ರೈಲ್ವೆ ಅಭಿವೃದ್ಧಿಗೆ ಪ್ರಯಾಣಿಕರಿಂದಲೇ ಬಳಕೆ ದರ ವಸೂಲಿ, ಟಿಕೆಟ್ ಬೆಲೆ ಏರಿಕೆ ಸಾಧ್ಯತೆ
ನವದೆಹಲಿ, ಸೆಪ್ಟೆಂಬರ್ 18: ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ಐದು ಪಟ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ಭಾರತೀಯ ರೈಲ್ವೆ, ಪ್ರಯಾಣಿಕರಿಗೆ ಮತ್ತೊಂದು ದರ ಹೆಚ್ಚಳದ ಬರೆ ಹಾಕಲು ಮುಂದಾಗಿದೆ. ಜನನಿಬಿಡ ನಿಲ್ದಾಣಗಳಲ್ಲಿ ರೈಲು ಹತ್ತುವ ಪ್ರಯಾಣಿಕರಿಂದ 'ಬಳಕೆ ದರ'ವನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಶುರುಮಾಡಲಿದೆ. ಇದರಿಂದ ಒಟ್ಟು ಟಿಕೆಟ್ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಲಿದೆ.
ರೈಲ್ವೆ ನಿಲ್ದಾಣಗಳ ಮರು ಅಭಿವೃದ್ಧಿ ಮತ್ತು ನಿಲ್ದಾಣಗಳ ಮೂಲಸೌಕರ್ಯ ಆಧುನೀಕರಣ ಕಾರ್ಯಗಳಿಗಾಗಿ ಬಳಕೆ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತದೆ. ಇದನ್ನು ಟಿಕೆಟ್ ಬೆಲೆಯಲ್ಲಿಯೇ ಸೇರಿಸಲಾಗುತ್ತದೆ.
'ನಾವು ಅತಿ ಸಣ್ಣ ಮೊತ್ತವನ್ನು ಬಳಕೆ ಶುಲ್ಕವನ್ನಾಗಿ ಪಡೆಯಲಿದ್ದೇವೆ. ಮರು ಅಭಿವೃದ್ಧಿಪಡಿಸಲಾಗುತ್ತಿರುವ ಮತ್ತು ಮರು ಅಭಿವೃದ್ಧಿಯಾಗದೆ ಉಳಿದಿರುವ ನಿಲ್ದಾಣಗಳ ಸೇರಿದಂತೆ ವಿವಿಧೆಡೆ ಬಳಕೆ ಶುಲ್ಕ ನಿಗದಿಪಡಿಸುವ ಅಧಿಸೂಚನೆಯನ್ನು ಹೊರಡಿಸಲಿದ್ದೇವೆ. ನಿಲ್ದಾಣಗಳ ಮರು ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣಗೊಂಡ ಬಳಿಕ ಬಳಕೆ ಶುಲ್ಕ ಇಲಾಖೆಗೆ ಹೋಗುತ್ತದೆ. ನಂತರ ಸಂಗ್ರಹವಾದ ಬಳಕೆ ಶುಲ್ಕವನ್ನು ಪ್ರಯಾಣಿಕರಿಗೆ ಎಲ್ಲ ನಿಲ್ದಾಣಗಳಲ್ಲಿಯೂ ಉತ್ತಮ ಸವಲತ್ತುಗಳನ್ನು ಒದಗಿಸುವ ಅಭಿವೃದ್ಧಿ ಕಾರ್ಯಗಳಿಗೆ ರೈಲ್ವೆ ಬಳಸುತ್ತದೆ' ಎಂದು ರೈಲ್ವೆ ಮಂಡಳಿ ಸಿಇಒ ಮತ್ತು ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದರು. ಮುಂದೆ ಓದಿ.

ತೀರಾ ಕಡಿಮೆ ಮೊತ್ತ
ರೈಲ್ವೆ ಇಲಾಖೆಯು ವಿಧಿಸುವ ಹೊಸ ಬಳಕೆ ದರವು ಅತ್ಯಂತ ಕಡಿಮೆ ಮೊತ್ತದಲ್ಲಿ ಇರಲಿದೆ. ಇದು ಯಾವುದೇ ರೀತಿ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲ. ಜಾಗತಿಕ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವುದರತ್ತ ರೈಲ್ವೆ ಇಲಾಖೆ ಗಮನ ಹರಿಸಿದೆ. ಹೀಗಾಗಿ ಬಳಕೆ ಶುಲ್ಕ ಸಂಗ್ರಹ ಮಹತ್ವದ್ದಾಗಿದೆ ಎಂದು ಯಾದವ್ ಹೇಳಿದರು.

