ದೇಶದಲ್ಲಿ ಕೊರೊನಾ ಎರಡನೇ ಅಲೆ ಕೊನೆಯಾಯ್ತಾ? ತಜ್ಞರ ಪ್ರಕಾರ ಏನು...
ನವದೆಹಲಿ, ಜೂನ್ 22: ಹಲವು ಸಾವು ನೋವುಗಳನ್ನು ಕಂಡ ನಂತರ ಇದೀಗ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಹೇರಲಾಗಿದ್ದ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತಿದೆ. ಸೋಂಕಿನ ಪಾಸಿಟಿವಿಟಿ ದರವೂ ತಗ್ಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹಾಗಿದ್ದರೆ ಮಾರಣಾಂತಿಕವಾಗಿ ಕಾಡಿದ ಕೊರೊನಾ ಎರಡನೇ ಅಲೆ ದೇಶದಲ್ಲಿ ಅಂತ್ಯವಾಯಿತೇ? ಮತ್ತೆ ಜನಜೀವನ ಸಹಜ ಸ್ಥಿತಿಗೆ ಬರಬಹುದೇ? ಕೊರೊನಾ ಮೂರನೇ ಅಲೆಯ ಎಚ್ಚರಿಕೆ ನಡುವೆ, ಎರಡನೇ ಅಲೆ ಅಂತ್ಯದ ಬಗ್ಗೆ ತಜ್ಞರು ಏನು ಹೇಳುತ್ತಿದ್ದಾರೆ? ಇಲ್ಲಿದೆ ವಿವರ...
88 ದಿನಗಳ ನಂತರ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣಗಳು
ದೇಶದಲ್ಲಿ ಸೋಮವಾರ ಬರೋಬ್ಬರಿ 88 ತಿಂಗಳ ನಂತರ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿವೆ. ಜೂನ್ 21ರಂದು 53,256 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದು ಮೇ 6ರ ನಂತರ ದಾಖಲಾದ ಅತಿ ಕಡಿಮೆ ಪ್ರಕರಣವಾಗಿದೆ. ಮೇ 6ರಂದು 24 ಗಂಟೆಗಳ ಅವಧಿಯಲ್ಲಿ, ಅತಿ ಹೆಚ್ಚಿನ, ಅಂದರೆ 414188 ಕೊರೊನಾ ಪ್ರಕರಣ ದಾಖಲಾಗಿದ್ದವು. 5%ಗಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾದರೆ ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಬಹುದು ಎನ್ನಲಾಗಿತ್ತು. ಇದೀಗ ಭಾರತ ಆ ಮೈಲುಗಲ್ಲನ್ನು ಮುಟ್ಟಿದೆ.
ಭಾರತ: ಕೊರೊನಾವೈರಸ್ ಸಂಖ್ಯೆಯಲ್ಲಿ ಭಾರಿ ಇಳಿಕೆ, ಲಸಿಕೆ ವಿತರಣೆ ಏರಿಕೆ!
ಎರಡನೇ ಅಲೆ ಅಂತ್ಯದ ಘೋಷಣೆಗೆ ತಜ್ಞರು ಸಿದ್ಧರಿಲ್ಲ
ಈ ಮೈಲುಗಲ್ಲನ್ನು ಸಾಧಿಸಿದೆ ಎಂದ ಮಾತ್ರಕ್ಕೆ ಮತ್ತೆ ಎಲ್ಲವೂ ಮುಂಚಿನಂತೆ ಆಗಬಹುದೇ? ವ್ಯಾಪಾರ ವಹಿವಾಟನ್ನು ಮೊದಲಿನಂತೆ ನಡೆಸಲು ಅವಕಾಶ ಮಾಡಿಕೊಡಬಹುದೇ? ಇದಕ್ಕೆ ಮಾತ್ರ ತಜ್ಞರು ನಿಖರ ಉತ್ತರ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಮುಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ಕಾರಣ ಈಗಲೇ ಎಲ್ಲವೂ ಕೊನೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಕೊರೊನಾ ಎರಡನೇ ಅಲೆ ಅಂತ್ಯ ಕಂಡಿದೆ ಎಂದು ಘೋಷಿಸಲು ತಜ್ಞರು ಇನ್ನೂ ಸಿದ್ಧರಿಲ್ಲ.
ಬ್ರಿಟನ್ನಲ್ಲಿ ಈಗಾಗಲೇ ಮೂರನೇ ಅಲೆ
"ಕೆಟ್ಟ ಪರಿಸ್ಥಿತಿ ಕಳೆಯುತ್ತಿರುವುದರ ಲಕ್ಷಣಗಳು ಗೋಚರಿಸುತ್ತಿದ್ದರೂ ಸಮಾಧಾನ ಪಟ್ಟುಕೊಳ್ಳುವ ಸಮಯ ಇದಲ್ಲ. ಹೊಸ ಕೊರೊನಾ ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ ಸೋಂಕಿನ ಪ್ರಭಾವ ಕಡಿಮೆಯಾಗಿದೆ ಎಂದು ಘೋಷಿಸಲು ಸಾಧ್ಯವಿಲ್ಲ. ಬ್ರಿಟನ್ನಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ಆರಂಭವಾಗಿದ್ದು, ಈ ಸಮಯದಲ್ಲಿ ಕೊರೊನಾ ತಗ್ಗಿತು ಎಂದು ಹೇಳುವ ಯಾವ ಧೈರ್ಯವೂ ಇಲ್ಲ" ಎಂದು ಹೇಳುತ್ತಿದ್ದಾರೆ ತಜ್ಞರು.
ಬೆಂಗಳೂರಲ್ಲಿ ಮಕ್ಕಳಿಗಾಗಿಯೇ ನಿರ್ಮಾಣವಾಗಲಿದೆ ಕೋವಿಡ್ ಆಸ್ಪತ್ರೆ
"ರೂಪಾಂತರ ಸೃಷ್ಟಿಯಿಂದ ಅಂದಾಜು ಮಾಡುವುದು ಕಷ್ಟ"
"ಕೊರೊನಾ ಎರಡನೇ ಅಲೆಯಲ್ಲಿ ನಿರೀಕ್ಷೆಯಂತೆ, ಕೊರೊನಾ ಪ್ರಕರಣಗಳು ಏರಿದಷ್ಟೇ ವೇಗದಲ್ಲಿ ಇಳಿಕೆಯಾದವು. ಈಗ ಇನ್ನಷ್ಟು ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ ಎರಡನೇ ಅಲೆ ಕುರಿತು ಯಾವುದೇ ಘೋಷಣೆ ಮಾಡಲು ಸಾಧ್ಯವಿಲ್ಲ" ಎಂದು ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್, ಶಿವ ನಾದರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಾಗಾ ಸುರೇಶ್ ವೀರಪು ಹೇಳಿದ್ದಾರೆ. ಈ ಹಿಂದೆಯೇ ಡೆಲ್ಟಾ ರೂಪಾಂತರದ ಕುರಿತು ಅವರು ಎಚ್ಚರಿಕೆ ನೀಡಿದ್ದು, ಇದೇ ಕೊರೊನಾ ಎರಡನೇ ಅಲೆಗೆ ಕಾರಣವಾಗುತ್ತದೆ ಎಂದಿದ್ದರು.
ಭಾರತ ಸವಾಲಿಗೆ ಸಿದ್ಧವಿದೆಯೇ?
"ಕೊರೊನಾ ಪ್ರಕರಣಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆಯಾಗಿವೆ. ಈಗ ಮೂಲ ಸೋಂಕಿಗಿಂತ ಹೆಚ್ಚು ಪ್ರಭಾವಕಾರಿ ಎನ್ನಬಹುದಾದ ರೂಪಾಂತರಗಳು ಸೃಷ್ಟಿಯಾಗುತ್ತಿವೆ. ಇವು ಇನ್ನಷ್ಟು ವೇಗದಲ್ಲಿ ಹರಡುತ್ತಿವೆ. ವೈರಸ್ನ ಸ್ವರೂಪ, ಮಾನವನ ನಡವಳಿಕೆ ಇವೆರಡನ್ನೂ ಅಂದಾಜಿಸುವುದೇ ಕಷ್ಟವಾಗಿದೆ. ಹೀಗಾಗಿ ಕೊರೊನಾ ಎರಡನೇ ಅಲೆ ಕೊನೆಯಾಯಿತು ಎಂದು ಘೋಷಿಸುವುದು ಸೂಕ್ತವಲ್ಲ. ಇಷ್ಟು ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಂಥ ದೇಶ ಮುಂದೆ ಕೊರೊನಾ ಪ್ರಕರಣಗಳು ಏರಿಕೆಯಾದರೆ ಅದನ್ನು ಎದುರಿಸಲು ಸಿದ್ಧವಾಗಿದೆಯೇ? ಈ ಪ್ರಶ್ನೆ ಮೇಲಷ್ಟೇ ನಮ್ಮ ಗಮನ ಇರಬೇಕಿದೆ" ಎಂದು ಪಬ್ಲಿಕ್ ಪಾಲಿಸಿ ತಜ್ಞ ಚಂದ್ರಕಾಂತ್ ಲಹಾರಿಯಾ ಎಚ್ಚರಿಸಿದ್ದಾರೆ.
ಜೂನ್ 22ರಂದು ಕಡಿಮೆ ಪ್ರಕರಣಗಳು ದಾಖಲು
ಭಾರತದಲ್ಲಿ ಕಳೆದ 91 ದಿನಗಳಲ್ಲೇ ಮೊದಲ ಬಾರಿಗೆ ಜೂನ್ 22ರಂದು ಒಂದೇ ದಿನ ಕೊವಿಡ್-19 ಸೋಂಕಿತರ ಸಂಖ್ಯೆ 50,000ಕ್ಕಿಂತ ಕಡಿಮೆಯಾಗಿದೆ. ಕಳೆದೊಂದು ದಿನದಲ್ಲಿ 42640 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 81,839 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸೋಂಕಿಗೆ 1,167 ಮಂದಿ ಪ್ರಾಣ ಬಿಟ್ಟಿದ್ದಾರೆ.