ಬಂಧಿತ ಪಾಕಿಸ್ತಾನ ಉಗ್ರನ ಚಿಕಿತ್ಸೆಗೆ ನೆರವಾಗಲು ರಕ್ತದಾನ ಮಾಡಿದ ಭಾರತೀಯ ಸೇನಾ ಸಿಬ್ಬಂದಿ
ಶ್ರೀನಗರ, ಆಗಸ್ಟ್ 25: ಸೈನಿಕರೆಂದರೆ ಜೀವ ತೆಗೆಯುವವರಲ್ಲ ಜೀವ ಕಾಯುವವರು, ಅದರಲ್ಲೂ ಭಾರತೀಯ ಸೇನೆಯಲ್ಲಿ ಮಾನವತೆಯ ಅಂಶಗಳು ಹೆಚ್ಚಾಗಿವೆ. ಭಾರತದ ಭದ್ರತೆಯ ವಿಚಾರ ಬಂದಾಗ ಎದುರಾಳಿ ಯಾರೆಂದು ಕೂಡ ನೀಡದೆ ಅವರ ಎದೆಗೆ ಗುಂಡು ಇಳಿಸುವ ಸೈನ್ಯ, ಕಾಪಾಡುವ ವಿಚಾರದಲ್ಲಿ ಅಷ್ಟೇ ಮಮತೆಯನ್ನು ತೋರುತ್ತದೆ.
ನಮಗೆ ಕೇಡು ಬಯಸಲು ಬಂದ ಪಾಪಿ ಪಾಕಿಸ್ತಾನದ ಉಗ್ರನಿಗೂ ಭಾರತೀಯ ಯೋಧರು ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ. ಭಾರತ ಎಂದಿಗೂ ಶಾಂತಿಯನ್ನೇ ಬಯಸುತ್ತದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಆಗಸ್ಟ್ 21 ರಂದು, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ತಬಾರಕ್ ಹುಸೇನ್ ಎಂಬ ಪಾಕಿಸ್ತಾನಿ ಭಯೋತ್ಪಾದಕನನ್ನು ಭಾರತೀಯ ಸೇನೆ ಬಂಧಿಸಿತ್ತು. ಜಮ್ಮು ಪ್ರದೇಶಕ್ಕೆ ಸಮೀಪವಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಸಿಬ್ಬಂದಿ ಹುಸೇನ್ ಅವರನ್ನು ಸೆರೆಹಿಡಿದಿದ್ದಾರೆ. ಅಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರನ ಮೇಲೆ ಸೈನಿಕರು ಗುಂಡಿನ ದಾಳಿ ನಡೆಸಿದ್ದರು, ತಬಾರಕ್ ಹುಸೇನ್ ಗಾಯಗೊಂಡು ಭಾರತೀಯ ಸೇನೆಗೆ ಸೆರೆ ಸಿಕ್ಕರೆ, ಉಳಿದ ಉಗ್ರರು ತಪ್ಪಿಸಿಕೊಂಡಿದ್ದರು. ತಮ್ಮ ಜೀವ ತೆಗೆಯಲು ಬಂದವನ ಜೀವ ತೆಗೆಯುವ ಅವಕಾಶ ಭಾರತೀಯ ಸೈನಿಕರಿಗಿದ್ದರೂ, ಆತನನ್ನು ಬದುಕಿಸಿ ಆಸ್ಪತ್ರೆಗೆ ಸೇರಿಸಿದರು.

ಉಗ್ರನ ಶಸ್ತ್ರಚಿಕಿತ್ಸೆಗೆ ರಕ್ತದಾನ ಮಾಡಿದ ಸೇನಾ ಸಿಬ್ಬಂದಿ
ಬಂಧಿತ ಭಯೋತ್ಪಾದಕ ತಬಾರಕ್ ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಪ್ರದೇಶದ ಸಬ್ಜೋಟ್ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನಡೆಸಲು ಆತ ಗಡಿಯೊಳಕ್ಕೆ ನುಸುಳಲು ಯತ್ನಿಸಿದ್ದ.
ಭಾರತೀಯ ಸೇನೆಯಿಂದ ಗುಂಡೇಟು ತಿಂದ ಆತನನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಶಸ್ತ್ರಚಿಕಿತ್ಸೆಗೆ ನೆರವಾಗಲು ಭಾರತೀಯ ಸೇನಾ ಸಿಬ್ಬಂದಿ ಅವಶ್ಯವಿರು ರಕ್ತವನ್ನು ನೀಡಿದ್ದಾರೆ. ಚಿಕಿತ್ಸೆಯ ನಂತರ ಪ್ರಾಣಾಪಾಯದಿಂದ ಚೇತರಿಸಿಕೊಳ್ಳುತ್ತಿರುವ ಉಗ್ರ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ.

