ರಾಮ ಮಂದಿರ ಶಿಲಾನ್ಯಾಸದ ಬೆನ್ನಲ್ಲೇ ಶಾಂತಿ ಕದಡಲು ಐಎಸ್ಐ ಸಂಚು!
ನವದೆಹಲಿ, ಆಗಸ್ಟ್.09: ಅಯೋಧ್ಯೆಯಲ್ಲಿ ಐತಿಹಾಸಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ಪಾಕಿಸ್ತಾನದ ಗುಪ್ತಚರ ಇಲಾಖೆ(ಐಎಸ್ಐ) ಭಾರತದಲ್ಲಿ ಶಾಂತಿ ಕಡಡುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವುದಕ್ಕೆ ಸಂಚು ರೂಪಿಸಲಾಗಿದೆ. ದುಬೈ ಮತ್ತು ಆಸ್ಟ್ರೇಲಿಯಾ ಸಂಖ್ಯೆಗಳೊಂದಿಗೆ ಕರೆಗಳನ್ನು ಮಾಡಲಾಗುತ್ತಿದೆ, ಇದರಲ್ಲಿ ಜನರು ಕೋಮು ಗಲಭೆಗಳನ್ನು ಪ್ರಚೋದಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ.
ಅಯೋಧ್ಯಾ ರಾಮ ಮಂದಿರ ಮೇಲೆ ಪಾಕ್ ಐಎಸ್ಐ ಕಣ್ಣು!
ಲಕ್ನೋದಲ್ಲಿ ಮಾತ್ರವಲ್ಲದೆ ದೆಹಲಿಯ ಜನರಿಗೆ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಇಂತಹ ಪ್ರಚೋದಿಸುವ ಕರೆಗಳು ಬಂದಿವೆ. ದೆಹಲಿ ಪೊಲೀಸರ ವಿಶೇಷ ಕೋಶವು ದೇಶದ್ರೋಹ, ಪಿತೂರಿ, ದೇಶದ ಶಾಂತಿಯುತ ವಾತಾವರಣವನ್ನು ಹಾಳು ಮಾಡುವುದು ಮುಂತಾದ ಹಲವಾರು ಆರೋಪ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.
ವಿಐಪಿ ಸಂಖ್ಯೆಗಳ ಮೂಲಕ ದೂರವಾಣಿ ಕರೆ:
ಭಾರತದಲ್ಲಿ ಉದ್ವಿಗ್ನತೆಯನ್ನು ಹುಟ್ಟು ಹಾಕುವ ಶಾಂತಿಯನ್ನು ಕದಡುವ ಬಗ್ಗೆ ಚರ್ಚೆ ನಡೆಸಿರುವ ಒಂದು ಡಜನ್ ಸಂಖ್ಯೆಗಳನ್ನು ಸಂಗ್ರಹಿಸಲಾಗಿದೆ. ವಿಐಪಿ ಸಂಖ್ಯೆಗಳ ಮೂಲಕ ದೂರವಾಣಿ ಕರೆಗಳು ಬಂದಿದೆ. ರೆಕಾರ್ಡ್ ನಲ್ಲಿ ವ್ಯಕ್ತಿಯೊಬ್ಬರು ರಾಮ ಮಂದಿರದ ಬಗ್ಗೆ ಚರ್ಚೆ ನಡೆಸಿದ್ದು, ಆಗಸ್ಟ್.15ರಂದು ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಪಡಿಸುವ ಬಗ್ಗೆ ಮಾತನಾಡಿದ್ದಾರೆ. ಇನ್ನು, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನದ ಗುಪ್ತಚರ ಇಲಾಖೆಯು ಸಂಚು ರೂಪಿಸುತ್ತಿರುವುದು ಇದೇ ಮೊದಲೇನಲ್ಲ.
ಆಗಸ್ಟ್.05ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುವ ದಿನವೂ ದಾಳಿ ನಡೆಸುವುದಕ್ಕೆ ಐಎಸ್ಐ ಪ್ಲಾನ್ ಮಾಡಿತ್ತು ಎಂದು ಹೇಳಲಾಗುತ್ತಿದೆ.