ಯುವಕರ ಸೆಳೆಯಲು ಆನ್ ಲೈನ್ ಬಳಸಿಕೊಂಡ ಸಿಮಿ
ಈಮೇಲ್ ಮುಖಾಂತರ, ವಿಡಿಯೋ ತುಣುಕುಗಳ ಮುಖಾಂತರ ಎಚ್ಚರಿಕೆ ನೀಡಿ ದಾಳಿ ನಡೆಸುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಕಾಲಕ್ರಮೇಣ ಅಪ್ಡೇಟ್ ಆಗುತ್ತಿವೆ. ಈಗ ಆನ್ ಲೈನ್ ಮುಖಾಂತರ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ತಮ್ಮ ಬಾಹುಗಳನ್ನು ವಿಸ್ತರಿಸಿಕೊಳ್ಳಲು ಹೊಂಚುಹಾಕುತ್ತಿವೆ.
ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ)ದ ನಾಯಕ ಸಲಾಹುದ್ದಿನ್ ಅಹ್ಮದ್ ಅಂತಿಮಯಾತ್ರೆಯ ಸಂದರ್ಭದಲ್ಲಿ ಬಂಧಿಸಲಾದ ಇಬ್ಬರು ಉಗ್ರರ ಬಂಧನ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಭಾರತದ ಮೇಲೆ ದಾಳಿ ಹೂಡಲು ಏನೇನು ಸಂಚು ಹೂಡುತ್ತಿದೆ ಎಂಬುದು ಬಯಲಾಗುತ್ತಿದೆ.
ಅವರಿಬ್ಬರು ಅಫಘಾನಿಸ್ತಾನಕ್ಕೆ ಹೋಗುತ್ತಿದ್ದರು ಎಂದು ಹೈದರಾಬಾದ್ ಪೊಲೀಸರು ಹೇಳಿಕೆ ನೀಡಿದ್ದರೂ, ಅದಕ್ಕೆ ವ್ಯತಿರಿಕ್ತವಾಗಿ ಜಾಗೃತ ದಳ ಅವರ ಹುನ್ನಾರವನ್ನು ಬಯಲು ಮಾಡಿದೆ. ಅವರಿಬ್ಬರು, ಮಹಾರಾಷ್ಟ್ರದ ಹತ್ತು ಜಿಹಾದಿಗಳ ಗುಂಪಿಗೆ ಸೇರಿದ್ದು, ಆನ್ ಲೈನ್ ಮಾಧ್ಯಮದ ಮುಖಾಂತರ ಸಿಮಿಯ ಶಕ್ತಿ ವರ್ಧನೆಯಲ್ಲಿ ತೊಡಗಿದ್ದಾರೆ.
ವಿಧ್ವಂಸಕ ಕೃತ್ಯಕ್ಕೆ ಸಾಮಾಜಿಕ ತಾಣಗಳ ಬಳಕೆ
ಓಮೆರ್ಖೇಡ್ ನಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ಮುದಸ್ಸರ್ ಮತ್ತು ವಿದ್ಯಾರ್ಥಿಯಾಗಿರುವ ತಾರಿಕ್ 2009ರಿಂದಲೇ ಸಿಮಿಯ ಸದಸ್ಯರಾಗಿದ್ದಾರೆ. ಇವರಿಬ್ಬರ ಮಿದುಳಿನ ಕೂಸು ಆನ್ ಲೈನ್ ಮೂಲಕ ಸಿಮಿಯ ಸಂಘಟನೆಯನ್ನು ಬಲಪಡಿಸುವುದು ಮತ್ತು ವಿಧ್ವಂಸಕ ಕೃತ್ಯದ ಚಿಂತನೆ ನಡೆಸುವ ವ್ಯಕ್ತಿಗಳ ಸಶಕ್ತ ಯುದ್ಧತಂಡವನ್ನು ಕಟ್ಟುವುದು. ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಇವರಿಬ್ಬರಿಗೆ ಇಂಥ ಖತರ್ನಾಕ್ ಐಡಿಯಾ ಕೊಟ್ಟಿದ್ದು, ಈಗಾಗಲೆ ಬಂಧಿತನಾಗಿರುವ ಮನ್ಸೂರ್ ಪೀರಬಾಯ್ ಎಂಬ ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದಕ. ಇತ್ತೀಚಿನ ದಿನಗಳಲ್ಲಿ ಸಂಘಟನೆಗೆ ಯುವಕರನ್ನು ಸಾಮಾಜಿಕ ತಾಣಗಳ ಮುಖಾಂತರವೇ ನೇಮಕ ಮಾಡಿಕೊಳ್ಳುತ್ತಿವೆ. ಇವರಿಬ್ಬರು ಹೈದರಾಬಾದ್ ನಲ್ಲಿ ಹಲವಾರು ಜನರನ್ನು ಭೇಟಿ ಮಾಡಿ ತಮ್ಮ ಯೋಜನೆಯ ಸಂಚನ್ನು ಹಂಚಿಕೊಳ್ಳುತ್ತಿದ್ದರು.