ಭಯೋತ್ಪಾದಕ ಕೃತ್ಯ ನಡೆಸಲು 30 ಸಾವಿರ ಹಣ
ತಬಾರಕ್ ಹುಸೇನ್ಗೆ ಭಾರತದೊಳಗೆ ನುಸುಳಿ ಭಯೋತ್ಪಾದನಾ ಕೃತ್ಯ ಎಸಗಲು ಪಾಕಿಸ್ತಾನಿ ಸೇನೆಯ ಕರ್ನಲ್ ಯೂನಸ್ ಚೌಧರಿ ಉಗ್ರನಿಗೆ 30 ಸಾವಿರ ಹಣ ನೀಡಿದ್ದಾನೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಭಾರತೀಯ ಸೇನೆಗೆ ಹೇಳಿಕೆ ನೀಡಿರುವ ಉಗ್ರ, "ನನ್ನನ್ನು ಇತರ ಮೂರ್ನಾಲ್ಕು ಭಯೋತ್ಪಾದಕರೊಂದಿಗೆ ಇಲ್ಲಿಗೆ ಕಳುಹಿಸಲಾಗಿದೆ. ಎಲ್ಒಸಿ ದಾಟಿದ ನಂತರ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಲು ಸೂಚಿಸಲಾಗಿತ್ತು" ಎಂದು ಒಪ್ಪಿಕೊಂಡಿದ್ದಾನೆ.

ಪರಾರಿಯಾದ ತಬಾರಕ್ ಹುಸೇನ್ ಸಹಚರರು
ಬಂಧಿತ ಭಯೋತ್ಪಾದಕನಿಗೆ ಗುಂಡು ಹಾರಿಸಲಾಯಿತು, ಅವನ ಸಹಚರರು ಸ್ಥಳದಿಂದ ಓಡಿಹೋಗುವಲ್ಲಿ ಯಶಸ್ವಿಯಾದರು. ಈಗ ಬಂಧಿತನಾಗಿರುವ ತಬಾರಕ್ ಹುಸೇನ್ 2016 ರಲ್ಲೂ ಭಾರತದ ಒಳನುಸುಳಿದ್ದನು, ಆದರೆ ಆಗಲೂ ಅವನು ಭಯೋತ್ಪಾದನಾ ಕೃತ್ಯ ಎಸಗಲು ಸಾಧ್ಯವಾಗಿರಲಿಲ್ಲ.
ಭಾರತೀಯ ಸೇನೆಗೆ ಸಿಕ್ಕಿಬಿದ್ದಿದ್ದ ಅವನನ್ನು ಭಾರತೀಯ ಸೇನೆ ಮಾನವೀಯತೆಯ ಆಧಾರದಲ್ಲಿ ಬಿಡುಗಡೆ ಮಾಡಿ ವಾಪಸ್ ಕಳುಹಿಸಿದ್ದರು.

ಕೆಲವು ವಾರಗಳಲ್ಲಿ ಉಗ್ರ ಗುಣಮುಖ
ಸೇನಾ ವೈದ್ಯ ರಾಜೀವ್ ನಾಯರ್ ಪ್ರಕಾರ, ಉಗ್ರನ ಜೀವವನ್ನು ಉಳಿಸಲಾಗಿದೆ. ಅವನ ಗುಂಡಿನ ಗಾಯಗಳಿಂದ ಸಂಪೂರ್ಣವಾಗಿ ಗುಣವಾಗಲು ಅವನಿಗೆ ಕೆಲವು ವಾರಗಳು ಬೇಕಾಗುತ್ತವೆ, ಭಾರತೀಯ ಸೈನಿಕರು ಚೇತರಿಸಿಕೊಳ್ಳಲು ಅವನಿಗೆ ಆಹಾರವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
"ನಮಗೆ, ಇಲ್ಲಿಗೆ ಬರುವ ಪ್ರತಿಯೊಬ್ಬರೂ ರೋಗಿಗಳೇ, ವೈದ್ಯರಾಗಿರುವುದರಿಂದ, ನಮ್ಮ ರೋಗಿಗಳ ಜೀವವನ್ನು ಉಳಿಸುವುದು ನಮ್ಮ ಪ್ರಾಥಮಿಕ ಕೆಲಸ, ನಾವು ಸೈನಿಕರಿಗಾಗಿ ಅಥವಾ ಅವರ ಜೀವವನ್ನು ಉಳಿಸಲು ಅದೇ ಪ್ರಯತ್ನವನ್ನು ಮಾಡಿದ್ದೇವೆ. ನಮ್ಮ ಭಾರತೀಯ ಸೈನಿಕರು ಅವರ ರಕ್ತವನ್ನು ದಾನ ಮಾಡಿದರು ಮತ್ತು ಅವರ ಪ್ರಾಣವನ್ನು ಉಳಿಸಿದರು. ಇದು ಭಾರತೀಯ ಸೈನಿಕರ ಶೌರ್ಯ." ಎಂದು ಹೇಳಿದರು.












Click it and Unblock the Notifications