ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ
Recommended Video

ಕನ್ನಡದಲ್ಲಿಯೂ 6 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ 54ರ ಹರೆಯದ ಬಹುಭಾಷಾ ನಟಿ ಶ್ರೀದೇವಿ (ಶ್ರೀ ಅಮ್ಮ ಯಾಂಗರ್ ಅಯ್ಯಪ್ಪನ್) ಹಠಾತ್ ನಿಧನ ಭಾರತೀಯ ಚಿತ್ರರಂಗದ ಮೇಲೆ ಬರಸಿಡಿಲಿನಂತೆ ಬಂದು ಎರಗಿದೆ.
ಅಪರೂಪದ ಸೌಂದರ್ಯ, ಅಪ್ರತಿಮ ಪ್ರತಿಭೆಯ ಸಂಗಮವಾಗಿದ್ದ ಶ್ರೀದೇವಿಯವರು ತಮ್ಮ ನಟನಾ ಕೌಶಲ್ಯದಿಂದಲೇ ಹಿಂದಿ ಚಿತ್ರರಂಗವನ್ನು ಆಳಿದವರು ಮತ್ತು ಕೋಟ್ಯಂತರ ಚಿತ್ರಪ್ರೇಮಿಗಳ ಹೃದಯ ಸಾಮ್ರಾಜ್ಞಿಯಾಗಿ ಮೆರೆದವರು.
ಚಿತ್ರರಂಗದಲ್ಲಿ ಮಿಂಚಬಯಸುವ ಯುವ ಕಲಾವಿದೆಯರಿಗೆ ಮಾದರಿಯಂತಿದ್ದ ಅವರು, ತಮ್ಮಲ್ಲಿಯೇ ಎಷ್ಟೇ ಕುಂದುಕೊರತೆಗಳಿದ್ದರೂ ಎಲ್ಲವನ್ನೂ ಮೀರಿ ಯಶಸ್ಸಿನ ಹಿಮಾಲಯವೇರಿದ್ದರು ಮತ್ತು ತಾವು ಕೂಡ ಹಲವಾರು ಕನಸುಗಳನ್ನು ಕಂಡಿದ್ದರು.
ಜೀವನವನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಅವರ ನಿಧನದಿಂದಾಗಿ ಸಂತಾಪದ ಮಹಾಪೂರವೇ ಸಾಮಾಜಿಕ ತಾಣದಲ್ಲಿ ಹರಿದುಬರುತ್ತಿದೆ. ಭಾಷೆ, ಗಡಿಯನ್ನೂ ಮೀರಿ ಬೆಳೆದಿದ್ದ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
|
ಪ್ರಧಾನಿ ನರೇಂದ್ರ ಮೋದಿ ಸಂತಾಪ
ಖ್ಯಾತ ನಟಿ ಶ್ರೀದೇವಿಯವರ ಅಕಾಲಿಕ ಮರಣದಿಂದಾಗಿ ತುಂಬಾ ದುಃಖವಾಗಿದೆ. ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಅವರು ವಿಭಿನ್ನ ಪಾತ್ರಗಳಲ್ಲಿ ನೆನಪಿನಲ್ಲುಳಿಯುವಂಥ ನಟನೆ ನೀಡಿದ್ದರು. ಈ ಸಂಕಷ್ಟಮಯ ಸಮಯದಲ್ಲಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನನ್ನ ಸಂತಾಪವಿದೆ - ನರೇಂದ್ರ ಮೋದಿ
|
ತರಣ್ ಆದರ್ಶ್, ಹಿಂದಿ ಸಿನೆಮಾ ವಿಮರ್ಶಕ
ನನ್ನ ಹೃದಯ ಛಿದ್ರವಾಗಿದೆ. ಶ್ರೀದೇವಿಯವರ ನಿಧನದಿಂದ ತೀವ್ರ ಆಘಾತವಾಗಿದೆ, ದುಃಖವಾಗಿದೆ. ಅವರು ಸತ್ತಿದ್ದಾರೆಂದು ನಂಬಲೇ ಆಗುತ್ತಿಲ್ಲ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು - ತರಣ್ ಆದರ್ಶ್, ಹಿಂದಿ ಸಿನೆಮಾ ವಿಮರ್ಶಕ.
