ಜಾರ್ಖಂಡ್ನ ಕಾಂಗ್ರೆಸ್ ಶಾಸಕರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಶೋಧ
ರಾಂಚಿ, ನವೆಂಬರ್ 4: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಕಾಂಗ್ರೆಸ್ ಶಾಸಕ ಕುಮಾರ್ ಜೈಮಂಗಲ್ ಸಿಂಗ್ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಶುಕ್ರವಾರ ಶೋಧ ಕಾರ್ಯ ಕೈಗೊಂಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜಾರಿ ನಿರ್ದೇಶನಾಲಯದಿಂದ (ಇಡಿ) ಸಮನ್ಸ್ ಜಾರಿಯಾಗಿತ್ತು. ಗುರುವಾರ ನಡೆಯಬೇಕಿದ್ದ ಇಡಿ ವಿಚಾರಣೆಗೆ ಸೊರೆನ್ ಅವರು ಹಾಜರಾಗಿರಲಿಲ್ಲ. ಇಡಿ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದರು. ಈ ಘಟನೆ ನಡೆದ ಮರುದಿನವೇ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಶಾಸಕರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಕುಮಾರ್ ಜೈಮಂಗಲ್ ಸಿಂಗ್ ಅವರು ಜಾರ್ಖಂಡ್ ಕಾಂಗ್ರೆಸ್ ಘಟಕದ ಪ್ರಭಾವಿ ನಾಯಕರು. ಅವರು 2009ರಲ್ಲಿ ರಾಜ್ಯ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2012 ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದರು. 2020 ರಲ್ಲಿ ಮೊದಲ ಬಾರಿ ಶಾಸಕರಾದರು.
2013ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈಗ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.
ಇಡಿ ವಿಚಾರಣೆಗೆ ಹಾಜರಾಗದ ಸೊರೆನ್
ಜಾರ್ಖಂಡ್ ಮುಖ್ಯಮಂತ್ರಿ ಇಡಿ ವಿಚಾರಣೆಗೆ ಹಾಜರಾಗಿಲ್ಲ. ಈ ವಿಚಾರವಾಗಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಇವತ್ತು ಛತ್ತೀಸ್ಗಢದಲ್ಲಿ ನನ್ನ ಕಾರ್ಯಕ್ರಮ ಇದೆ. ಇದೇ ಸಮಯದಲ್ಲಿ ಇಡಿ ನನ್ನನ್ನು ಕರೆದಿದೆ. ನಾನು ಅಷ್ಟು ದೊಡ್ಡ ಅಪರಾಧ ಮಾಡಿದ್ದರೆ, ಅವರು ಬಂದು ನನ್ನನ್ನು ಬಂಧಿಸಲಿ' ಎಂದು ಹೇಳಿದ್ದರು.
'ಇಡಿ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಏಕೆ, ನೀವು(ಇಡಿ ಅಧಿಕಾರಿಗಳು) ಜಾರ್ಖಂಡ್ ಜನರಿಗೆ ಹೆದರುತ್ತೀರಾ?' ಎಂದು ಸೊರೆನ್ ಪ್ರಶ್ನಿಸಿದ್ದಾರೆ.