ಭಾರತದ ವಿವಾದಿತ ವಿದೇಶಾಂಗ ಖಾತೆ ಮಂತ್ರಿಗಳು
ನವದೆಹಲಿ, ಜೂ.16: ಆರ್ಥಿಕ ಅವ್ಯವಹಾರ ಆರೋಪಿ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿಗೆ ನೆರವಾಗಿದ್ದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಕಷ್ಟ ಎದುರಿಸುತ್ತಿದ್ದಾರೆ.
ಸುಮಾರು 700 ಕೋಟಿ ರು ಮನಿ ಲಾಂಡ್ರಿಂಗ್, ತೆರಿಗೆ ವಂಚನೆ ಆರೋಪ ಹೊತ್ತಿರುವ ಲಲಿತ್ ಮೋದಿ ಅವರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡಿದ್ದಾಗಿ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಸುಷ್ಮಾ ಬೆನ್ನಿಗೆ ರಾಜನಾಥ್ ಸಿಂಗ್, ಅಮಿತ್ ಶಾ, ಶಿವಸೇನೆ ನಿಂತಿದೆ. ವಿಪಕ್ಷಗಳ ಪೈಕಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ತಿರುಗೇಟು ನೀಡುತ್ತಿವೆ. ವಾಕ್ಸಮರ ಸಾಮಾಜಿಕ ಜಾಲ ತಾಣಗಳಲ್ಲೂ ಮುಂದುವರೆದಿದೆ.
ಈ ಸಂದರ್ಭದಲ್ಲಿ ವಿವಾದಗಳನ್ನು ಮೈಮೇಲೆ ಹೊತ್ತುಕೊಂಡ ವಿದೇಶಾಂಗ ಸಚಿವ, ಸಚಿವೆಯರ ಪಟ್ಟಿ ಇಲ್ಲಿದೆ ನೋಡಿ...

ಕುವರ್ ನಟ್ವರ್ ಸಿಂಗ್
2004ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದ ಕುವರ್ ನಟ್ವರ್ ಸಿಂಗ್ ಅವರು ಅಧಿಕಾರ ವಹಿಸಿಕೊಂಡು 18 ತಿಂಗಳ ನಂತರ ರಾಜೀನಾಮೆ ಸಲ್ಲಿಸಬೇಕಾಯಿತು.
ಇರಾಕಿನ ಇಂಧನ ಹಗರಣದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನಟ್ವರ್ ಸಿಂಗ್ ಅವರ ಹೆಸರು ಕೇಳಿ ಬಂದಿತು. ವಿಶ್ವಸಂಸ್ಥೆಯ ವೊಲ್ಕರ್ ಸಮಿತಿ ಈ ಬಗ್ಗೆ ವರದಿ ನೀಡಿತ್ತು.

ಎಸ್ ಎಂ ಕೃಷ್ಣ
* ಕರ್ನಾಟಕದ ಮಾಜಿ ಸಿಎಂ ಎಸ್ಎಂಕೃಷ್ಣ ಅವರು ಮೇ 2009 ರಿಂದ ಅಕ್ಟೋಬರ್ 2012 ತನಕ ವಿದೇಶಾಂಗ ಸಚಿವರಾಗಿದ್ದರು.
* ವಿಶ್ವಸಂಸ್ಥೆಯಲ್ಲಿ ತಪ್ಪು ಭಾಷಣ ಓದಿ ಮೂರು ನಿಮಿಷಗಳ ನಂತರ ಮನವರಿಕೆ ಮಾಡಿಕೊಂಡು ಮುಜುಗರ ಅನುಭವಿಸಿದರು.
* ಯುಎನ್ ಸೆಕ್ಯುರಿಟಿ ಕೌನ್ಸಿಲ್ ಮುಂದೆ ಪೋರ್ಚುಗೀಸ್ ವಿದೇಶಾಂಗ ಸಚಿವರ ಭಾಷಣವನ್ನು ಓದಿದ್ದು ಕೃಷ್ಣ ಅವರ ತಲೆದಂಡ ಕಾರಣವಾಯಿತು.

ಶಶಿ ತರೂರ್, ರಾಜ್ಯ ಸಚಿವ
ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ವಿವಾದದಲ್ಲಿ ಸಿಲುಕಿ ಲಲಿತ್ ಮೋದಿ ವಿರುದ್ಧ ನಿಂತರು. ಶಶಿ ಅವರ ಪತ್ನಿ ಸುನಂದಾ ಪುಷ್ಕರ್ ಅವರು ಕೇರಳ ಟಾಸ್ಕರ್ ತಂಡದಲ್ಲಿ ಹೊಂದಿದ್ದ ಷೇರುಗಳ ಅಕ್ರಮದ ಬಗ್ಗೆ ಭಾರಿ ವಿವಾದ ಏರ್ಪಟ್ಟ ಹಿನ್ನೆಲೆಯಲ್ಲಿ ಶಶಿ ಅವರು ರಾಜೀನಾಮೆ ಸಲ್ಲಿಸಿದರು.

ಸುಷ್ಮಾ ಸ್ವರಾಜ್
ಐಪಿಎಲ್ ಹಗರಣದ ಆರೋಪ ಹೊತ್ತಿರುವ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್ ನಲ್ಲಿ ನೆಲೆಸಿದ್ದರು. ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಲಂಡನ್ ನಿಂದ ಪೋರ್ಚುಗಲ್ ತೆರಳಲು ಅನುಮತಿ ಬೇಕಿತ್ತು. ಲಲಿತ್ ಅವರಿಗೆ ಬ್ರಿಟಿಷ್ ಸರ್ಕಾರದಿಂದ ಅನುಮತಿ ಸಿಗಲು ಸುಷ್ಮಾ ಕಾರಣರಾಗಿದ್ದರು. ಆದರೆ, ಇದರಲ್ಲಿ ಮಾನವೀಯ ನೆಲೆ ಇಲ್ಲ, ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ.

ವಿಕೆ ಸಿಂಗ್ ರಾಜ್ಯ ಸಚಿವ
ನಿವೃತ್ತ ಜನರಲ್ ವಿಕೆ ಸಿಂಗ್ ಅವರು ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿ ಪಾಕಿಸ್ತಾನದ ರಾಯಭಾರಿ ಕಚೇರಿಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದು ಟೀಕೆಗೆ ಗುರಿಯಾಯಿತು.
ಇದಾದ ಬಳಿಕ ಮಾಧ್ಯಮಗಳ ವಿರುದ್ಧ ಕಿಡಿಕಾರಿ #presstitutes ಎಂಬ ಪದ ಬಳಿಸಿ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾದರು. ಯುದ್ಧಪೀಡಿತ ಯೆಮನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತಂದ ವಿಕೆ ಸಿಂಗ್ ಅವರು ಮಾಧ್ಯಮಗಳನ್ನು ಎದುರು ಹಾಕಿಕೊಂಡರು.












Click it and Unblock the Notifications