ರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿ ಸೋಲಿಸಲು ಏನೆಲ್ಲಾ ಕಸರತ್ತು
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯನ್ನು ಸೋಲಿಸಲು ಯುಪಿಎ, ಎಡಪಕ್ಷಗಳು ಸೇರಿದಂತೆ ಎಲ್ಲರೂ ಒಂದಾಗಿದ್ದಾರೆ.
ಮುಂಬರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳೆಲ್ಲಾ ಒಗ್ಗೂಡಿ ಏಕತೆಯ ಮಂತ್ರ ಪ್ರದರ್ಶಿಸುತ್ತಿದ್ದರೂ, ಸಂಭಾವ್ಯ ಅಭ್ಯರ್ಥಿಗಳ ಹೆಸರಿಗೆ ಅಂತಿಮ ರೂಪುರೇಷೆ ನೀಡುವಲ್ಲಿ ಈವರೆಗೂ ಯಶಸ್ವಿಯಾಗಲಿಲ್ಲ.
ಒಂದೆಡೆ ಎನ್ಡಿಎ ಎಲ್ಲರೂ ಒಪ್ಪುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬೆಂಬಲ ನೀಡಲು ಸಿದ್ದ ಎನ್ನುತ್ತಿರುವ ಕಾಂಗ್ರೆಸ್ ಹೈಕಮಾಂಡ್, ಯುಪಿಎ ಮೈತ್ರಿಕೂಟದ ಇತರ ಪಕ್ಷಗಳು ಮತ್ತು ಎಡ ಪಕ್ಷಗಳ ಮುಖಂಡರ ಸಮಾಲೋಚನೆಯಲ್ಲಿ ನಿರತರಾಗಿವೆ.
ಯುಪಿಎ ಮೈತ್ರಿಕೂಟದ ಮತ್ತು ಎಡಪಕ್ಷಗಳ ಮುಖಂಡರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸೋನಿಯಾ ಗಾಂಧಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ಜೆಡಿ, ಸಮಾಜವಾದಿ ಮತ್ತು ಬಿಎಸ್ಪಿ ಮುಖಂಡರ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಕೋಮುವಾದಿ ಬಿಜೆಪಿಗೆ ಸೋಲುಣಿಸುವುದು ನಮ್ಮ ಗುರಿ ಅನ್ನುತ್ತಿರುವ ವಿರೋಧ ಪಕ್ಷಗಳು, ಎಲ್ಲರ ಬೆಂಬಲ ಪಡೆದು ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿವೆ. ಎನ್ಡಿಎ ಮೈತ್ರಿಕೂಟದಲ್ಲಿದ್ದರೂ, ಬಿಜೆಪಿ ವಿರುದ್ದ ಹರಿಹಾಯುವ ಶಿವಸೇನೆಯ ಮುಖಂಡರ ಜೊತೆಯೂ ನಿತೀಶ್ ಕುಮಾರ್ ಮಾತುಕತೆ ನಡೆಸುತ್ತಿದ್ದಾರೆ.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗೆ ಎಲ್ಲರೂ ಒಪ್ಪುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅವರನ್ನು ಒಪ್ಪಲು ನಮಗೇನೂ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಹೇಳಿದ್ದರೂ, ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನುವ ವಾತಾವರಣ ಸದ್ಯಕ್ಕಿದೆ. ಚುನಾವಣೆಗೆ ವಿರೋಧ ಪಕ್ಷಗಳ ಮುಖಂಡರ ಪ್ರಮುಖ ಬೆಳವಣಿಗೆಗಳು, ಮುಂದೆ ಓದಿ...

ಸೋನಿಯಾ ಭೇಟಿ ಮಾಡಿದ ಶರದ್ ಪವಾರ್
ಎನ್ಸಿಪಿ ಮುಖಂಡ ಶರದ್ ಪವಾರ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶರದ್ ಪವಾರ್ ಹೆಸರು ಕೂಡಾ ಕೇಳಿ ಬರುತ್ತಿತ್ತು.

ಎಐಸಿಸಿ ಅಧ್ಯಕ್ಷರನ್ನು ಭೇಟಿಯಾದ ನಿತೀಶ್, ರಾಜಾ
ಎಲ್ಲರನ್ನೂ ಒಂದುಗೂಡಿಸುವ ಕೆಲಸಕ್ಕೆ ಮುಂದಾಗಿರುವ ನಿತೀಶ್ ಕುಮಾರ್, ಶರದ್ ಯಾದವ್, ಎಡಪಕ್ಷಗಳ ಮುಖಂಡರಾದ ಡಿ ರಾಜಾ ಮತ್ತು ಸೀತಾರಾಂ ಯಚೂರಿ, ದೆಹಲಿಯಲ್ಲಿ ಸೋನಿಯಾ ಗಾಂಧಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಸೋಲಿಸಲು ಎಲ್ಲರೂ ಒಂದು
ಕೋಮುವಾದಿ ಪಕ್ಷದ ಅಭ್ಯರ್ಥಿ ರಾಷ್ಟ್ರಪತಿ ಹುದ್ದೆಗೆ ಏರದಂತೆ ತಡೆಯಲು ಎಲ್ಲರೂ ಒಂದಾಗಬೇಕು ಎನ್ನುವ ಸೋನಿಯಾ ಮತ್ತು ನಿತೀಶ್ ಮನವಿಗೆ ಎಲ್ಲರೂ ಸೂಕ್ತವಾಗಿ ಸ್ಪಂಧಿಸುತ್ತಿದ್ದಾರೆ. ಎಲ್ಲರೂ ಒಪ್ಪುವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ, ಸಿಪಿಐ ಮುಖಂಡ ಯಚೂರಿ ಹೇಳಿದ್ದಾರೆ.

ದಿಗ್ವಿಜಯ್ ಸಿಂಗ್ ಹೇಳಿಕೆ
ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಗ್ಗೂಡಲೇ ಬೇಕಾಗಿದೆ, ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಲ್ಲಿ ಯಾವ ಪಕ್ಷಗಳೂ ಸ್ವಯಂ ಪ್ರತಿಷ್ಠೆಗೆ ಒಳಗಾಗದೇ ಒಮ್ಮತದ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕಿದೆ - ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್.

ಕಾರ್ಯಕ್ರಮವೊಂದರಲ್ಲಿ ಮತ್ತೆ ಮಾತುಕತೆ
ಸಮಾಜವಾದಿ ಮುಖಂಡ ಮಧು ಲಿಮಾಯೆ ಅವರ 95ನೇ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸಿಪಿಐ, ಎನ್ಸಿಪಿ, ಜೆಡಿಎಸ್, ಜೆಡಿಯು, ಎಸ್ಪಿ, ಆರ್ಜೆಡಿ, ಸೋಶಿಯಲಿಸ್ಟ್ ಪಾರ್ಟಿ, ಲೋಕತಾಂತ್ರಿಕ್ ಸಮಾಜವಾದಿ ಪಕ್ಷದ ಮುಖಂಡರು ಹಾಜರಿದ್ದರು. ಈ ವೇಳೆ ರಾಷ್ಟ್ರಪತಿ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯಿದೆ. (ಚಿತ್ರ: ಪಿಟಿಐ)












Click it and Unblock the Notifications