ವಿಧಿ ಬರಹ: ತನ್ನ ನವಜಾತ ಶಿಶುವಿನ ನಗು ಕಾಣದೆ ಹುತಾತ್ಮನಾದ ಯೋಧ
ಜಮ್ಮು, ಆಕ್ಟೋಬರ್ 24: ಅತ್ತ ವೀರ ಯೋಧನ ಅಂತ್ಯಕ್ರಿಯೆ, ಇತ್ತ ಆತನ ಮಗುವಿನ ಮೊದಲ ಆಕ್ರಂದನ ವಿಧಿ ಬರಹ ಎಂಥಾ ಘೋರ.
ಹತ್ತು ವರ್ಷಗಳ ಕಾಲ ಮಗುವಿಗಾಗಿ ಆ ದಂಪತಿ ಹಂಬಲಿಸಿದ್ದರು. ಮಗು ಜನನದ ನಿರೀಕ್ಷೆಯಲ್ಲಿ ವೀರ ಯೋಧ ಶತ್ರುಗಳ ವಿರುದ್ಧ ಸೆಣಸಾಡಿದ್ದ, ಆದರೆ, ವಿಧಿ ಅತನಿಗೆ ಮಗುವನ್ನು ನೋಡುವ ಸೌಭಾಗ್ಯ ಕರುಣಿಸಲಿಲ್ಲ. ವೀರ ಮರಣವನ್ನಪ್ಪಿದ 36 ವರ್ಷದ ಲಾನ್ಸ್ ನಾಯಕ್ ರಂಜೀತ್ ಸಿಂಗ್ ಕತೆ ಇದು.

ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯ ಸುಲಿಗ್ರಾಮದಲ್ಲಿ ಹುತಾತ್ಮನ ಅಂತ್ಯಕ್ರಿಯೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇದೆ ಎನ್ನುವಾಗ ಯೋಧ ರಂಜಿತ್ ಅವರ ಪತ್ನಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಒ ಸಿ)ಯಲ್ಲಿ ಪಾಕಿಸ್ತಾನದ ನುಸುಳುಕೋರರು ಹಾಗೂ ಭಾರತೀಯ ಯೋಧರ ನಡುವೆ ಭಾನುವಾರದಂದು ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ರಂಜೀತ್ ಸಿಂಗ್ ಅವರಿಗೆ ಗುಂಡು ತಗುಲಿ ಹುತಾತ್ಮರಾಗಿದ್ದರು.
ಮಂಗಳವಾರದಂದು ರಂಜೀತ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಸಿದ್ಧಪಡಿಸಲಾಗಿತ್ತು. ಕೆಲವೇ ಗಂಟೆ ಇರುವಾಗ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹೀಗಾಗಿ ಶಿಶು ಸಹಿತ ಪತ್ನಿಯು ಆ್ಯಂಬ್ಯುಲೆನ್ಸ್ ಮೂಲಕ ಆಗಮಿಸಿ ಪತಿಯ ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂತಸದಲ್ಲಿ ಪಾಲ್ಗೊಳ್ಳಬೇಕೆಂದು ರಜೆ ಹಾಕಲು ನಿರ್ಧರಿಸಿದ್ದ ಯೋಧನ ಬದುಕನ್ನು ವಿಧಿ ಕಿತ್ತುಕೊಂಡಿತ್ತು.
ರಂಜೀತ್ ಸಿಂಗ್ 2003ರಲ್ಲಿ ಸೇನೆ ಸೇರಿದ್ದರು. ಲ್ಯಾನ್ಸ್ ನಾಯಕ್ ರಂಜೀತ್ ಸಿಂಗ್ ಭುತ್ಯಾಲ್ ಮತ್ತು ಅವರ ಪತ್ನಿ ಶಿಮುದೇವಿ ವಿವಾಹವಾಗಿ ಹತ್ತು ವರ್ಷವಾದರೂ ಮಗುವಾಗಿರಲಿಲ್ಲ.
ಆದರೆ, ಪತಿ ಹುತಾತ್ಮನಾಗಿ ಹೆರಿಗೆಯಾದ ತಕ್ಷಣವೇ ಶಿಮುದೇವಿ ಹಾಗೂ ನವಜಾತ ಶಿಶು, ಆ್ಯಂಬುಲೆನ್ಸ್ನಲ್ಲಿ ಸ್ಮಶಾನಕ್ಕೆ ಆಗಮಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. "ಈ ಮಗು ಕೂಡಾ ದೊಡ್ಡವಳಾಗಿ ತಂದೆಯಂತೆ ಸೇನೆ ಸೇರಿಕೊಳ್ಳುತ್ತಾಳೆ ಎಂಬ ನಿರೀಕ್ಷೆ ನನ್ನದು" ಎಂದಾಗ ಅವರ ಕಣ್ಣಾಲಿಗಳು ತುಂಬಿಕೊಂಡಿತ್ತು.












Click it and Unblock the Notifications