ಸೋಲೊಪ್ಪಿಕ್ಕೊಳ್ಳದವರು ಇವಿಎಂ ಅನ್ನು ದೂರಿದರಂತೆ! ಅರುಣ್ ಜೇಟ್ಲಿ
ಸೂರತ್, ಡಿಸೆಂಬರ್ 2: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಇವಿಎಂ(Electronic Voting Machines) ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಬಿಎಸ್ ಪಿ ನಾಯಕಿ ಮಾಯಾವತಿ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 'ತಮ್ಮ ಸೋಲನ್ನು ಒಪ್ಪಿಕೊಳ್ಳಲಾಗದವರು ಇಂಥ ಅಸಂಬದ್ಧ ಹೇಳಿಕೆ ನೀಡುತ್ತಾರೆ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತೆ ಸದ್ದು ಮಾಡುತ್ತಿದೆ ಇವಿಎಂ ದೋಷ! ಮಾಯಾವತಿ ಹೊಸ ವರಸೆ!
'ಬಿಜೆಪಿ ಎಂದಿಗೂ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಕೆಲಸಕ್ಕೆ ಕೈಹಾಕಿಲ್ಲ. ತಮ್ಮ ಸೋಲನ್ನು ಒಪ್ಪಿಕೊಳ್ಳಲಾಗದ ಕೆಲವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ' ಎಂದು ಜೇಟ್ಲಿ ಹೇಳಿದರು.
ಡಿ.1 ರಂದು ಹೊರಬಿದ್ದ ಫಲಿತಾಂಶದಲ್ಲಿ ಸ್ಥಳೀಯ ಸಂಸ್ಥೆ 16 ಮೇಯರ್ ಸ್ಥಾನಗಳಲ್ಲಿ ಬಿಜೆಪಿ 12ನ್ನು ಗೆದ್ದುಕೊಂಡು ದಾಖಲೆ ಬರೆದಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಬಿಎಸ್ ಪಿ ನಾಯಕಿ ಮಾಯಾವತಿ, '2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ, ಈ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೂ ಬಿಜೆಪಿ ಮತಯಂತ್ರಗಳನ್ನು ದುರುಪಯೋಗಪಡಿಸಿಕೊಂಡಿದೆ. ಬಿಜೆಪಿ ಗೆಲುವಿಗೆ ಮತಯಂತ್ರದಲ್ಲಿನ ದೋಷವೇ ಕಾರಣ' ಎಂದಿದ್ದರು.