ಹಿಮಾಚಲಪ್ರದೇಶ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್
ಶಿಮ್ಲಾ, ಡಿಸೆಂಬರ್ 24: ಹಿಮಾಚಲ ಪ್ರದೇಶ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಭಾನುವಾರ ಮಧ್ಯಾಹ್ನ ತೆರೆ ಬಿದ್ದಿದೆ. ಹಿಮಾಚಲ ಪ್ರದೇಶದ ಶಾಸಕಾಂಗ ಪಕ್ಷದ ನಾಯಕ ಹಾಗೂ ಸಿಎಂ ಆಗಿ ಜೈರಾಮ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ವೀಕ್ಷಕರು ಘೋಷಿಸಿದ್ದಾರೆ.
ಹಿಮಾಚಲದ ಸಿಎಂ ಅಭ್ಯರ್ಥಿ ಪ್ರೇಮ್ ಸೋಲಲು ಏನು ಕಾರಣ?
BJP observers Nirmala Sitharaman. Narendra Singh Tomar and party in-charge for #Himachal Mangal Pandey held a meeting with RSS leaders in Shimla, today pic.twitter.com/KP9H3EcrXB
— ANI (@ANI) December 22, 2017
ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರು ಸೋಲು ಕಂಡಿದ್ದು, ಬಿಜೆಪಿಗೆ ಕೊಂಚ ಹಿನ್ನಡೆಯಾಗಿತ್ತು. ಹೀಗಾಗಿ, ಮುಖ್ಯಮಂತ್ರಿ ಆಯ್ಕೆ ಸ್ವಲ್ಪ ವಿಳಂಬವಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಸಿಎಂ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿತ್ತು. ಪ್ರೇಮ್ ಕುಮಾರ್, ಜೆಪಿ ನಡ್ಡಾ ನಡುವೆ ಪೈಪೋಟಿ ಇದ್ದರೂ ಅಂತಿಮವಾಗಿ ಜೈರಾಮ್ ಠಾಕೂರ್ ಹೆಸರು ಘೋಷಣೆಯಾಗಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನರೇಂದ್ರ ತೋಮಾರ್ ಅವರು ಹಿಮಾಚಲದಲ್ಲಿ ಸಿಎಂ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ನಿರ್ಧಾರ ಪ್ರಕಟಿಸಿದ್ದಾರೆ.
ಈ ನಡುವೆ ಪ್ರೇಮ್ ಕುಮಾರ್ ಧುಮಾಲ್ ಪರ -ವಿರೋಧ ಪ್ರತಿಭಟನೆ ನಡೆಸಲಾಗಿದೆ. ಎರಡು ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಸಿಎಂ ಪ್ರೇಮ್ ಕುಮಾರ್ ಪರ ಲಾಬಿ ಬಲವಾಗಿತ್ತು. ಮೂರು ಶಾಸಕರು ತಮ್ಮ ಸ್ಥಾನವನ್ನು ಬಿಟ್ಟು ಕೊಡಲು ಸಿದ್ಧ ಎಂದು ಘೋಷಿಸಿದ್ದಾರೆ.
ಇನ್ನೊಂದೆಡೆ, ಚುನಾಯಿತ ಪ್ರತಿನಿಧಿಯೊಬ್ಬರನ್ನು ಸಿಎಂ ಸ್ಥಾನದಲ್ಲಿ ಕೂರಿಸುವಂತೆ ಕೋರಿ ಪ್ರತಿಭಟನೆ ನಡೆಸಲಾಗಿತ್ತು. ಧುಮಾಲ್ಗೂ ಮೊದಲು ಜೆಪಿ ನಡ್ಡಾ ಹೆಸರು ಸಿಎಂ ರೇಸ್ನಲ್ಲಿ ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಯಿತು. ಸುಜಾನ್ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಾಜೇಂದ್ರ ಸಿಂಗ್ ರಾಣಾ ಗೆಲುವು ಸಾಧಿಸಿದ್ದು ಈಗ ಇತಿಹಾಸ. 68 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರ ಸ್ಥಾಪನೆಯ ಹಕ್ಕು ಮಂಡನೆಗೆ ಮುಂದಾಗಿದೆ.
ಶಿವಮೊಗ್ಗದ ಅಳಿಯ : ಶಿವಮೊಗ್ಗ ಮೂಲದ ಡಾ. ಸಾಧನಾ ಅವರನ್ನು ವರಿಸಿರುವ ಜೈರಾಮ್ ಅವರು ಕರ್ನಾಟಕದ ಅಳಿಯ. ಡಾ. ಸಾಧನಾ ಕೆಲ ಕಾಲ ಬೆಂಗಳೂರಿನಲ್ಲೂ ನೆಲೆಸಿದ್ದರು. ಶಿಮ್ಲಾದಲ್ಲಿ ಬೆರಳೆಣಿಕೆಯಷ್ಟಿರುವ ಕನ್ನಡಿಗರನ್ನು ಒಗ್ಗೂಡಿಸಿ, ಕನ್ನಡ ಚಟುವಟಿಕೆಗಳನ್ನು ಬೆಳೆಸಿರುವ ಸಾಧನಾ ಅವರು ತಮ್ಮ ಪತಿ ಸಿಎಂ ಆಗುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಖಾಸಗಿ ವಾಹಿನಿ ಜತೆ ಸಂತಸ ಹಂಚಿಕೊಂಡಿದ್ದಾರೆ.