ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರಕ್ಕೆ ಹೆಚ್ಚು ಹಣ ಪಡೆಯಲು ತಡೆ
ನವದೆಹಲಿ, ಜುಲೈ 15: ರೈಲಿನಲ್ಲಿ ಪ್ರಯಾಣಿಸುವಾಗ ಆಹಾರ ಪದಾರ್ಥಗಳ ಮೇಲೆ ಇರುವ ಬೆಲೆಗಿಂತ ಹೆಚ್ಚುವರಿ ಬೆಲೆಯನ್ನು ಮಾರಾಟಗಾರರು ಕೇಳುವುದು, ನೀವು ಅದಕ್ಕೆ ಪ್ರಶ್ನೆ ಮಾಡುವುದು ವಾಗ್ವಾದ ನಡೆಯುವುದು ಸಾಮಾನ್ಯ.
ಇಂತಹ ಅನುಭವ ಬಹಳಷ್ಟು ಮಂದಿಗೆ ಆಗಿಯೇ ಇರುತ್ತದೆ. ಇಂತಹ ಘಟನೆಗಳ ಬಗ್ಗೆ ಹಲವು ರೈಲು ಪ್ರಯಾಣಿಕರು ಕೂಡ ಇಲಾಖೆಗೆ ದೂರು ನೀಡಿದ್ದರು. ಕೊನೆಗೂ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೆಚ್ಚುವರಿ ಹಣ ಪಡೆಯುವುದಕ್ಕೆ ತಡೆ ಹಾಕಲಾಗಿದೆ.
ಮಳೆಯಿಂದ ರೈಲು ರದ್ದು: ಮದ್ರಾಸ್ ಐಐಟಿ ವಿದ್ಯಾರ್ಥಿಗೆ ಭಾರತೀಯ ರೈಲ್ವೇ ಮಾಡಿದ ಸಹಾಯವೇನು?
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಈ ಮಾರಾಟಗಾರರನ್ನು ನಿಯಂತ್ರಿಸಲು ಸಿದ್ಧತೆಗಳನ್ನು ಮಾಡಿದೆ. IRCTC ಮೆನು ಕಾರ್ಡ್ನಲ್ಲಿಯೇ QR ಕೋಡ್ ಅನ್ನು ಮುದ್ರಿಸಿದೆ. ಈ ಕ್ರಮದಿಂದಾಗಿ ಆಹಾರ ಪದಾರ್ಥ ಮಾರಾಟಗಾರರು ಹೆಚ್ಚಿನ ಶುಲ್ಕ ವಿಧಿಸಲು ಆಗುವುದಿಲ್ಲ.
ಕ್ರಮೇಣ, ಈ ವ್ಯವಸ್ಥೆಯನ್ನು IRCTC ಅಡುಗೆ ಸೌಲಭ್ಯವನ್ನು ಹೊಂದಿರುವ ಎಲ್ಲಾ ರೈಲುಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ. ರಾಜಧಾನಿ, ಶತಾಬ್ದಿ, ತೇಜಸ್ನಂತಹ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಕ್ ಜೊತೆಗೆಯೇ ಆಹಾರದ ಆಯ್ಕೆ ಇದೆ. ಆದರೆ ಅನೇಕ ರೈಲುಗಳಲ್ಲಿ ಟಿಕೆಟ್ ಜೊತೆಗೆ ಆಹಾರವನ್ನು ಕಾಯ್ದಿರಿಸಲು ಅವಕಾಶವಿಲ್ಲ. ಆದರೆ, ಅಂತಹ ರೈಲುಗಳಲ್ಲಿ ಊಟದ ಸೇವೆ ನೀಡುವ ಅಡುಗೆ ಬೋಗಿಗಳನ್ನು( ಪ್ಯಾಂಟ್ರಿ ಕಾರ್) ಹೊಂದಿರುತ್ತವೆ.
ಅಡುಗೆ ಬೋಗಿ ಹೊಂದಿರದ ಮೂರನೇ ವಿಧದ ರೈಲುಗಳಿವೆ. ಇವುಗಳಲ್ಲಿ IRCTC ಮಾರಾಟಗಾರರು ಮೂಲ ಅಡುಗೆಮನೆಯಿಂದ ಆಹಾರವನ್ನು ಮಾರಾಟ ಮಾಡುತ್ತಾರೆ. ಈ ಮಾರಾಟಗಾರರು ಕೆಲವೊಮ್ಮೆ ಪ್ರಯಾಣಿಕರಿಂದ ಹೆಚ್ಚು ಶುಲ್ಕ ಪಡೆಯುತ್ತಾರೆ. ಪ್ರಯಾಣಿಕರು ಹೆಚ್ಚಾಗಿ ನಗದು ಮೂಲಕ ಪಾವತಿಸುತ್ತಾರೆ. ಇದು ಅಧಿಕ ಶುಲ್ಕ ವಿಧಿಸುವ ಸಾಧ್ಯತೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
QR ಕೋಡ್ ಬಳಕೆ: ಈ ಸಮಸ್ಯೆಯಿಂದ ಪ್ರಯಾಣಿಕರಿಗೆ ಪರಿಹಾರ ಒದಗಿಸಲು ಮತ್ತು ಅಧಿಕ ಹಣ ಪಡೆಯುವ ಮಾರಾಟಗಾರರನ್ನು ನಿಯಂತ್ರಿಸಲು, IRCTC ಮೆನು ಕಾರ್ಡ್ನಲ್ಲಿಯೇ QR ಕೋಡ್ ಅನ್ನು ಮುದ್ರಿಸಿದೆ. ಇದಲ್ಲದೆ, ಮಾರಾಟಗಾರರು ಕ್ಯೂಆರ್ ಕೋಡ್ ಇರುವ ಕಾರ್ಡ್ ಅನ್ನು ಸಹ ಧರಿಸಿ ಮಾರಾಟ ಮಾಡುತ್ತಾರೆ. ಇದರಿಂದಾಗಿ ಪ್ರಯಾಣಿಕರು ಕ್ಯೂಆರ್ ಕೋಡ್ ಕೂಡ ಕೇಳಬೇಕಾಗಿಲ್ಲ.
ಯಾವುದೇ ವಸ್ತುವನ್ನು ಖರೀದಿಸಿದ ನಂತರ, ಪ್ರಯಾಣಿಕರು ಮೆನು ಕಾರ್ಡ್ನಲ್ಲಿರುವ ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ. IRCTC ಯ ಎಲ್ಲಾ ರೈಲುಗಳಲ್ಲಿ ಈ ವ್ಯವಸ್ಥೆ ಅನ್ವಯಿಸುತ್ತದೆ. ಹೊಸ ವ್ಯವಸ್ಥೆಯನ್ನು ಸಂಪೂರ್ಣ ಕ್ರಾಂತಿ ಎಕ್ಸ್ಪ್ರೆಸ್ನಲ್ಲಿ ಈಗಷ್ಟೇ ಪರಿಚಯಿಸಲಾಗಿದೆ.
ಇದಾದ ಬಳಿಕ ಹಂತಹಂತವಾಗಿ ಎಲ್ಲ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸುವುದರಿಂದ ಮುಕ್ತಿ ಸಿಗಲಿದೆ.