|
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
ಶ್ರೀದೇವಿಯವರ ನಿಧನದ ಸುದ್ದಿ ಕೇಳಿ ತುಂಬಾ ಆಘಾತವಾಗಿದೆ. ಅವರ ಸಾವು ಲಕ್ಷಾಂತರ ಅಭಿಮಾನಿಗಳ ಹೃದಯ ಬಿರಿಯುವಂತೆ ಮಾಡಿದೆ. ಮೂಂಡ್ರಂ ಪಿರೈ, ಲಮ್ಹೆ, ಇಂಗ್ಲಿಷ್ ವಿಂಗ್ಲಿಷ್ ನಂಥ ಚಿತ್ರಗಳಲ್ಲಿ ಅವರ ನಟನೆ ಎಲ್ಲ ಕಲಾವಿದರಿಗೆ ಸ್ಫೂರ್ತಿಯಾಗಿರುತ್ತದೆ. ಅವರ ಕುಟುಂಬಕ್ಕೆ ಮತ್ತು ಆಪ್ತರಿಗೆ ನನ್ನ ಸಂತಾಪಗಳು - ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್.
|
ಖ್ಯಾತ ನಟ ರಜನಿಕಾಂತ್
ಶ್ರೀದೇವಿ ವಿಧಿವಶರಾಗಿದ್ದು ಕೇಳಿ ತೀವ್ರ ಶಾಕ್ ಆಗಿದೆ, ಡಿಸ್ಟರ್ಬ್ಡ್ ಆಗಿದ್ದೇನೆ. ನಾನು ಆತ್ಮೀಯ ಸ್ನೇಹಿತೆಯನ್ನು ಕಳೆದುಕೊಂಡಿದ್ದೇನೆ. ಚಿತ್ರರಂಗ ಉತ್ಕೃಷ್ಟ ಕಲಾವಿದೆಯನ್ನು ಕಳೆದುಕೊಂಡಿದೆ. ನನ್ನ ಹೃದಯ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ಮಿಡಿಯುತ್ತಿದೆ. ಅವರ ದುಃಖದಲ್ಲಿ ನಾನೂ ಭಾಗಿ. ಯು ವಿಲ್ ಬಿ ಮಿಸ್ಡ್ - ಖ್ಯಾತ ನಟ ರಜನಿಕಾಂತ್
|
ಅಂತಿಮ ಕ್ಷಣಗಳ ವಿಡಿಯೋ
ಶ್ರೀದೇವಿ ಅವರ ಅಂತಿಮ ಕ್ಷಣಗಳ ವಿಡಿಯೋ ಇಲ್ಲಿದೆ. ದುಬೈನಲ್ಲಿ ಸಂಬಂಧಿ ಮೋಹಿತ್ ಮಾರ್ವಾ ಎಂಬುವವರ ಮದುವೆಯಲ್ಲಿ ಅವರು ಭಾಗಿಯಾಗಿದ್ದರು. ಅಂತಿಮ ಕ್ಷಣದವರೆಗೂ ಆರೋಗ್ಯವಂತರಂತೆಯೇ ಅವರು ಕಂಡುಬರುತ್ತಿದ್ದರು.
|
ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್
ಅದ್ಭುತ ನಟಿ ಶ್ರೀದೇವಿಯವರ ಅಕಾಲಿಕ ನಿಧನದಿಂದ ಅತೀವ ದುಃಖ ಆವರಿಸಿಕೊಂಡಿದೆ. ಹಿಂದಿ ಚಿತ್ರರಂಗಕ್ಕೆ ಅವರು ನೀಡಿದ ಕಾಣಿಕೆಯನ್ನು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಹಲವಾರು ಪೀಳಿಗೆಯ ವರೆಗೆ ಅವರ ನಟನೆ ನೆನಪಿನಲ್ಲುಳಿಯುವಂಥದ್ದು. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ - ಪಿಯೂಶ್ ಗೋಯಲ್, ರೈಲ್ವೆ ಸಚಿವ.
|
ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
ಭಾರತದ ಫೆವರಿಟ್ ನಟಿ ಶ್ರೀದೇವಿಯವರ ಅಕಾಲಿಕ ಮರಣದ ಸುದ್ದಿ ಕೇಳಿ ತುಂಬಾ ಶಾಕ್ ಆಗಿದೆ. ಅವರು ಅಪಾರ ಪ್ರತಿಭಾವಂತೆಯಾಗಿದ್ದರು ಮತ್ತು ಯಾವುದೇ ರೀತಿಯ ಪಾತ್ರ, ಭಾಷೆಯಿದ್ದರೂ ಸುಲಲಿತವಾಗಿ ನಟಿಸುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪ ಮತ್ತು ಅವರ ಆತ್ಮಕ್ಕೆ ಶಾಂತಿ - ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ.












Click it and Unblock the Notifications