ಚೀನಾ-ಭಾರತ ನಡುವೆ ಜ.12ರಂದು 14ನೇ ಸುತ್ತಿನ ಮಾತುಕತೆ
ನವದೆಹಲಿ, ಜನವರಿ 08: ಗಡಿ ಬಿಕ್ಕಟ್ಟಿನ ಕುರಿತು ಭಾರತ ಮತ್ತು ಚೀನಾ ಜನವರಿ 12 ರಂದು 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆಗಳನ್ನು ನಡೆಸುವ ಸಾಧ್ಯತೆಯಿದೆ.
ಉಭಯ ದೇಶಗಳ ನಡುವಿನ ಘರ್ಷಣೆ ಬಿಂದುವಾಗಿರುವ ಹಾಟ್ ಸ್ಪ್ರಿಂಗ್ಸ್ ಪ್ರದೇಶದ ವಿವಾದ ಪರಿಹರಿಸಲು 14 ನೇ ಸುತ್ತಿನ ಭಾರತ-ಚೀನಾ ಮಾತುಕತೆಗಳು ಜನವರಿ 12 ರಂದು ನಡೆಯುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಪೂರ್ವ ಲಡಾಖ್ ಪ್ರದೇಶದಲ್ಲಿನ ವಿವಾದಿತ ಪ್ರದೇಶ ಕುರಿತು ಇಲ್ಲಿಯವರೆಗೂ ಉಭಯ ದೇಶಗಳ ನಡುವೆ 13 ಸುತ್ತಿನ ಮಾತುಕತೆ ನಡೆಸಲಾಗಿದೆ.
ಕಳೆದ ವರ್ಷ ಚೀನಾದ ಆಕ್ರಮಣ ನಂತರ ಹೊರಹೊಮ್ಮಿದ ಹಾಟ್ ಸ್ಪ್ರಿಂಗ್ಸ್ ಘರ್ಷಣೆ ಕುರಿತ ನಿರ್ಣಯವನ್ನು ಉಭಯ ದೇಶಗಳು ಎದುರು ನೋಡುತ್ತಿವೆ. ಪ್ಯಾಂಗೊಂಗ್ ಸರೋವರ ಮತ್ತು ಗೋಗ್ರಾ ಎತ್ತರದ ದಡದಲ್ಲಿನ ಘರ್ಷಣೆ ಬಿಂದುಗಳನ್ನು ಪರಿಹರಿಸಲಾಗಿದೆ ಆದರೆ ಹಾಟ್ ಸ್ಪ್ರಿಂಗ್ಸ್ ಘರ್ಷಣೆಯನ್ನು ಪರಿಹರಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಸೇನೆಯ ನೂತನ 14 'ಫೈರ್ ಅಂಡ್ ಫ್ಯೂರಿ' ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಗಿ ಅನಿಂಧ್ಯಾ ಸೇನ್ಗುಪ್ತಾ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ಮಾತುಕತೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಅವರು ಮಂಗಳವಾರವಷ್ಟೇ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.
ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಚೀನಾದ ಕಡೆಯವರು ಪರಿಗಣಿಸುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ, ಹಾಗೆಯೇ, ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಶಿಷ್ಟಾಚಾರವನ್ನು ಸಂಪೂರ್ಣವಾಗಿ ಅನುಸರಿಸಿ, ಉಳಿದ ಸಮಸ್ಯೆಗಳ ಪರಿಹಾರದತ್ತ ಕೆಲಸ ಮಾಡುತ್ತಾರೆ ಎಂದು ನಾವು ಎದುರು ನೋಡುತ್ತಿದ್ದೇವೆ ಎಂದು ಭಾರತ ಸೇನೆ ಭರವಸೆ ವ್ಯಕ್ತಪಡಿಸಿತ್ತು.
ಗಾಲ್ವಾನ್ ಕಣಿವೆಯಲ್ಲಿ ಉಂಟಾಗಿದ್ದ ಸಂಘರ್ಷದ ನಂತರ ಎರಡೂ ದೇಶಗಳ ನಡುವೆ 13 ಸುತ್ತಿನ ಮಿಲಿಟರಿ ಮಾತುಕತೆ ನಡೆದಿದೆ. ಆದರೆ, ಈವರೆಗೆ ಇದು ಯಶಸ್ವಿಯಾಗಿಲ್ಲ, ಕಳೆದ ಬಾರಿ ಪೂರ್ವ ಲಡಾಖ್ನ ನೈಜ ನಿಯಂತ್ರಣ ರೇಖೆಯ ಚೀನಾದ ಬದಿಯ ಚುಶುರ್-ವೊಲ್ಡೊ ಗಡಿಯಲ್ಲಿ 13ನೇ ಸುತ್ತಿನ ಮಾತುಕತೆ ನಡೆದಿತ್ತು. ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆದ ಸಭೆ ಅಂತಿಮವಾಗಿ ವಿಫಲವಾಗಿತ್ತು.
ಗಡಿ ಸಂಘರ್ಷ ಕೊನೆಗಾಣಿಸಬಹುದಾದ ಯಾವುದೇ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲು, ಚೀನಿ ಸೇನೆ ಸುತಾರಂ ತಯಾರಿಲ್ಲ ಎಂದು ಭಾರತೀಯ ಸೇನೆಯ ವಕ್ತಾರರು ತಿಳಿಸಿದ್ದಾರೆ. ಸೈನ್ಯ ಜಮಾವಣೆಯ ತನ್ನ ಪಟ್ಟನ್ನು ಚೀನಾ ಸಡಿಲಿಸದಿರುವುದೇ ಸಮಸ್ಯೆ ಮತ್ತು ಕಗ್ಗಂಟಾಗಲು ಕಾರಣ ಎನ್ನಲಾಗಿದೆ.
