ಮಾರ್ಚ್ 31ರ ತನಕ ಪ್ಯಾಸೆಂಜರ್ ರೈಲು ರದ್ದು
ಬೆಂಗಳೂರು, ಮಾರ್ಚ್ 22 : ಕೊರೊನಾ ಹರಡದಂತೆ ತಡೆಯಲು ಭಾರತೀಯ ರೈಲ್ವೆ ಮಹತ್ವದ ತೀರ್ಮಾನ ಕೈಗೊಂಡಿದೆ. ಮಾರ್ಚ್ 31ರ ತನಕ ದೇಶದಲ್ಲಿ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಭಾನುವಾರ ಈ ಕುರಿತು ರೈಲ್ವೆ ಅಧಿಕೃತ ಆದೇಶ ಹೊರಡಿಸಿದೆ. ರೈಲ್ವೆಯಲ್ಲಿ ಪ್ರಯಾಣ ಮಾಡಿದ 12 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಶನಿವಾರ ಖಚಿತವಾಗಿತ್ತು. 'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿ ಭಾನುವಾರ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗೂಡ್ಸ್ ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ರೈಲ್ವೆ ಇಲಾಖೆ ಆದೇಶದಲ್ಲಿ ತಿಳಿಸಿದೆ. ಆದರೆ, ರೈಲ್ವೆ ಸಿಬ್ಬಂದಿಗೆ ರಜೆ ನೀಡಲಾಗಿಲ್ಲ.
ಶನಿವಾರ ಭಾರತೀಯ ರೈಲ್ವೆ ನಿಮ್ಮ ಪ್ರಯಾಣವನ್ನು ಮುಂದೂಡಿ ಎಂದು ದೇಶದ ಜನರಿಗೆ ಮನವಿ ಮಾಡಿತ್ತು. ರೈಲ್ವೆಯಲ್ಲಿ ಪ್ರಯಾಣ ಮಾಡಿದ 12 ಜನರಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಮಾರ್ಚ್ 13 ರಿಂದ 16ರ ತನಕ ರೈಲಿನಲ್ಲಿ ಪ್ರಯಾಣ ಮಾಡಿದ ವಿವಿಧ ರಾಜ್ಯಗಳ 12 ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿತ್ತು. ಆದ್ದರಿಂದ ರೈಲ್ವೆಗೆ ಪ್ರಯಾಣ ಮುಂದೂಡುವಂತೆ ಜನರಲ್ಲಿ ಮನವಿ ಮಾಡಿತ್ತು.
ಭಾರತೀಯ ರೈಲ್ವೆ ರೈಲು ನಿಲ್ದಾಣದಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ದೇಶದ 250 ರೈಲ್ವೆ ನಿಲ್ದಾಣದಲ್ಲಿ ರೂ. 10 ರೂ. ಇದ್ದ ಫ್ಲಾಟ್ ಫಾರಂ ಟಿಕೆಟ್ ದರವನ್ನು 50 ರೂ. ಗೆ ಏರಿಕೆ ಮಾಡಲಾಗಿತ್ತು.
ಕೊರೊನಾ ಭೀತಿ ಹಿನ್ನಲೆಯಲ್ಲಿ ಪ್ರಯಾಣಿಕ ಕೊರತೆ ಉಂಟಾಗಿದೆ. ವಿವಿಧ ರೈಲ್ವೆ ವಲಯಗಳು ದೂರದ ನಗರಗಳಿಗೆ ಸಂಚಾರ ನಡೆಸುವ ರೈಲುಗಳನ್ನು ಮಾರ್ಚ್ 31ರ ತನಕ ಸ್ಥಗಿತಗೊಳಿಸಿದ್ದವು.












Click it and Unblock the Notifications