ದೇಶದ್ರೋಹಿ ಮಗನ ಶವ ನಮಗೆ ಬೇಡ: ಉಗ್ರ ಸೈಫುಲ್ಲಾ ತಂದೆ
ಯಾವುದೇ ಉದ್ಯೋಗ ಮಾಡದೇ ಸುಖಾಸುಮ್ಮನೇ ಕಾಲ ತಳ್ಳುತ್ತಾ ತಂದೆ ಬೈಯ್ದಿದ್ದಕ್ಕೆ ಎರಡು ತಿಂಗಳ ಹಿಂದೆ ಮನೆ ಬಿಟ್ಟಿದ್ದ ಸೈಫುಲ್ಲಾ
ಲಖನೌ, ಮಾರ್ಚ್ 8: ನಗರದ ಹೊರವಲಯದಲ್ಲಿನ ಮನೆಯೊಂದರಲ್ಲಿ ಅವಿತು, ಮಂಗಳವಾರ ರಾತ್ರಿ ಸುಮಾರು 12 ಗಂಟೆಗಳ ಕಾಲ ಸತತವಾಗಿ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಜತೆಗೆ ಸೆಣೆಸಿ ಕೊನೆಗೆ ಸಾವನ್ನಪ್ಪಿದ ಉಗ್ರವಾದಿ ಸೈಫುಲ್ಲಾನ ದೇಹವನ್ನು ಪಡೆಯಲು ಆತನ ಕುಟುಂಬ ನಿರಾಕರಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಸೈಫುಲ್ಲಾ ತಂದೆ ಸರ್ತಾಜ್, ''ನನ್ನ ಮಗ ದೇಶಕ್ಕೆ ಹಿತವಲ್ಲದ ಕೆಲಸದಲ್ಲಿ ನಿರತನಾಗಿದ್ದನೆಂಬುದನ್ನೇ ಕೇಳಿಯೇ ಬೇಸರವಾಗುತ್ತಿದೆ. ಅಂಥ ದೇಶದ್ರೋಹಿಯ ಶವವನ್ನೂ ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ, ಆತನ ಶವವನ್ನು ನಾವು ಸ್ವೀಕರಿಸೆವು'' ಎಂದು ತಿಳಿಸಿದ್ದಾರೆ.[ಸಾಯೋ ಮೊದಲು ಅಣ್ಣ ಹೇಳಿದಂತೆ ಕೇಳಿದ್ರೆ ಆ ಉಗ್ರ ಉಳಿಯುತ್ತಿದ್ದ!]
ಸೈಫುಲ್ಲಾ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ ಆತನ ಸಂಬಂಧಿಯೊಬ್ಬ, ''ಸೈಫುಲ್ಲಾ ಏನೂ ಕೆಲಸ ಮಾಡದೇ ವೃಥಾ ಕಾಲಹರಣ ಮಾಡುತ್ತಿದ್ದ. ಒಮ್ಮೆ ಆತನ ತಂದೆ ಆತನನ್ನು ಪ್ರಶ್ನಿಸಿದ್ದರು. ಅದು ಜಗಳಕ್ಕೆ ಕಾರಣವಾಗಿ ತಂದೆ ಸರ್ತಾಜ್, ಸೈಫುಲ್ಲಾನನ್ನು ದಂಡಿಸಿದ್ದರು. ಇದರಿಂದ ಸಿಡಿಮಿಡಿಗೊಂಡಿದ್ದ ಸೈಫುಲ್ಲಾ ಎರಡು ತಿಂಗಳುಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಕಳೆದ ಸೋಮವಾರವಷ್ಟೇ ತನ್ನ ತಂದೆಗೆ ದೂರವಾಣಿ ಕರೆ ಮಾಡಿ, ಸೌದಿ ಅರೇಬಿಯಾಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ. ಆದರೆ, ಏಕೆ, ಹೇಗೆ, ಯಾರೊಟ್ಟಿಗೆ ಹೋಗುತ್ತಿದ್ದೇನೆಂದು ಹೇಳಿರಲಿಲ್ಲ'' ಎಂದು ತಿಳಿಸಿದ್ದಾರೆ.[ಲಖನೌನ ಕಟ್ಟಡದಲ್ಲಿ ಅಡಗಿದ್ದ ಶಂಕಿತ ಐಸಿಸ್ ಉಗ್ರನ ಹತ್ಯೆ]