ಕೋರ್ ಕಮಾಂಡರ್ಗಳ 13ನೇ ಸುತ್ತಿನ ಮಾತುಕತೆ ವೇಳೆ ಗಡಿ ಬಿಕ್ಕಟ್ಟು ಶಮನಗೊಳಿಸಲು, ಭಾರತೀಯ ಸೇನೆ ನೀಡಿದ ಎಲ್ಲಾ ರಚನಾತ್ಮಕ ಸಲಹೆಗಳನ್ನು ಚೀನಿ ಸೇನೆ ತಿರಸ್ಕರಿತ್ತು. ಅಲ್ಲದೇ ಗಡಿ ಬಿಕ್ಕಟ್ಟಿಗೆ ಮೂಲ ಕಾರಣವಾದ ಸೈನ್ಯ ಜಮಾವಣೆ ಪ್ರಕ್ರಿಯೆಯನ್ನು ನಿಲ್ಲಿಸಲು ಡ್ರ್ಯಾಗನ್ ಒಪ್ಪುತ್ತಿಲ್ಲ ಎಂದು ಮೂಲಗಳು ತಿಳಿಸಿತ್ತು.
ಪರಸ್ಪರ ಸಂವಹನ ಪ್ರಕ್ರಿಯೆ ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಗಡಿ ಪರಿಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಉಭಯ ಸೇನೆ ಸಮ್ಮತಿ ಸೂಚಿಸಿವೆ. ಆದರೆ ಸಮಸ್ಯೆ ಪರಿಹಾರಕ್ಕೆ ಭಿನ್ನ ನಿಲುವುಗಳನ್ನು ಪ್ರದರ್ಶಿಸಿವೆ ಎಂಬ ಮಾಹಿತಿ ಬಂದಿದೆ. ಚೀನಿ ಸೇನೆ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇರುವುದಾಗಿ ಭಾರತೀಯ ಸೇನೆ ಹೇಳಿದೆ.
ಸೈನ್ಯ ಜಮಾವಣೆ ಮೂಲಕ ಗಡಿ ಸಮಸ್ಯೆಯನ್ನು ಜೀವಂತವಾಗಿರಿಸಿರುವುದು ಚೀನಿ ಸೇನೆಯ ಉದ್ದೇಶ ಇದ್ದಂತಿದೆ. ಭಾರತದೊಂದಿಗೆ ಒಂದು ಸುದೀರ್ಘ ಗಡಿ ಸಂಘರ್ಷಕ್ಕೆ ಚೀನಾ ಯೋಜನೆ ರೂಪಿಸಿದಂತಿದೆ. ಚೀನಾದ ಈ ಯೋಜನೆಗಳಿಗೆ ಹಲವು ಆಯಾಮಗಳಿರುವುದು ಸ್ಪಷ್ಟ. ಒಂದು, ಭಾರತದೊಂದಿಗಿನ ನಿರಂತರ ಗಡಿ ಸಂಘರ್ಷ ಜಾಗತಿಕವಾಗಿ ಗಮನ ಸೆಳೆಯುವಂತದ್ದು. ಎರಡನೇಯದಾಗಿ ಒಂದು ವೇಳೆ ತಾನು ತೈವಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಿಳಿದರೆ, ಭಾರತವೂ ಸೇರಿದಂತೆ ಜಗತ್ತಿನ ಪ್ರಬಲ ರಾಷ್ಟ್ರಗಳ ಗಮನ ಆ ಕಡೆ ಸೆಳೆಯದಿರಲಿ ಎಂಬುದು ಡ್ರ್ಯಾಗನ್ ನಿಲುವು.
ಭಾರತದ ಲಡಾಖ್ ಪ್ರದೇಶದ ಆಯಕಟ್ಟಿನ ಗಲ್ವಾನ್ ನದಿ ಕಣಿವೆಯಲ್ಲಿ, ಕಳೆದ ವರ್ಷ ಜೂನ್ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಮಾರಣಾಂತಿಕ ಗಡಿ ಯುದ್ಧದ ನಂತರ ಪರಮಾಣು ಸಶಸ್ತ್ರ ನೆರೆ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಸುದೀರ್ಘ ಗಡಿ ಕ್ಯಾತೆ ಜಾಗತಿಕವಾಗಿ ಗಮನ ಸೆಳೆದಿದೆ. ಅಲ್ಲದೇ ಭಾರತದ ಪರ ವಿಶ್ವದ ಹಲವು ರಾಷ್ಟ್ರಗಳು ಧ್ವನಿ ಎತ್ತಿವೆ.
ಗಡಿ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ನಿರಂತರ ಪ್ರಯತ್ನದಲ್ಲಿದ್ದರೆ, ಚೀನಾ ಮಾತ್ರ ಗಡಿ ಸಮಸ್ಯೆಯನ್ನು ಜೀವಂತವಾಗಿರಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಸದ್ಯ 13ನೇ ಸುತ್ತಿನ ಮಿಲಿಟರಿ ಮಾತುಕತೆ ವಿಫಲಗೊಂಡಿದ್ದು, ಮುಂದಿನ ಮಾತುಕತೆ ವೇಳೆಯಾದರೂ ಗಡಿ ಸಮಸ್ಯೆಗೆ ಪರಿಹಾರ ಸಿಗಲಿ ಎಂಬುದು ಎಲ್ಲರ ಆಶಯವಾಗಿದೆ.












Click it and Unblock the Notifications