ಎಲ್ಲ ನಿಲ್ದಾಣಗಳಲ್ಲಿಯೂ ವಸೂಲಿ ಇಲ್ಲ
ಈ ಬಳಕೆ ಶುಲ್ಕವನ್ನು ದೇಶದ ಪ್ರತಿ ರೈಲ್ವೆ ನಿಲ್ದಾಣದಲ್ಲಿಯೂ ಸಂಗ್ರಹಿಸಲಾಗುತ್ತದೆಯೇ? ಎಂಬ ಪ್ರಶ್ನೆಗೆ ಅವರು, ಭಾರತೀಯ ರೈಲ್ವೆ ಜಾಲದಲ್ಲಿ ಸುಮಾರು 7,000 ನಿಲ್ದಾಣಗಳಿವೆ. ಅವುಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಜನನಿಬಿಡಗೊಳ್ಳುವುದನ್ನು ನಿರೀಕ್ಷಿಸಲಾಗಿರುವ ಶೇ 10-15ರಷ್ಟು ನಿಲ್ದಾಣಗಳಲ್ಲಿ ಮಾತ್ರವೇ ಬಳಕೆ ಶುಲ್ಕ ವಸೂಲಿ ಮಾಡಲಾಗುತ್ತದೆ. ಲೆಕ್ಕಾಚಾರದ ಪ್ರಕಾರ ದೇಶದಲ್ಲಿ ಅಂತಹ ನಿಲ್ದಾಣಗಳು 700-1000 ಇರಬಹುದು ಎಂದು ತಿಳಿಸಿದರು.

ನೀಡುವ ಶುಲ್ಕಕ್ಕಿಂತ ಲಾಭವೇ ಹೆಚ್ಚು
'ಅತ್ಯಲ್ಪ ಪ್ರಮಾಣದಲ್ಲಿ ಬಳಕೆ ಶುಲ್ಕವನ್ನು ಪಾವತಿಸುವ ಪ್ರಯಾಣಿಕರು ಅದರಿಂದ ದೊಡ್ಡ ಪ್ರಮಾಣದ ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ಅವರು ಪಡೆಯುವ ಪ್ರಯೋಜನಕ್ಕೆ ನೀಡುವ ಶುಲ್ಕ ತೀರಾ ಕಡಿಮೆ. ಅಲ್ಲದೆ, ಇದು ಎಲ್ಲ ನಿಲ್ದಾಣಗಳಲ್ಲಿಯೂ ಜಾರಿಯಾಗುವುದಿಲ್ಲ. ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಮಾತ್ರ ಅನ್ವಯವಾಗಲಿದೆ' ಎಂದು ರೈಲ್ವೆ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಕಾರ್ಯದರ್ಶಿಗಳ ತಂಡದ ಸಲಹೆ
'ರೈಲ್ವೆ ನಿಲ್ದಾಣಗಳಲ್ಲಿ ಉತ್ತಮ ಸುಧಾರಿತ ಸುರಕ್ಷತೆ, ಪ್ರಯಾಣಿಕ ಸೌಲಭ್ಯ ಮತ್ತು ಸೇವೆಗಳನ್ನು ಒದಗಿಸಲು ಮರು ಅಭಿವೃದ್ಧಿ ಹಾಗೂ ಆಧುನೀಕರಣ ಕಾರ್ಯಗಳನ್ನು ನಡೆಸಲು ಕಾರ್ಯದರ್ಶಿಗಳ ತಂಡವೊಂದನ್ನು ರಚಿಸಲಾಗಿದೆ. ಈ ಕಾರ್ಯದರ್ಶಿಗಳ ತಂಡವು ನಿಲ್ದಾಣಗಳ ಪುನರ್ ಅಭಿವೃದ್ಧಿ ಕಾರ್ಯಗಳಿಗೆ ಕನಿಷ್ಠ ಬಳಕೆ ದರ ವಿಧಿಸುವ ಬಗ್ಗೆ ಸಲಹೆ ನೀಡಿತ್ತು. ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ' ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಗೆ ಬುಧವಾರ ತಿಳಿಸಿದ್ದರು.












Click it and Unblock the Notifications