ಭಾರತದಲ್ಲಿ ಬೃಹತ್ತಾಗಿ ಬೆಳೆಯಬಯಸುತ್ತಿದೆ ಸಿಮಿ
ಭಾರತದಲ್ಲಿ ತನ್ನ ಬಾಹುವನ್ನು ವಿಸ್ತರಿಸುತ್ತೇನೆ ಎಂದು ಘಂಟಾಘೋಷವಾಗಿ ಸಾರಿರುವ ಅಲ್ ಖೈದಾ ಜೊತೆ ಸಿಮಿ ಸಂಘಟನೆ ಅನ್ಯೋನ್ಯ ಸಂಬಂಧ ಹೊಂದಿದೆ. ಸಿಮಿಗೆ ಅಲ್ ಖೈದಾ ತನ್ನ ಕಾರ್ಯತಂತ್ರಗಳ ವಿವರಗಳನ್ನು ನೀಡಿದ್ದು, ಅದಕ್ಕೇ ಅಂಟಿಕೊಳ್ಳುವಂತೆಯೂ ಕಟ್ಟಾಜ್ಞೆ ನೀಡಿದೆ. ಆದರೆ, ಈ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ಇಳಿಸಬೇಕಿದ್ದರೆ ತಾನು ಬೃಹತ್ತಾಗಿ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆಯನ್ನೂ ಸಿಮಿ ಹೊಂದಿದೆ.
ಸಿಮಿ ಸಂಘಟನೆಗೆ ಐಎಸ್ಐಎಸ್ ಸ್ಫೂರ್ತಿ
ಮುದಸ್ಸರ್ ಮತ್ತು ತಾರಿಕ್ ಹತ್ತರಿಂದ ಹದಿನೈದು ಜನರ ತಂಡ ಕಟ್ಟಿಕೊಂಡಿದ್ದು, ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಐಎಸ್ಐಎಸ್ ಸಂಘಟನೆಯನ್ನು ಕೆಲ ಯುವಕರು ಆನ್ ಲೈನ್ ಮುಖಾಂತರವೇ ಸೇರಿಕೊಂಡಿದ್ದು ಗಮನಿಸಿದ ಇವರಿಬ್ಬರು ಅಂತಹುದೇ ನೆಟ್ವರ್ಕನ್ನು ಆರಂಭಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದರು. ಇದಕ್ಕೆಲ್ಲ ಐಎಸ್ಐಎಸ್ ಸಂಘಟನೆಯೇ ಸ್ಫೂರ್ತಿ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ.
ಅಲ್-ಶಬಾಬ್ ಎಂಬ ಮತ್ತೊಂದು ಸಂಘಟನೆಯ ಸಹಾಯವನ್ನು ಬಳಸಿಕೊಂಡು ಅಲ್ ಖೈದ್ ತನ್ನ ತೆಕ್ಕೆಗೆ ಯುವಕರನ್ನು ಸೇರಿಸಿಕೊಳ್ಳುತ್ತಿದೆ. ಇದನ್ನು ಕೂಡ ಗಮನಿಸುತ್ತಿದ್ದ ಈ ಇಬ್ಬರು ಅಲ್ ಖೈದಾ ಜೊತೆಗೆ, ತಾವೂ ಇದಕ್ಕೆ ಕೈಜೋಡಿಸುವುದಾಗಿ ವಾಗ್ದಾನ ನೀಡಿದ್ದು, ಸಾಕಷ್ಟು ಪತ್ರ ವ್ಯವಹಾರಗಳನ್ನು ಅಲ್ ಖೈದಾ ಜೊತೆಗೆ ಮಾಡಿದ್ದಾರೆ. ಹಾಗೆಯೆ, ಭಾರತೀಯ ಯುವಕರಿಗೆ ಜಿಹಾದಿ ತಂಡವನ್ನು ಸೇರಿಕೊಳ್ಳಲು ಕರೆ ನೀಡುತ್ತಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದಾರೆ.