ಪಾಕ್ ರಾಯಭಾರ ಕಚೇರಿಯಲ್ಲಿದ್ದ ಇಬ್ಬರು ಸ್ಪೈಗಳು ಹೊರಕ್ಕೆ
ನವದೆಹಲಿ, ಜೂನ್ 1: ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು 24 ಗಂಟೆಯೊಳಗೆ ಪಾಕಿಸ್ತಾನಕ್ಕೆ ತೆರಳುವಂತೆ ಗೃಹ ಸಚಿವಾಲಯ ನಿರ್ದೇಶಿಸಿದೆ.
ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿದ್ದುಕೊಂಡು ಪಾಕ್ ಪರ ಬೇಹುಗಾರಿಕೆ ನಡೆಸಿದ ಆರೋಪವನ್ನು ಇಬ್ಬರು ಅಧಿಕಾರಿಗಲ ಮೇಲೆ ಹೊರೆಸಲಾಗಿದೆ. ಪಾಕಿಸ್ತಾನದ ಐಎಸ್ಐ ಪರ ಕಾರ್ಯ ನಿರ್ವಹಿಸುತ್ತಿರುವ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ, ಇಬ್ಬರು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ) ಪರ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ, ತಕ್ಶಣಾವೇ ಇಬ್ಬರನ್ನು ಪಾಕಿಸ್ತಾನಕ್ಕೆ ವಾಪಸ್ ಆಗುವಂತೆ ಸೂಚಿಸಲಾಗಿದೆ.
ನಕಲಿ ಆಧಾರ್ ಹೊಂದಿದ್ದರು
ಆರೋಪ ಹೊತ್ತಿರುವ ಅಬಿದ್ ಹುಸೇನ್ ಹಾಗೂ ಮುಹಮ್ಮದ್ ತಾಹೀರ್ ಇಬ್ಬರನ್ನು ಗುರುತಿಸಿ, ವಿಚಾರಣೆಗೊಳಪಡಿಸಿದಾಗ ತಾವು ಭಾರತೀಯ ನಾಗರೀಕರು ಎಂದು ಹೇಳಿ ಅಚ್ಚರಿ ಮೂಡಿಸಿದರು.

ಮಿಲಿಟರಿ ಗುಪ್ತಚರ ಇಲಾಖೆ, ದೆಹಲಿ ಸ್ಪೆಷಲ್ ಸೆಲ್, ಗುಪ್ತಚರ ಇಲಾಖೆ(ಐಬಿ) ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು. ಇಬ್ಬರ ಬಳಿ ನಕಲಿ ಆಧಾರ್ ಕಾರ್ಡ್, ಸ್ಥಳೀಯ ನಿವಾಸಿಗಳು ಎನ್ನಲು ಬೇಕಾದ ಎಲ್ಲಾ ದಾಖಲೆಗಳಿರುವುದು ಕಂಡು ಬಂದಿದೆ. ನಕಲಿ ದಾಖಲೆಗಳನ್ನು ಹೊಂದಿದ್ದಲ್ಲದೆ, ಪಾಕ್ ಪರ ಬೇಹುಗಾರಿಕೆ ನಡೆಸಿದ ಇವರನ್ನು persona-non granta ಅಡಿಯಲ್ಲಿ ರಾಯಭಾರ ಕಚೇರಿ ಹುದ್ದೆಯಿಂದ ಕೆಳಗಿಳಿಸಿ ಅವರ ದೇಶಕ್ಕೆ ಮರಳಲು ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಒಂದು ವರ್ಷದ ಕಾರ್ಯಾಚರಣೆ
ಈ ಇಬ್ಬರು ಅಧಿಕಾರಿಗಳ ಮೇಲೆ ಗುಮಾನಿ ಬಂದರೂ ಸೂಕ್ತ ದಾಖಲೆ ಇಲ್ಲದೆ ಆರೋಪ ಮಾಡುವಂತಿರಲಿಲ್ಲ. ಕಳೆದ ಒಂದು ವರ್ಷದಿಂದ ಭಾರತದ ಬೇಹುಗಾರಿಕೆ, ಗುಪ್ತಚರ ಸಂಸ್ಥೆ ಅಧಿಕಾರಿಗಳು ಇವರಿಬ್ಬರ ಮೇಲೆ ಕಣ್ಣಿಟ್ಟು, ಚಲನವಲನಗಳನ್ನು ಪರಿಶೀಲಿಸುತ್ತಿದ್ದರು.

42 ವರ್ಷ ವಯಸ್ಸಿನ ಅಬಿದ್ ಇತ್ತೀಚೆಗೆ ತಾಹೀರ್ ಎಂಬಾತನ ಜೊತೆ ಕರೋಲ್ ಬಾಗ್ ನಲ್ಲಿ ವ್ಯವಹಾರ ನಡೆಸುವಾಗ ಸಿಕ್ಕಿ ಬಿದ್ದಿದ್ದ. 36 ವರ್ಷದ ಜಾವೇದ್ ಅಖ್ತರ್ ಕೂಡಾ ನಕಲಿ ದಾಖಲೆ ಜೊತೆಗೆ ಸಿಕ್ಕಿಬಿದ್ದಿದ್ದರಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.
ಆದರೆ, ಭಾರತದ ಕ್ರಮವನ್ನು ಪ್ರಶ್ನಿಸಿರುವ ಪಾಕಿಸ್ತಾನ, ರಾಯಭಾರ ಕಚೇರಿ ಅಧಿಕಾರಿಗಳು ಅಂತಾರಾಷ್ಟ್ರೀಯ ಕಾನೂನು ಹಾಗೂ ರಾಯಭಾರ ನೀತಿ ನಿಯಮಗಳಿಗೆ ಬದ್ಧರಾಗಿದ್ದರು, ಭಾರತದ ಆರೋಪಗಳೆಲ್ಲವೂ ಸುಳ್ಳು ಎಂದಿದೆ.












Click it and Unblock the Notifications