ಭಯೋತ್ಪಾದನೆ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ 25 ಮಂದಿ ಅಫ್ಘಾನ್ನಲ್ಲಿದ್ದಾರೆ: ಗುಪ್ತಚರ ಮಾಹಿತಿ
ನವದೆಹಲಿ, ಸೆಪ್ಟೆಂಬರ್ 1: ವಿವಿಧ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಾಗೂ ಭಾರತಕ್ಕೆ ಬೇಕಿರುವ 25 ಮಂದಿ ಉಗ್ರರು ಅಫ್ಘಾನಿಸ್ತಾನದಲ್ಲಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ತಾಲಿಬಾನ್ ಬಿಡುಗಡೆ ಮಾಡಿರುವ ಉಗ್ರರ ಪೈಕಿ ಐಎಸ್-ಕೆ ನೇಮಕ ಮಾಡಿಕೊಂಡಿದ್ದ ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಐಜಾಜ್ ಅಹಂಗರ್ ಕೂಡಾ ಇರಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಅಫ್ಘಾನಿಸ್ತಾನವನ್ನು ತೆಕ್ಕೆಗೆ ಪಡೆದರೂ ತಾಲಿಬಾನ್ ಮುಖಂಡ ಹಿಬತ್ತುಲ್ಲಾ ಇನ್ನೂ ಅಜ್ಞಾತ ಸ್ಥಳದಲ್ಲಿರುವುದೇಕೆ?
25 ಶಂಕಿತರ ಪೈಕಿ ಅಬು ಖಾಲಿದ್ ಅಲ್-ಹಿಂದಿ ಅಲಿಯಾಸ್ ಮೊಹಮ್ಮದ್ ಸಾಜಿದ್ ಕುತಿರುಲ್ಮಲ್( ಕಾಸರಗೋಡಿನ ಅಂಗಡಿ ಮಾಲಿಕ) ಕೂಡ ಇದ್ದು ಈತ 2016 ರ ಎನ್ಐಎ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ.
ಕಾಬೂಲ್ ನಲ್ಲಿ ಕಳೆದ ವರ್ಷ ಸಿಖ್ ಮಂದಿರದ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿಯೂ ಈತ ಶಂಕಿತ ಆರೋಪಿಯಾಗಿದ್ದಾನೆ.
ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಈ ಭಯೋತ್ಪಾದಕರಿದ್ದು, ಇವರನ್ನು ಈ ಹಿಂದೆ ಅಫ್ಘನ್ ಪಡೆಗಳು ಬಂಧಿಸಿದ್ದವು. ಆದರೆ ನಂತರ ದೇಶ ತಾಲೀಬಾನ್ ವಶವಾದ ಬಳಿಕ ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಐಎಸ್-ಕೆ ಉಗ್ರ ಸಂಘಟನೆ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಗೆ ಈ ಭಾರತೀಯರು ಸೇರ್ಪಡೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು ಈ 25 ಮಂದಿಯ ಪೈಕಿ ಈಗ ಎಷ್ಟು ಮಂದಿ ಜೀವ ಸಹಿತ ಇದ್ದಾರೆ ಎಂಬುದು ತಿಳಿದಿಲ್ಲ.
ಈ 25 ಭಾರತೀಯರ ಮೇಲೆ ಭದ್ರತಾ ಪಡೆಗಳು ಕಣ್ಗಾವಲಿಟ್ಟಿದ್ದು, ಹೆಚ್ಚಿನವರು ಕೇರಳದ ಮೂಲದವರಾಗಿದ್ದಾರೆ. ಈ ಉಗ್ರರು ಒಸಾಮಾ ಬಿನ್ ಲ್ಯಾಡನ್ ನ ಭದ್ರತಾ ಅಧಿಕಾರಿಯಾಗಿದ್ದ ಅಮಿನ್ ಅಲ್ ಹಕ್ ನ ತವರಾದ ನಂಗರ್ಹಾರ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅತ್ತ ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಇತ್ತ ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಯತ್ನ, ಸಂಚು, ಚಟುವಟಿಕೆಗಳ ಪ್ರಕರಣಗಳು ಹೆಚ್ಚಾಗತೊಡಗಿವೆ.
ಸೋಮವಾರ ಆ.30 ರಂದು 30 ಭಯೋತ್ಪಾದಕರು ಕಾಶ್ಮೀರ ಕಣಿವೆಯೊಳಗೆ ಪೂಂಚ್ ಸೆಕ್ಟರ್ ಮೂಲಕ ಪ್ರವೇಶಿಸಲು ಯತ್ನಿಸಿದ್ದು, ಅಫ್ಘಾನಿಸ್ತಾನ ತಾಲೀಬಾನ್ ವಶವಾದ ನಂತರ ಭದ್ರತಾ ದೃಷ್ಟಿಯಿಂದ ಆತಂಕ ಹೆಚ್ಚಾಗಿದೆ.
ಸೇನೆಯ ಮಾಹಿತಿಯ ಪ್ರಕಾರ ಭಯೋತ್ಪಾದಕರ ಪೈಕಿ ಓರ್ವನನ್ನು ಹತ್ಯೆ ಮಾಡಲಾಗಿದ್ದು ಎಕೆ-47 ರೈಫಲ್ ನ್ನು ವಶಕ್ಕೆ ಪಡೆಯಲಾಗಿದೆ. ಇತರ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಆ.15 ರಂದು ಅಫ್ಘಾನಿಸ್ತಾನವನ್ನು ತಾಲೀಬಾನ್ ವಶಪಡಿಸಿಕೊಂಡ ನಂತರ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಏರುಗತಿಯಲ್ಲಿವೆ.
ಕೆಲವು ತಿಂಗಳುಗಳಿಂದ ನಿಷ್ಕ್ರಿಯಗೊಂಡಿದ್ದ ಜೈಶ್-ಎ-ಮೊಹಮ್ಮದ್ ನಂತಹ ಉಗ್ರ ಸಂಘಟನೆಗಳು ತಾಲೀಬಾನ್ ಅಧಿಕಾರಕ್ಕೇರುತ್ತಿದ್ದಂತೆಯೇ ಕಾಶ್ಮೀರದಲ್ಲಿ ದಿಢೀರ್ ಸಕ್ರಿಯಗೊಂಡಿವೆ. ಇದಕ್ಕೆ ಪೂರಕವೆಂಬಂತೆ ಆ.21 ರಂದು ಭದ್ರತಾ ಪಡೆಗಳು ಜೈಶ್ ಉಗ್ರನನ್ನು ಹತ್ಯೆ ಮಾಡಿದ್ದವು.
ಇದಾದ ಎರಡು ದಿನಗಳ ಬಳಿಕ ಲಷ್ಕರ್-ಎ-ತಯ್ಬಾ ಸಂಘಟನೆಯ ಸಹ ಸಂಘಟನೆಯಾದ ಟಿಆರ್ ಎಫ್ ನ ಇಬ್ಬರು ಕಮಾಂಡರ್ ಗಳನ್ನು ಶ್ರೀನಗರದಲ್ಲಿ ಎನ್ ಕೌಂಟರ್ ಮಾಡಲಾಗಿತ್ತು.
ಜೈಶ್ ಉಗ್ರ ಸಂಘಟನೆಯ ಉಗ್ರರು ಇತ್ತೀಚೆಗೆ ಕಂದಹಾರ್ಗೆ ತೆರಳಿ ತಾಲಿಬಾನ್ ನಾಯರೊಂದಿಗೆ ಭಾರತ ಕೇಂದ್ರಿತ ಕಾರ್ಯಾಚರಣೆಗಳ ಬಗ್ಗೆ ಚರ್ಚೆ ನಡೆಸಿದ್ದರ ಹಿನ್ನೆಲೆಯಲ್ಲಿ ಈ ಘಟನೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.