ಐಪಿಎಲ್ ಫಿಕ್ಸಿಂಗ್ ಮಾಡಿದ್ದು ನಿಜ : ಗುರುನಾಥ
ನವದೆಹಲಿ, ಮಾ.6: ಬಾಲಿವುಡ್ ನಟ, ಬುಕ್ಕಿಗಳ ನಂಟು ಹೊಂದಿರುವ ವಿಂದೂ ದಾರಾಸಿಂಗ್ ಮೂಲಕ ನಾನು ಐಪಿಎಲ್ ಬೆಟ್ಟಿಂಗ್ ನಡೆಸಿರುವುದು ನಿಜ ಎಂದು ಹಗರಣದಲ್ಲಿ ಬಂಧಿತನಾಗಿ ಪೊಲೀಸರ ವಶದಲ್ಲಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ ಮೇಯಪ್ಪನ್ ತಪ್ಪೊಪ್ಪಿಕೊಂಡಿದ್ದಾರೆ.
ನಾನು ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಫ್ರೆಂಡ್ಲಿಯಾಗಿ ಬೆಟ್ಟಿಂಗ್ ನಡೆಸಿದ್ದೆ ಅಷ್ಟೆ. ಆದರೆ, ಬೆಟ್ಟಿಂಗ್ ನಡೆಸುವುದು ನನ್ನ ಉದ್ದೇಶವಾಗಿರಲಿಲ್ಲ. ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಮೂಲಕ ಹಣ ಗಳಿಸುವ ಉದ್ದೇಶವೂ ನನಗಿಲ್ಲ ಎಂದು ಗುರುನಾಥ ಮೇಯಪ್ಪನ್ ಪೊಲೀಸರಿಗೆ ತಿಳಿಸಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳ ತಂಡವು ಈ ಕುರಿತಂತೆ ತೀವ್ರ ವಿಚಾರಣೆ ನಡೆಸಿದಾಗ ಬಾಲಿವುಡ್ ನಟ ವಿಂದು ದಾರಾಸಿಂಗ್ ಮೇಯಪ್ಪನ್ ಪರವಾಗಿ ಭಾರೀ ಪ್ರಮಾಣದ ಬೆಟ್ಟಿಂಗ್ ನಡೆಸಿದ್ದು ಬೆಳಕಿಗೆ ಬಂದಿದೆ.
ಈ ಬೆಟ್ಟಿಂಗ್ ಹಣ ಸಂಗ್ರಹಿಸಿದ್ದು ದೇವೇಂದ್ರ ಕೊಠಾರಿ ಎಂಬ ಬುಕ್ಕಿ. ಆದರೆ, ಸದ್ಯಕ್ಕೆ ಈ ಬುಕ್ಕಿ ಅಪರಾಧ ವಿಭಾಗದ ಪೊಲೀಸರಿಗೆ ಲಭ್ಯವಾಗಿಲ್ಲ. ಈ ಬೆಟ್ಟಿಂಗ್ ಹಣವು ಹವಾಲಾ ಮುಖಾಂತರ ಗುರುನಾಥ ಮೇಯಪ್ಪನ್ ಅವರ ಖಾತೆಗೆ ಜಮಾ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ. ಪವನ್ ಜೈಪುರ್ ಮತ್ತು ಸಂಜಯ್ ಜೈಪುರ್ ಎಂಬ ಬುಕ್ಕಿಗಳು ವಿಂದು ದಾರಾಸಿಂಗ್ ಗೆ ಬೆಟ್ಟಿಂಗ್ ಹಗರಣದಲ್ಲಿ ಸಹಕಾರ ನೀಡಿದ ನಂತರ ದುಬೈಗೆ ಪರಾರಿಯಾಗಿರುವುದು ಕೂಡ ತನಿಖೆಯಿಂದ ಬೆಳಕಿಗೆ ಬಂದಿದೆ.

ಪೊಲೀಸರ ಹೇಳಿಕೆ ಪ್ರಕಾರ, ವಿಂದು ದಾರಾಸಿಂಗ್ ದೂರವಾಣಿ ಮೂಲಕ ಬುಕ್ಕಿ ಪವನ್ ಜೈಪುರ್ ಮತ್ತು ಗುರುನಾಥ ಮೇಯಪ್ಪನ್ ಅವರೊಂದಿಗೆ ಚೆನ್ನೈನಲ್ಲಿ ಮಾತನಾಡಿರುವುದು ಕೂಡ ದಾಖಲಾಗಿದೆ.
ಗುರುನಾಥ ಮೇಯಪ್ಪನ್ ಮಧುರೆಯಿಂದ ವಿಮಾನವೊಂದರಲ್ಲಿ ಮುಂಬೈಗೆ ಆಗಮಿಸಿದ ವೇಳೆ ಅವರನ್ನು ಕಳೆದ ಶುಕ್ರವಾರ ಮಧ್ಯರಾತ್ರಿ ಅಪರಾಧ ವಿಭಾಗದ ಪೊಲೀಸ್ ತಂಡವು ಹಿರಿಯ ಅಧಿಕಾರಿ ಹಿಮಾಂಶುರಾಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿತ್ತು. ಮೇಯಪ್ಪನ್ ಬಂಧನದ ನಂತರ ಪೊಲೀಸರು ಸುಮಾರು ಎರಡೂವರೆ ತಾಸುಗಳ ಕಾಲ ಅವರ ವಿಚಾರಣೆ ನಡೆಸಿದರು.
ಕಳೆದ ಮೇ 21 ರಂದು ವಿಂದು ದಾರಾಸಿಂಗ್ನನ್ನು ಬಂಧಿಸಿದ ನಂತರ ಪೊಲೀಸರಿಗೆ ಸಿಕ್ಕ ಹಲವು ಮಾಹಿತಿಗಳನ್ನಾಧರಿಸಿ ಬುಕ್ಕಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದೆ ಮತ್ತು ಸದ್ಯ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅಳಿಯ 35 ವರ್ಷದ ಗುರುನಾಥ ಮೇಯಪ್ಪನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ.ವಿಚಾರಣೆ ವೇಳೆ ತಾನು ಈ ಬೆಟ್ಟಿಂಗ್ ಹಗರಣದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿರುವುದಾಗಿ ಮೇಯಪ್ಪನ್ ತಿಳಿಸಿದ್ದಾರೆ.
ಎನ್.ಶ್ರೀನಿವಾಸನ್ ಅವರ ಒಡೆತನದ ಇಂಡಿಯಾ ಸಿಮೆಂಟ್ಸ್ ಎಂಬ ಕಂಪೆನಿಯಲ್ಲಿ ಅವರ ಅಳಿಯ ಗುರುನಾಥ ಮೇಯಪ್ಪನ್, ಸಿಇಓ ಅಥವಾ ಇನ್ನಾವುದೇ ಹುದ್ದೆಯಲ್ಲಿ ಇಲ್ಲ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರೂ ಅಲ್ಲ. ಅವರು ಸಾಧಾರಣ ಒಬ್ಬ ಸದಸ್ಯರಷ್ಟೆ ಎಂದು ಕಂಪೆನಿ ಮೂಲಗಳು ಸ್ಪಷ್ಟಪಡಿಸಿದ ನಂತರವೇ ಮೇಯಪ್ಪನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications