'ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದ ಉಗ್ರರಿಗೆ ತಕ್ಕಶಾಸ್ತಿ'
ಬೆಂಗಳೂರು, ಮೇ 07: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವುದು ಆಪರೇಷನ್ ಸಿಂಧೂರ ಕೇವಲ ದಾಳಿಯಲ್ಲ, ಇದು ಭಾರತದ ಸಾರ್ವಭೌಮತ್ವದ ಸಂಕೇತ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಭೀತ ನಾಯಕತ್ವಕ್ಕೆ ಅವರು ಧನ್ಯವಾದಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; "ಆಪರೇಷನ್ ಸಿಂಧೂರ್" ಇದು ಕೇವಲ ಒಂದು ದಾಳಿಯಲ್ಲ, ಇದು ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂಧೂರ. ಭಾರತ ಹೊಡೆದಾಗ ಜಗತ್ತು ನೋಡುತ್ತದೆ... ಮತ್ತು ಸ್ವಲ್ಪ ನಡುಗುತ್ತದೆ ಎಂದರು. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನಿರ್ಭೀತ ನಾಯಕತ್ವಕ್ಕೆ ನನ್ನ ನಮನಗಳು. ನವಭಾರತವು ಎಚ್ಚರಿಸುವುದಷ್ಟೇ ಅಲ್ಲ, ಅದು ತನ್ನ ಕರ್ತವ್ಯ ನಿರ್ವಹಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಇನ್ನೂ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್ ಅವರು ಮಾತನಾಡಿ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆಗಳು ಕಳೆದ ತಡರಾತ್ರಿ ನಡೆಸಿದ ಏರ್ ಸ್ಟ್ರೈಕ್ ಪಾಕ್ ಪ್ರೇರಿತ ಉಗ್ರ ಚಟುವಟಿಕೆಗೆ ನೀಡಿದ ದಿಟ್ಟ ಪ್ರತಿಕಾರ. ಈ ದಾಳಿಯಲ್ಲಿ ನೂರಾರು ಉಗ್ರರು ಹತರಾಗಿದ್ದು ಭಾರತದ ಜತೆಗೆ ಪಾಕಿಸ್ತಾನ ಇನ್ನೆಂದು ಕುಚೋದ್ಯ ನೀಡದಂತ ಪೆಟ್ಟು ನೀಡಲಿ ಎಂದು ಆಶಿಸುತ್ತೇನೆ. ದೇಶ ಈಗ ಯುದ್ಧದಂಥ ಸ್ಥಿತಿಯನ್ನು ಎದುರಿಸುತ್ತಿದ್ದು ದೇಶದೊಳಗೂ ಕೆಲ ವಿಚ್ಛಿದ್ರಕಾರಿ ಮನಸುಗಳು ವಿಷಕಕ್ಕುವ ಕೆಲಸ ಮಾಡಬಹುದು. ಇವರ ಬಗ್ಗೆ ಜಾಗೃತರಾಗಿರುತ್ತಾ, ಕೇಂದ್ರ ಸರ್ಕಾರ ನೀಡುವ ಭದ್ರತಾ ಸೂಚನೆಗಳನ್ನು ಪಾಲಿಸುತ್ತಾ ದೇಶದ ಭದ್ರತೆ ಹಾಗೂ ಸಾರ್ವಭೌಮತೆಯ ಜತೆಗೆ ಗಟ್ಟಿಯಾಗಿ ನಿಲ್ಲೋಣ ಎಂದರು.

ಕಾಂಗ್ರೆಸ್ ಶಾಸಕಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಸೂಕ್ತ ಪ್ರತ್ಯುತ್ತರ. ಪಹಲ್ಗಾಮ್ನಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಹಣೆಯಿಂದ ಒರೆಸಿದ ಸಿಂಧೂರಕ್ಕೆ ಸೇಡು ತೀರಿಸಿಕೊಳ್ಳುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಗೌರವಕ್ಕೆ ಎಂತಹ ಶಕ್ತಿಶಾಲಿ ಮತ್ತು ಸೂಕ್ತವಾದ ಹೆಸರು. ನಾವು ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತೇವೆ, ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಸೇನೆ ನಮ್ಮ ಹೆಮ್ಮ: ಜಮೀರ್ ಅಹಮದ್ ಖಾನ್
ಪೆಹಲ್ಗಮ್ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್ ' ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನ ಕ್ಕೆ ತಕ್ಕ ಪಾಠ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನ ಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆ ಯಾಗಿದೆ. 'ನಮ್ಮ ಸೇನೆ ನಮ್ಮ ಹೆಮ್ಮೆ' ಎಂದು ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜತೆ ಇದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications