ಎಎಪಿ ನಾಯಕರಿಂದ ಮಾನನಷ್ಟ ಪರಿಹಾರ ಕೇಳುತ್ತಿದ್ದೀರಿ? ಎಂದು ಜೇಟ್ಲಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೇಟ್ಲಿ ನಷ್ಟದ ವಿಚಾರಕ್ಕೆ ಬಂದಾಗ ನನ್ನ ಹಿನ್ನಲೆ, ನನಗಿರುವ ಗೌರವಕ್ಕೆ ಆಗಿರುವ ಹಾನಿ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಜೇಠ್ಮಲಾನಿ ಅಂದರೆ ಆರ್ಥಿಕವಾಗಿ ನಷ್ಟವಾಗದ ಪ್ರಕರಣದಲ್ಲಿ ನೀವು ಪ್ರಕರಣ ದಾಖಲಿಸಿದ್ದೀರಿ? ಅಂದರೆ ನಿಮಗೆ ವೈಯುಕ್ತವಾಗಿ ಗೌರವಕ್ಕೆ ಆಗಿರುವ ಧಕ್ಕೆಯನ್ನು ಅಂದಾಜು ಮಾಡಲು ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಮರು ಉತ್ತರ ನೀಡಿದ ಜೇಟ್ಲಿ, ಇಲ್ಲಿ ನನ್ನ ಮೇಲೆ ವೈಯುಕ್ತಿಕವಾಗಿ ಆರೋಪ ಮಾಡಲಾಗಿದೆ. ರಾಜಕೀಯ ಆರೋಪಗಳನ್ನು ನಾನು ಒಪ್ಪುತ್ತೇನೆ. ಆದರೆ ಇದು ಆ ರೀತಿಯಾದುದಲ್ಲ ಎಂದು ಹೇಳಿದರು.
ನಂತರ ಜೇಠ್ಮಲಾನಿ ಜೇಟ್ಲಿ ಗಮನವನ್ನು ಅವರು ಸಲ್ಲಿಸದ್ದ ಅರ್ಜಿಯ ಕಡೆ ಸೆಳೆದರು. ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಜೇಟ್ಲಿ, ಡಿಡಿಸಿಎ ಸಂಬಂಧಿಸಿದಂತೆ ಕೇಜ್ರಿವಾಲ್ ನೀಡಿರುವ ಹೇಳಿಕೆಯಿಂದ ನನ್ನ ಗೌರವಕ್ಕೆ ದಕ್ಕೆಯಾಗಿದೆ ಎಂದು ಹೇಳಿದ್ದರು.[ಸಾಲ ಮಾಡಿಯಾದ್ರೂ ತುಪ್ಪ ತಿನ್ನುವವರಿಗೆ ಅರುಣ್ ಜೇಟ್ಲಿ ನೀಡಿದ ಶಾಕ್]
ಆಗ ಜೇಠ್ಮಲಾನಿ ನಿಮಗೆ ಗೌರ ಮತ್ತು ಪ್ರಸಿದ್ಧಿ ಎರಡು ಪದಗಳ ನಡುವಿನ ವ್ಯತ್ಯಾಸ ಗೊತ್ತಿದೆಯಾ? ಎಂದು ಕೇಳಿದರು . ಆಗ ಜೇಟ್ಲಿ ಎರಡೂ ಪದಗಳ ಅರ್ಥ ಒಂದರೊಳಗೊಂದು ಸಮ್ಮಿಳಿತವಾಗಿದೆ ಎಂದು ಉತ್ತರಿಸಿದರು. ಆದರೆ ಇದನ್ನು ಒಪ್ಪದ ಜೇಠ್ಮಲಾನಿ ಇಂಗ್ಲೀಷ್ ಪದಕೋಶ ತಂದು ಜೇಟ್ಲಿಗೆ ಅವುಗಳ ಅರ್ಥ ತಿಳಿಸಿದರು. ನಂತರ ವಿಚಾರಣೆ ಮುಂದುವರಿಯಿತು.
ಡಿಡಿಸಿಎಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆಗ ಅಧ್ಯಕ್ಷರಾಗಿದ್ದ ಅರುಣ್ ಜೇಟ್ಲಿಯೂ ಪಾಲುದಾರರಾಗಿದ್ದಾರೆ ಎನ್ನುವ ಅರ್ಥದಲ್ಲಿ ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಇದರಿಂದ ನನ್ನ ಗೌರವಕ್ಕೆ ಚ್ಯುತಿಯಾಗಿದೆ ಎಂದು ಆರೋಪಿಸಿ ಅರುಣ್ ಜೇಟ್ಲಿ ಅರವಿಂದ್ ಕೇಜ್ರಿವಾಲ್ ರಿಂದ 10 ಕೋಟಿ ಮಾನ ನಷ್ಟ ಪರಿಹಾರ ಕೇಳಿ ದಾವೆ ಹೂಡಿದ್ದರು.